Site icon Vistara News

WTC Final : ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯುವ ಸಾಮರ್ಥ್ಯ ನಮಗಿದೆ; ಟೀಮ್ ಇಂಡಿಯಾ ನಾಯಕನ ವಿಶ್ವಾಸ

Rohit Sharma

#image_title

ಲಂಡನ್​: ಜೂನ್ 7ರಿಂದ 11 ರವರೆಗೆ ಲಂಡನ್​ನ ಓವಲ್​ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಕಳೆದ ಬಾರಿಯೂ ಫೈನಲ್​ಗೆ ಅರ್ಹತೆ ಪಡೆದಿದ್ದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಇದೀಗ ಎರಡನೇ ಅವಕಾಶ ಪಡೆದಿದ್ದು ಕಪ್ ಗೆಲ್ಲುವ ವಿಶ್ವಾಸ ಮೂಡಿದೆ. ಮತ್ತೊಂದೆಡೆ, ಪ್ಯಾಟ್​ ಕಮಿನ್ಸ್​ ನೇತೃತ್ವದ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಫೈನಲ್ ಪಂದ್ಯದಲ್ಲಿಯೇ ಗೆದ್ದು ಬೀಗಲು ಮುಂದಾಗಿದೆ.

ಈ ಪಂದ್ಯದ ಹಿನ್ನೆಲೆಯಲ್ಲಿ ಇತ್ತಂಡಗಳ ನಾಯಕರಾದ ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಆಯೋಜಿಸಿದ್ದ ” ಆನ್​ ಇವ್ನಿಂಗ್ ವಿತ್​ ಟೆಸ್ಟ್​ ಕ್ರಿಕೆಟ್ ಅಟ್​ ಓವಲ್​ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ತಂಡವನ್ನು ಬಗ್ಗಿ ಬಡಿದು ಟ್ರೋಫಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಚಾಂಪಿಯನ್​​ಷಿಪ್​ ಋತುವಿನಲ್ಲಿ ಭಾರತ ತಂಡದ ಅಭಿಯಾನದ ಬಗ್ಗೆ ಮಾತನಾಡಿದರು.

ಗಾಯಗಳು ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಪ್ರಮುಖ ಆಟಗಾರರ ಅಲಭ್ಯತೆ ನಡುವೆಯೂ ಭಾರತ ತಂಡ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತ್ತು. ಇದನ್ನು ರೋಹಿತ್ ಪುನರುಚ್ಚರಿಸಿದರು/

ಕೊರೊನಾ ಕಾರಣಕ್ಕೆ ಕ್ರಿಕೆಟ್ ಕ್ಷೇತ್ರವು ಕಳೆಗುಂದಿತ್ತು. ಜನರು ಮನೆಯೊಳಗೆ ಸಿಲುಕಿಕೊಂಡಿದ್ದರು, ನಾವೆಲ್ಲರೂ ಬಬಲ್​ನಲ್ಲಿದ್ದೆವು. ನಮ್ಮ ನಿರೀಕ್ಷೆಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ. ನಮ್ಮ ತಂಡದ ಕಿರಿಯ ಆಟಗಾರರು ಬಬಲ್​ ಬಗ್ಗೆ ಸಾಕಷ್ಟು ಅಸಮಾಧಾನಗೊಂಡಿದ್ದರು. ಆದರೆ, ಎಲ್ಲರೂ ಅಡೆತಡೆಗಳನ್ನು ಜಯಿಸಿದೆವು. ಪರಿಸ್ಥಿತಿಯಿಂದ ಹೊರಬಂದೆವು ಎಂದು ರೋಹಿತ್ ಈ ಸಂದರ್ಭದಲ್ಲಿ ಹೇಳಿದರು.

ನಾವು ಆಸ್ಟ್ರೇಲಿಯಾದಲ್ಲಿ ಆಡಿದ ರೀತಿ ಫೈನಲ್ ಪಂದ್ಯಕ್ಕೂ ಸ್ಫೂರ್ತಿಯಾಗಿದೆ. ಅಡಿಲೆಡ್​ನಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಸೋತು ನಂತರ ನಾವು ಆತಿಥೇಯ ತಂಡಕ್ಕೆ ತಿರುಗೇಟು ಕೊಟ್ಟೆವು. ಆಗ ತಂಡ ಗಾಯದ ಸಮಸ್ಯೆಹಾಗೂ ಹಿರಿಯರ ಅಲಭ್ಯತೆಯಿಂದ ನಲುಗಿತ್ತು ಎಂದು ರೋಹಿತ್​ ಹೇಳಿದರು.

ನಾವು ನಮ್ಮ ಉತ್ಸಾಹವನ್ನು ಸರಿಯಾಗಿ ಬಳಸಿಕೊಂಡೆವು ಹಾಗೂ ಅಗ್ರಸ್ಥಾನಕ್ಕೆ ಏರಿದೆವು. ಈ ಫಲಿತಾಂಶದ ಹಿನ್ನೆಲೆಯಲ್ಲಿ ಸಾಕಷ್ಟು ಕಷ್ಟಗಳಿವೆ. ನಮ್ಮ ತಂಡದ ಯುವ ಆಟಗಾರರು ಶ್ರಮಪಟ್ಟರು ಹಾಗೂ ತಂಡಕ್ಕೆ ಉತ್ತಮ ಫಲಿತಾಂಶ ತಂದುಕೊಟ್ಟರು. ಒಟ್ಟಿನಲ್ಲಿ ಆ ಸರಣಿಯು ಭಾರತದ ಹೊರಗಡೆ ನಮ್ಮ ಪ್ರದರ್ಶನಕ್ಕೆ ಮಾದರಿಯಾಗಿದೆ. ವಿದೇಶಗಳಲ್ಲಿ ಉತ್ತಮ ಕ್ರಿಕೆಟ್ ಆಡಬಲ್ಲೆವು ಎಂಬುದಕ್ಕೆ ಅದು ಉದಾಹರಣೆ ಎಂದರು.

ಈ ವರ್ಷದ ಆರಂಭದಲ್ಲಿ ತವರು ನೆಲದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತ್ತು. ಈ ಸರಣಿಗೆ ಆಯ್ಕೆ ಮಾಡಿದ ಪಿಚ್​ಗಳು ಟೀಕೆಗಳಿಗೆ ಕಾರಣವಾಗಿದ್ದವು.

ತಮ್ಮ ನಾಯಕತ್ವದಲ್ಲಿ ಪಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವನ್ನು ನೆನಪಿಸಿಕೊಂಡ ರೋಹಿತ್, ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ಸರಣಿ ರೋಮಾಂಚನಕಾರಿಯಾಗಿತ್ತು. ಕಠಿಣ ಪರಿಸ್ಥಿತಿಗಳು, ಸವಾಲಿನ ಪಿಚ್​​ಗಳನ್ನು ಎದುರಿಸುವಲ್ಲಿ ಯಶಸ್ವಿಯಾದೆವು ಎಂದು ರೋಹಿತ್ ಹೇಳಿದ್ದಾರೆ.

Exit mobile version