Site icon Vistara News

ಮಾಜಿ ಆಟಗಾರರಿಗೂ ಹೊಸ ನಿಯಮ ಜಾರಿಗೆ ಮುಂದಾದ ಬಿಸಿಸಿಐ; ಮುಂದಿನ ವಾರವೇ ಜಾರಿ ಸಾಧ್ಯತೆ​

bcci logo

ಮುಂಬಯಿ: ಭಾರತೀಯ ಕ್ರಿಕೆಟ್​ ಮಂಡಳಿ(ಬಿಸಿಸಿಐ) ಆಟಗಾರರ ಮೇಲೆ ಹಲವು ನಿರ್ಬಂಧಗಳನ್ನು ಪಾಲಿಸುತ್ತಿದೆ. ಅದರಂತೆ ಬಿಸಿಸಿಐ ಅನುಮತಿ ಇಲ್ಲದೆ ಯಾವುದೇ ವಿದೇಶಿ ಲೀಗ್​ನಲ್ಲಿ ಭಾರತೀಯ ಆಟಗಾರರು ಪಾಲ್ಗೊಳ್ಳುವಂತಿಲ್ಲ. ಬಿಸಿಸಿಐಯಿಂದ(BCCI) ಅನುಮತಿ ಸಿಕ್ಕರಷ್ಟೇ ಆಟಗಾರರು ಬೇರೆ ದೇಶದ ಕ್ರಿಕೆಟ್​ ಲೀಗ್​ಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಂದೊಮ್ಮೆ ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಅಂತಹ ಆಟಗಾರರ ವಿರುದ್ಧ ಶಿಸ್ತು ಕ್ರಮದ ಜತೆಗೆ ಅವರನ್ನು ಭಾರತದ ಕ್ರಿಕೆಟ್ ತಂಡದಿಂದ ನಿಷೇಧ ಮಾಡುವ ಹಕ್ಕು ಕೂಡ ಬಿಸಿಸಿಐಗೆ ಇದೆ. ಆದರೆ ನಿವೃತ್ತಿಯಾದ ಆಟಗಾರರಿಗೆ ಈ ನಿಯಮ ಅನ್ವಯವಾಗುತ್ತಿರಲಿಲ್ಲ. ಇದೀಗ ಮಾಜಿ ಆಟಗಾರರಿಗೂ ಕೆಲ ನಿಯಮವನ್ನು ಜಾರಿಗೆ ತರಲು ಬಿಸಿಸಿಐ ಮುಂದಾಗಿದೆ.

ಐಪಿಎಲ್​ ಸೇರಿ ಭಾರತ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಕೆಲ ಆಟಗಾರರು ವಿದೇಶದಲ್ಲಿ ನಡೆಯುತ್ತಿರುವ ಮೇಜರ್​ ಲೀಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಬಿನ್ ಉತ್ತಪ್ಪ, ಯೂಸೂಫ್ ಪಠಾಣ್ ದುಬೈ ಲೀಗ್​ನಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಆವೃತ್ತಿಯ ಐಪಿಎಲ್​ಗೆ ನಿವೃತ್ತಿ ಘೋಷಿಸಿದ್ದ ಅಂಬಾಟಿ ರಾಯುಡು ಅಮೇರಿಕಾದ ಮೇಜರ್ ಲೀಗ್​ ಕ್ರಿಕೆಟ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಡೆತನದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡಲು ಸಜ್ಜಾಗಿದ್ದಾರೆ. ಆದರೆ ಅವರ ಕನಸಿಗೆ ಇದೀಗ ಬಿಸಿಸಿಐ ಅಡ್ಡಿಪಡಿಸುವ ಸಾಧ್ಯತೆಯೊಂದು ಕಂಡುಬಂದಿದೆ.

ಭಾರತೀಯ ಆಟಗಾರರು ವಿದೇಶಿ ಲೀಗ್​ನಲ್ಲಿ ಆಡುತ್ತಿರುವ ಕಾರಣ ಐಪಿಎಲ್​ನ ಮಹತ್ವದ ಕಳೆದುಕೊಳ್ಳುವ ಸಾಧ್ಯತೆ ಅಧಿಕ ಎಂದು ಮನಗಂಡ ಬಿಸಿಸಿಐ, ಇದೀಗ ಮಾಜಿ ಆಟಗಾರರಿಗೂ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ಐಪಿಎಲ್ ಅಥವಾ ಭಾರತ ತಂಡದಿಂದ ನಿವೃತ್ತಿ ಹೇಳಿದ ಒಂದು ವರ್ಷಗಳ ವರೆಗೆ ಯಾವುದೇ ವಿದೇಶಿ ಲೀಗ್​ನಲ್ಲಿ ಭಾಗವಹಿಸದಂತೆ ಹೊಸ ಪಾಲಿಸಿಯನ್ನ ಜಾರಿಗೆ ತರಲಿದೆ. ಈ ಬಗ್ಗೆ ಜುಲೈ 7ರಂದು ನಡೆಯುವ ಬಿಸಿಸಿಐ ಅಪೆಕ್ಸ್ ಕೌನ್ಸಿಲ್​ ಸಭೆಯಲ್ಲಿ ಚರ್ಚೆ ನಡೆಯಲಿದ್ದು ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ವಿಶ್ವಕಪ್​ ಪಂದ್ಯ ಆಯೋಜನೆ ಕೈತಪ್ಪಿದ ಸ್ಟೇಡಿಯಂಗಳಿಗೆ ಆಫರ್​ ಘೋಷಿಸಿದ ಬಿಸಿಸಿಐ

ಏಕದಿನ ವಿಶ್ವಕಪ್‌ಗೆ ಅವಕಾಶ ಸಿಗದ ಕ್ರೀಡಾಂಗಣಗಳಲ್ಲಿ ಮುಂಬರುವ ಪ್ರಮುಖ ತವರು ಏಕದಿನ ಪಂದ್ಯಗಳ ಸರಣಿಯನ್ನು ಆಡಿಸುವ ಚಿಂತನೆ ಬಿಸಿಸಿಐ ಮಾಡಿದೆ. ಇದೇ ವಿಚಾರವಾಗಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, “ತವರಿನಲ್ಲಿ ನಡೆಯುವ ಸರಣಿಗಳ ಪಂದ್ಯಕ್ಕೆ ವಿಶ್ವಕಪ್​ ಪಂದ್ಯಗಳ ಆತಿಥ್ಯ ಸಿಗದ ಕ್ರೀಡಾಂಗಣಗಳಿಗೆ ಪಂದ್ಯ ನಡೆಸಲು ಮೊದಲ ಆದ್ಯತೆ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ ICC World Cup 2023: ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಇಂಡೋ-ಪಾಕ್​ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ!

“ಏಕದಿನ ವಿಶ್ವಕಪ್​ ಆತಿಥ್ಯ ಪಡೆದ ಎಲ್ಲ ಕ್ರಿಕೆಟ್​ ಸ್ಟೇಡಿಯಂಗೆ ಮುಂದಿನ ತವರಿನಲ್ಲಿ ನಡೆಯುವ ಸರಣಿಗೆ ಕಡಿಮೆ ಆತಿಥ್ಯ ನೀಡಲಾಗುತ್ತದೆ. ಈ ಅವಕಾಶವನ್ನು ಇತರ ಸ್ಟೇಡಿಯಂಗೆ ನೀಡಲಾಗುತ್ತದೆ. ಇದೇ ವಿಚರವಾಗಿ ಎಲ್ಲ ರಾಜ್ಯ ಕ್ರಿಕೆಟ್​ ಸಂಘಗಳ ಜತೆ ಮಾತುಕತೆ ನಡೆಸಲಾಗಿದೆ. ಹಾಗೂ ಇದಕ್ಕೆ ಸರ್ವಾನುಮತದ ಒಪ್ಪಿಗೆಯೂ ಸಿಕ್ಕಿದೆ” ಎಂದು ಎಂದು ಜಯ್​ ಶಾ ಹೇಳಿದ್ದಾರೆ.

Exit mobile version