Site icon Vistara News

Prakash Padukone : ಪದಕಗಳನ್ನು ತಪ್ಪಿಸಿಕೊಂಡ ಅಥ್ಲೀಟ್​ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರಕಾಶ್​ ಪಡುಕೋಣೆ

Prakash Padukone

ಬೆಂಗಳೂರು: 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ (Paris Olympics 2024) ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ಭಾರತದ ಯುವ ಷಟ್ಲರ್​ ಲಕ್ಷ್ಯ ಸೇನ್ ಅವರ ಸೋಲು ಭಾರತೀಯ ಅಥ್ಲೀಟ್​ಗಳ ನಿಯೋಗವನ್ನು ಬೇಸರಕ್ಕೆ ತಳ್ಳಿದೆ. ಪ್ರಮುಖವಾಗಿ ಬ್ಯಾಡ್ಮಿಂಟನ್​ ಕೋಚ್​ ಪ್ರಕಾಶ್ ಪಡುಕೋಣೆ (Prakash Padukone) ಈ ಬಗ್ಗೆ ಕೋಪಗೊಂಡಿದ್ದಾರೆ. ಸೋಲಿನ ನಂತರ ಭಾರತದ ಬ್ಯಾಡ್ಮಿಂಟನ್ ದಂತಕಥೆ, ತಂಡದ ತರಬೇತುದಾರ ಮತ್ತು ಮಾರ್ಗದರ್ಶಕ ಪ್ರಕಾಶ್ ಪಡುಕೋಣೆ ಪದಕಗಳನ್ನು ತಪ್ಪಿಸಿಕೊಂಡಿರುವ ಆಟಗಾರರಿಗೆ ಪಾಠ ಹೇಳಿದ್ದಾರೆ. ಪದಕ ಗೆಲ್ಲುವುದಕ್ಕೆ ಆಟಗಾರರೇ ಮನಸ್ಸು ಮಾಡಬೇಕು. ವ್ಯವಸ್ಥೆಯಲ್ಲಿ ಯಾವುದೇ ದೋಷವಿಲ್ಲ ಎಂಬುದಾಗಿ ಹೇಳಿದ್ದಾರೆ.

ಆಟಗಾರರು ತಾವೇ ಮುಂದೆ ಬಂದು ಗೆಲ್ಲಲು ಇದು ಸರಿಯಾದ ಸಮಯ. “ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡಲು ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ಹಣಕಾಸು ಭಾರತೀಯ ಆಟಗಾರರಿಗೆ ನೀಡಲಾಗುತ್ತಿದೆ. ನಮ್ಮ ಆಟಗಾರರಿಗೆ ಸೌಲಭ್ಯಗಳು ಮತ್ತು ಹಣದ ಕೊರತೆಯಿದ್ದ ಹಿಂದಿನ ದಿನಗಳಂತೆ ಈ ಪರಿಸ್ಥಿತಿ ಇಲ್ಲ. ಆದ್ದರಿಂದ, ನಮ್ಮ ಆಟಗಾರರು ನಿರೀಕ್ಷೆಯಂತೆ ಮುನ್ನಡೆಯಲು ಮತ್ತು ಗೆಲ್ಲಲು ಇದು ಸರಿಯಾದ ಸಮಯ” ಎಂದು ಲಕ್ಷ್ಯ ಸೇನ್ ಕಂಚಿನ ಪದಕ ಪಂದ್ಯದಲ್ಲಿ ಸೋತ ನಂತರ ಪಡುಕೋಣೆ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: Avinash Sable : 3000 ಮೀಟರ್ ಸ್ಟೀಪಲ್​​ಚೇಸ್​​ನ ಫೈನಲ್​ಗೆ ಅರ್ಹತೆ ಪಡೆದ ಅವಿನಾಶ್ ಸಾಬ್ಲೆ

ಸೇನ್ ಅವರ ಪ್ರಭಾವಶಾಲಿ ಪ್ರದರ್ಶನದ ಬಳಿಕ ಪುರುಷರ ಸಿಂಗಲ್ಸ್ ಸ್ಪರ್ಧೆಯ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದಾಗ್ಯೂ ಅವರಿಗೆ ಒಂದು ಪದಕ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ.

ಮಹಿಳಾ ಸಿಂಗಲ್ಸ್​ನ 16ನೇ ಸುತ್ತಿನಲ್ಲಿ ಪಿ.ವಿ.ಸಿಂಧು ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್​ನಲ್ಲಿ ಮಲೇಷ್ಯಾದ ಆರನ್ ಚಿಯಾ ಮತ್ತು ಸೋಹ್ ವೂಯಿ ಯಿಕ್ ವಿರುದ್ಧ ಸೋತರು. 16ನೇ ಸುತ್ತಿನಲ್ಲಿ ಎಚ್.ಎಸ್.ಪ್ರಣಯ್ ಲಕ್ಷ್ಯ ಸೇನ್ ವಿರುದ್ಧ ಸೋತರೆ, ಮಹಿಳಾ ಡಬಲ್ಸ್​ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಗ್ರೂಪ್ ಹಂತದಿಂದ ಹೊರಗುಳಿದರು.

ಬ್ಯಾಡ್ಮಿಂಟನ್ ನಿಂದ ಒಂದೇ ಒಂದು ಪದಕವನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂಬುದು ನನ್ನ ನಿರಾಶೆಯಾಗಿದೆ. ನಾನು ಮೊದಲೇ ಹೇಳಿದಂತೆ, ನಾವು ಮೂರು ಪದಕಗಳನ್ನು ಗೆಲ್ಲಬಹುದಾಗಿತ್ತು. ಆದಾಗ್ಯೂ ಕನಿಷ್ಠ ಒಂದು ಪದಕವು ನನಗೆ ಸಂತೋಷವನ್ನುಂಟುಮಾಡುತ್ತಿತ್ತು. ಆದರೆ ಈ ಬಾರಿ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಚಿವಾಲಯ ಎಲ್ಲರೂ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದೆ. ಪ್ರಸ್ತುತ ಸರ್ಕಾರ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಯಾರೂ ಮಾಡಬಹುದೆಂದು ನಾನು ನಿರೀಕ್ಷಿಸುವುದಿಲ್ಲ. ಆದ್ದರಿಂದ ಆಟಗಾರರು ಸಹ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ಪಡುಕೋಣೆ ಹೇಳಿದರು.

ಕಂಚಿನ ಪದಕದ ಪಂದ್ಯದ ಮೊದಲ ಗೇಮ್ ನಲ್ಲಿ ಲಕ್ಷ್ಯ ಸೇನ್ 21-13 ಅಂತರದಲ್ಲಿ ಜಯ ಸಾಧಿಸಿದ್ದರು. ಎರಡನೇ ಗೇಮ್ ನಲ್ಲಿ ಲಕ್ಷ್ಯ ಉತ್ತಮ ಆರಂಭ ಪಡೆದರೂ, ಲೀ ಜಿ ಜಿಯಾ ಮುನ್ನಡೆ ಸಾಧಿಸಿದರು. ಮಲೇಷ್ಯಾ 16-21 ಅಂತರದಲ್ಲಿ ಜಯ ಸಾಧಿಸಿ 1-1ರ ಸಮಬಲ ಸಾಧಿಸಿತು. ನಿರ್ಣಾಯಕ ಗೇಮ್​ನಲ್ಲಿ ಲಕ್ಷ್ಯ 11-21 ರಿಂದ ಸೋತರು.

ಭಾರತದ ಶಟ್ಲರ್ ಗೆ ಸೇನ್ ಅವರ ಸೋಲು ಅಂಗಣದೊಳಗಿನ ಅವರ ಓಡಾಟದ ಕೊರತೆ ಎಂದು ಪಡುಕೋಣೆ ಹೇಳಿದ್ದಾರೆ. “ಲಕ್ಷ್ಯ ಉತ್ತಮವಾಗಿ ಆಡಿದ್ದರು. ಸೋಲಿನೀಂದ ಸಹಜವಾಗಿ ನಾನು ಸ್ವಲ್ಪ ನಿರಾಶೆಗೊಂಡಿದ್ದೇನೆ. ಅವರು ಸೆಮಿಫೈನಲ್​ನಲ್ಲಿಯೂ ಉತ್ತಮವಾಗಿ ಆಡಿದ್ದರು. ಆದರೆ ಅಂಗಣದೊಳಗಿನ ಓಡಾಟ ಅವರಿಗೆ ಸಾಧ್ಯವಾಗಲಿಲ್ಲ, ಆ ನಿಟ್ಟಿನಲ್ಲಿ ಅವರು ಕೆಲಸ ಮಾಡಬೇಕಾಗಿದೆ ಎಂದು ಪಡುಕೋಣೆ ಹೇಳಿದರು.

Exit mobile version