Site icon Vistara News

Rohit Sharma: ವಿಶ್ವಕಪ್​ ಸೋಲಿನ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ರೋಹಿತ್

rohit sharma

ಮುಂಬಯಿ: ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆತಿಥೇಯ ಭಾರತ ತಂಡ (ICC Cricket World Cup 2023) ಆಸ್ಟ್ರೇಲಿಯಾ​(India vs Australia, Final) ವಿರುದ್ಧ 6 ವಿಕೆಟ್​ಗಳಿಂದ ಸೋತು ವಿಶ್ವಕಪ್​ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಸೋಲು ಈಗಾಗಲೂ ಕೂಡ ಭಾರತೀಯ ಆಟಗಾರರಲ್ಲಿ ಕಾಡುತ್ತಲೇ ಇದೆ. ಕಪ್ತಾನ ರೋಹಿತ್‌ ಶರ್ಮಾ ವಿಶ್ವಕಪ್‌ ಸೋಲಿನ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಐಪಿಎಲ್​ ಫ್ರಾಂಚೈಸಿ ಮುಂಬಯಿ ಇಂಡಿಯನ್ಸ್‌ ಜತೆಗಿನ ಸಂದರ್ಶನದಲ್ಲಿ ರೋಹಿತ್​ ಶರ್ಮ ಅವರು ವಿಶ್ವಕಪ್​ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಫೈನಲ್ ಸೋಲಿನ ಬಳಿಕ ರೋಹಿತ್​ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿರಲಿಲ್ಲ. ಬೇಸರದಿಂದಲೇ ಡ್ರೆಸ್ಸಿಂಗ್​ ರೂಮ್​ನಲ್ಲಿ ಸಹ ಆಟಗಾರರೊಂದಿಗೆ ಕುಳಿತಿದ್ದರು. ಹೀಗಾಗಿ ತಂಡದ ಕೋಚ್​ ದ್ರಾವಿಡ್​ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು. ಇದೀಗ ಸುಮಾರು ಒಂದು ತಿಂಗಳ ಬಳಿಕ ರೋಹಿತ್​ ಈ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸೋಲನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ

“ಫೈನಲ್​ ಪಂದ್ಯದ ತನಕ ಸೋಲನ್ನೇ ಕಾಣದ ನಾವು, ಫೈನಲ್​ನಲ್ಲಿ ಸೋಲು ಕಂಡೆವು. ಈ ಸೋಲಿನ ಆಘಾತದಿಂದ ಹೇಗೆ ಹೊರಬರಬೇಕೆನ್ನುವುದೇ ನನಗೆ ಗೊತ್ತಾಗುತ್ತಿಲ್ಲ. ಏನು ಮಾಡಬೇಕೆನ್ನುವ ಆಯ್ಕೆಯೂ ನನ್ನ ಮುಂದಿರಲಿಲ್ಲ. ಆದರೆ ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನ ಬೆಂಬಲಕ್ಕೆ ನಿಂತು ಈ ಸೋಲಿನ ಆಘಾತದಿಂದ ಹೊರಬರುವಂತೆ ಮಾಡುತ್ತಿದ್ದಾರೆ. ಆ ಸೋಲನ್ನು ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಜೀವನ ಮುಂದುವರಿಯುತ್ತದೆ. ನಾವು ಕೂಡ ಇದರೊಂದಿಗೆ ಮುಂದುವರಿಯ ಬೇಕು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಕಠಿಣವಾಗಿತ್ತು. ಇದರಿಂದ ಮುಂದುವರಿಯುವುದು ಅಷ್ಟು ಸುಲಭವಲ್ಲ” ಎಂದು ರೋಹಿತ್​ ಹೇಳಿದರು.

“ವಿಶ್ವಕಪ್‌ಗಾಗಿ ನಾವು ವರ್ಷಾನುಗಟ್ಟಲೆ ಶ್ರಮಿಸಿದ್ದೇವು. ಇಷ್ಟು ಶ್ರಮವಹಿಸಿ ನಾವು ಅಂದುಕೊಂಡದ್ದು ಆಗದೇ ಇದ್ದಾಗ ಅಥವಾ ನಗಮೆ ಬೇಕಾದುದನ್ನು ನಾವು ಪಡೆಯದಿದ್ದರೆ ಅದು ನಿರಾಶಾದಾಯಕವಾಗಿರುತ್ತದೆ. ಇದರಿಂದ ಎಲ್ಲರು ನಿರಾಸೆಗೊಳ್ಳುತ್ತಾರೆ” ಎಂದು ರೋಹಿತ್‌ ಹೇಳಿದ್ದಾರೆ.

ಇದನ್ನೂ ಒದಿ Suryakumar Yadav : ಮ್ಯಾಕ್ಸ್​ವೆಲ್​, ರೋಹಿತ್​ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್​

“ನಮ್ಮ ಕಡೆಯಿಂದ ಏನು ತಪ್ಪಾಗಿದೆ ಎಂದು ಯಾರಾದರೂ ಕೇಳಿದರೆ? ನಾವು 10 ಪಂದ್ಯಗಳನ್ನು ಗೆದ್ದಿದ್ದೇವೆ ಮತ್ತು ಆ 10 ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದೇವೆ. ತಪ್ಪು ಪ್ರತಿಯೊಂದು ಪಂದ್ಯದಲ್ಲೂ ಸಂಭವಿಸುತ್ತದೆ. ಪರಿಪೂರ್ಣ ಆಟವನ್ನು ಆಡಲು ಸಾಧ್ಯವಿಲ್ಲ. ಆದರೆ ಪರಿಪೂರ್ಣ ಹಂತಕ್ಕೆ ಹತ್ತಿರವಾಗುವ ಆಟವನ್ನು ಆಡಬಹುದು” ಎಂದು ರೋಹಿತ್​ ಹೇಳಿದ್ದಾರೆ.

ಸೋಲಿನ ಆಘಾತ

ನವೆಂಬರ್​ 19 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಭಾರತದ ಗೆಲುವನ್ನು ಕಸಿದರು.

Exit mobile version