Site icon Vistara News

ರಜನಿಕಾಂತ್‌ ಭೇಟಿಯಾದ Grandmaster ಪ್ರಜ್ಞಾನಂದ; ರಾಘವೇಂದ್ರ ಸ್ವಾಮಿ ಫೋಟೊ ಗಿಫ್ಟ್‌

Praggnanandhaa

ನವ ದೆಹಲಿ: ಭಾರತದ ಚೆಸ್‌ ಚತುರ, Grandmaster ಏರ್‌ಥಿಂಗ್‌ ಮಾಸ್ಟರ್ಸ್ ಚೆಸ್‌ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್‌ ರಮೇಶಬಾಬು ಪ್ರಜ್ಞಾನಂದ, ಶನಿವಾರ ತಮಿಳು ಸೂಪರ್‌ಸ್ಟಾರ್‌ ರಜಿನಿಕಾಂತ್‌ರನ್ನು ಅವರ ಮನೆಗೆ ತೆರಳಿ ಭೇಟಿಯಾಗಿದ್ದಾರೆ. ತನ್ನ ಅಪ್ಪ-ಅಮ್ಮ ಮತ್ತು ಸೋದರಿ ಮತ್ತು ಚೆಸ್ ಪಟು ವೈಶಾಲಿ ರಮೇಶ್‌ಬಾಬು ಅವರೊಂದಿಗೆ ಚೆನ್ನೈನಲ್ಲಿರುವ ರಜನೀಕಾಂತ್‌ ನಿವಾಸಕ್ಕೆ ತೆರಳಿದ್ದರು. ಸೂಪರ್‌ಸ್ಟಾರ್‌ ರಜನಿಕಾಂತ್‌ ಮನೆಗೆ ಭೇಟಿ ನೀಡಿದ್ದ ಸಂದರ್ಭದ ಫೋಟೋಗಳನ್ನು 16ರ ಹರೆಯದ ಪ್ರಜ್ಞಾನಂದ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

“ಇದೊಂದು ಸ್ಮರಣೀಯ ದಿನ. ನಾನು ನನ್ನ ಕುಟುಂಬಸ್ಥರೊಂದಿಗೆ ಹೋಗಿ ರಜನಿಕಾಂತ್‌ ಅಂಕಲ್‌ರನ್ನು ಭೇಟಿಯಾದೆ. ಅವರು ಉನ್ನತ ಸ್ಥಾನದಲ್ಲಿದ್ದವರು. ಸ್ಟಾರ್‌ ಆಗಿದ್ದರೂ ಅತ್ಯಂತ ವಿಧೇಯತೆ, ವಿನಯತೆಯಿಂದ ನಮ್ಮ ಬಳಿ ಮಾತನಾಡಿದರು. ಅವರ ಈ ಸ್ವಭಾವದಿಂದ ಪ್ರಭಾವಿತನಾಗಿದ್ದೇನೆ,” ಎಂದು ಬರೆದುಕೊಂಡಿದ್ದಾರೆ.

ರಜನಿಕಾಂತ್‌ ಅವರಿಗೆ ಪ್ರಜ್ಞಾನಂದ್‌ ಒಂದು ಚೆಸ್‌ ಬೋರ್ಡ್‌ ಮತ್ತು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಫೋಟೋವನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ರಜನಿಕಾಂತ್‌ ರಾಘವೇಂದ್ರ ಸ್ವಾಮಿ ಭಕ್ತರು. ಅವರು ಈ ಹಿಂದೆ ಮಂತ್ರಾಲಯದ ಮಠಕ್ಕೆ 10 ಕೋಟಿ ರೂಪಾಯಿ ದೇಣಿಗೆ ಕೂಡ ನೀಡಿದ್ದರು. ಹಾಗೇ, ಅಲ್ಲಿಗೆ ಭೇಟಿ ನೀಡಿ ರಾಘವೇಂದ್ರ ಸ್ವಾಮಿ ದರ್ಶನ ಪಡೆದಿದ್ದರು.

ಭರವಸೆಯ ಚೆಸ್‌ಪಟು

ಪ್ರಜ್ಞಾನಂದ್‌ ಚೆಸ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. ಜುಲೈ 8ರಿಂದ 16ರವರೆಗೆ ಸರ್ಬಿಯಾದಲ್ಲಿ ನಡೆದಿದ್ದ ಚೆಸ್‌ ಟೂರ್ನಮೆಂಟ್‌ನಲ್ಲಿ ಪಾಲ್ಗೊಂಡು ಚಾಂಪಿಯನ್‌ ಆಗಿದ್ದಾರೆ.. ಒಂಬತ್ತು ಸುತ್ತುಗಳಲ್ಲಿ, 8 ಅಂಕಗಳನ್ನು ಪಡೆದು ಜಯಶಾಲಿಯಾಗಿದ್ದರು. ಹಾಗೇ, ಜೂನ್‌ ತಿಂಗಳಲ್ಲಿ ನಾರ್ವೆ ಚೆಸ್‌ ಗ್ರೂಪ್‌ನಿಂದ ನಡೆದಿದ್ದ ಓಪನ್‌ ಟೂರ್ನಮೆಂಟ್‌ನಲ್ಲೂ ಗೆದ್ದಿದ್ದಾರೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ಅವರು ಸುದ್ದಿಯಾಗಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿ. ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನೇ ಸೋಲಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಪ್ರಜ್ಞಾನಂದ ಅವರು ಜುಲೈ ೨೮ರಂದು ಆರಂಭವಾಗಲಿರುವ ಚೆಸ್‌ ಒಲಿಂಪಿಯಾಡ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಇಂದು ವಿಶ್ವ ಚದುರಂಗದಾಟದ ದಿನ (International Chess Day); ಈ ದಿನ ಚೆಸ್​ ಸ್ಪರ್ಧಿಗಳಿಗೆ ವಿಶೇಷ

Exit mobile version