Site icon Vistara News

IPL 2025: ಮುಂಬೈ ಇಂಡಿಯನ್ಸ್​ಗೆ ಶ್ರೇಯಸ್​ ಅಯ್ಯರ್​, ಕೆಕೆಆರ್​ಗೆ ಸೂರ್ಯಕುಮಾರ್​ ನಾಯಕ!​

IPL 2025

IPL 2025:India captain Suryakumar Yadav to be traded to KKR with title-winning skipper Shreyas Iyer

ಮುಂಬಯಿ: ಐಪಿಎಲ್(IPL 2025)​ ಆಟಗಾರ ಮೆಗಾ ಹರಾಜು(ipl 2025 mega auction) ಪ್ರಕ್ರಿಯೆ ನಡೆಯುವ ಮುನ್ನವೇ ಕೆಲ ಫ್ರಾಂಚೈಸಿಗಳು ಸ್ಟಾರ್​ ಆಟಗಾರರನ್ನು ತಮ್ಮ ತಂಡದತ್ತ ಸೆಳೆಯಲು ತೆರೆ ಮರೆಯಲ್ಲಿ ಭಾರೀ ಕಸರತ್ತು ಆರಂಭಿಸಿದೆ. ಹೌದು, ಇದೀಗ ವರದಿಯಾದ ಪ್ರಕಾರ ಭಾರತ ಟಿ20 ತಂಡದ ನಾಯಕ, ಪ್ರಸ್ತುತ ಮುಂಬೈ ಇಂಡಿಯನ್ಸ್(mumbai indians) ತಂಡದ ಆಟಗಾರ ಸೂರ್ಯಕುಮಾರ್​ ಯಾದವ್​ಗೆ ಹಾಲಿ ಚಾಂಪಿಯನ್​ ಕೆಕೆಆರ್(KKR)​ ತಂಡದಿಂದ ನಾಯಕತ್ವದ ಆಫರ್​ ಬಂದಿದೆ ಎಂದು ವರದಿಯಾಗಿದೆ.

ಮುಂಬೈ ಇಂಡಿಯನ್ಸ್​ ಕೂಡ ತನ್ನ ನಾಯಕತ್ವದಲ್ಲಿ ಬದಲಾವಣೆಗೆ ಮುಂದಾಗಿದ್ದು, ತಂಡದ ಆಟಗಾರ ಸೂರ್ಯಕುಮಾರ್​ ಅವರನ್ನು ಕೆಕೆಆರ್​ ತಂಡಕ್ಕೆ ಬಿಟ್ಟುಕೊಟ್ಟು ಕೆಕೆಆರ್​ ತಂಡದ ನಾಯಕ ಶ್ರೇಯಸ್​ ಅಯ್ಯರ್​ ಅವರನ್ನು ಖರೀದಿಸಿ ನಾಯಕತ್ವ ನೀಡಲು ಮುಂಬೈ ಇಂಡಿಯನ್ಸ್​ ನಿರ್ಧರಿಸಿದೆ ಎನ್ನಲಾಗಿದೆ. ಟ್ರೇಡಿಂಗ್​ ಮೂಲಕ ಉಭಯ ಆಟಗಾರರನ್ನು ಪರಸ್ಪರ ಬದಲಾವಣೆ ಮಾಡಿಕೊಳ್ಳಲು ಎರಡು ಫ್ರಾಂಚೈಸಿಗಳು ಯೋಜನೆ ನಡೆಸಿವೆ ಎಂದು ವರದಿಯಾಗಿದೆ. ಈ ಸುದ್ದಿ ಕೇಳಿ ಬಂದ ತಕ್ಷಣ ನೆಟ್ಟಿಗರು ಸೂರ್ಯಕುಮಾರ್​ಗೆ ಕೆಕೆಆರ್​ ಜೆರ್ಸಿ, ಶ್ರೇಯಸ್​ ಅಯ್ಯರ್​ಗೆ ಮುಂಬೈ ಜೆರ್ಸಿ ತೊಡಿಸಿದ ಎಡಿಟೆಡ್​ ಫೋಟೊವನ್ನು ಶೇರ್​ ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ IPL 2025: ಗೆಳೆಯ ಕೆ.ಎಲ್​ ರಾಹುಲ್​ರನ್ನು ಮತ್ತೆ ಆರ್​ಸಿಬಿಗೆ ಕರೆತರಲು ಮುಂದಾದ ಕೊಹ್ಲಿ

ಮುಂಬೈ ತಂಡ ಕಳೆದ ಬಾರಿ ಹಾರ್ದಿಕ್​ ಪಾಂಡ್ಯ ಅವರನ್ನು ಗುಜರಾತ್​ ತಂಡದಿಂದ ಟ್ರೇಡಿಂಗ್​ ಮೂಲಕ ಖರೀದಿಸಿ ತಂಡದ ನಾಯಕತ್ವ ನೀಡಿತ್ತು. 5 ಬಾರಿ ತಂಡವನ್ನು ಚಾಂಪಿಯನ್​ ಮಾಡಿದ್ದ ನಾಯಕ ರೋಹಿತ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ಇದೀಗ ಕೆಕೆಆರ್​ ತಂಡವನ್ನು ಚಾಂಪಿಯನ್​ ಮಾಡಿರುವ, ಮುಂಬೈ ಮೂಲದವರೇ ಆದ ಶ್ರೇಯಸ್​ ಅಯ್ಯರ್​ ಅವರನ್ನು ತಂಡಕ್ಕೆ ಸೇರಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಸೂರ್ಯಕುಮಾರ್​ ಯಾದವ್​ ಅವರು ಮುಂಬೈ ತಂಡ ಸೇರುವ ಮುನ್ನ ಕೆಕೆಆರ್​ ಪರ ಆಡುತ್ತಿದ್ದರು. 2014 ರ ಐಪಿಎಲ್ ಹರಾಜಿನಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿತ್ತು. ಇದೇ ಆವೃತ್ತಿಯಲ್ಲಿ ಕೆಕೆಆರ್​ ಚಾಂಪಿಯನ್​ ಕೂಡ ಆಗಿತ್ತು. ಗೌತಮ್​ ಗಂಭೀರ್​ ತಂಡದ ನಾಯಕನಾಗಿದ್ದರು. ಸೂರ್ಯಕುಮಾರ್​ ಕೆಕೆಆರ್​ ಪರ ನಾಲ್ಕು ಋತುಗಳಲ್ಲಿ 54 ಪಂದ್ಯಗಳನ್ನಾಡಿ 608 ರನ್​ ಬಾರಿಸಿದ್ದರು. 2018ರಲ್ಲಿ ಸೂರ್ಯ ಮುಂಬೈ ತಂಡ ಸೇರಿದ್ದರು.

ಸೂರ್ಯಕುಮಾರ್​ ಇದುವರೆಗೆ 150 ಐಪಿಎಲ್ ಪಂದ್ಯಗಳಿಂದ 3594 ರನ್​ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 24 ಅರ್ಧಶತಕ ಒಳಗೊಂಡಿದೆ. ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್​ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.

ಶ್ರೇಯಸ್​ ಅಯ್ಯರ್​ ‘ಸಿಯೆಟ್ ಅವಾರ್ಡ್ಸ್'(CEAT Cricket Awards)ನಲ್ಲಿ ವರ್ಷದ T20 ನಾಯಕತ್ವ ಪ್ರಶಸ್ತಿಯನ್ನು ಗೆದಿದ್ದರು. ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ತಂಡವನ್ನು 2 ಬಾರಿ ಫೈನಲ್‌ ತಲುಪಿಸಿದ ಸಾಧನೆಗೆ ಈ ಪ್ರಶಸ್ತಿ ಲಭಿಸಿತ್ತು. ಶ್ರೇಯಸ್​ ಅಯ್ಯರ್​ ಅವರು ಐಪಿಎಲ್​ನಲ್ಲಿ ಡೆಲ್ಲಿ ತಂಡದ ನಾಯಕನಾಗಿ ತಂಡವನ್ನು ಒಮ್ಮೆ ಫೈನಲ್​ ತಲುಪಿಸಿದ್ದರು. ಅಲ್ಲಿ ಮುಂಬೈ ವಿರುದ್ಧ ತಂಡ ಸೋಲು ಕಂಡು ರನ್ನರ್​ ಅಪ್​ ಪ್ರಶಸ್ತಿ ಪಡೆದಿತ್ತು. ಈ ಬಾರಿಯ ಆವೃತ್ತಿಯಲ್ಲಿ ಕೆಕೆಆರ್​ ತಂಡದ ನಾಯಕನಾಗಿ ಟ್ರೋಫಿ ಗೆದ್ದ ಸಾಧನೆ ಮಾಡಿದ್ದರು. 

ಅಯ್ಯರ್​ ಇದುವೆರೆಗೆ 115 ಐಪಿಎಲ್​ ಪಂದ್ಯವನ್ನಾಡಿ 3127 ರನ್​ ಬಾರಿಸಿದ್ದಾರೆ. ಇದರಲ್ಲಿ 21 ಅರ್ಧಶತಕ ಒಳಗೊಂಡಿದೆ. 96 ಗರಿಷ್ಠ ವೈಯಕ್ತಿ ಮೊತ್ತವಾಗಿದೆ. ಭಾರತ ತಂಡದ ಪರ 51 ಟಿ20, 62 ಏಕದಿನ ಮತ್ತು 14 ಟೆಸ್ಟ್​ ಪಂದ್ಯಗಳನ್ನಾಡಿ ಒಟ್ಟು 4,336 ರನ್​ ಗಳಿಸಿದ್ದಾರೆ. ಟೆಸ್ಟ್​ನಲ್ಲಿ 1, ಏಕದಿನದಲ್ಲಿ 5 ಶತಕ ಬಾರಿಸಿದ್ದಾರೆ.

Exit mobile version