Site icon Vistara News

INDvsBAN | ನನ್ನ ಬಾಯಿಯಿಂದ ಕೆಟ್ಟ ಮಾತುಗಳು ಬರುತ್ತಿವೆ; ಸುನೀಲ್​ ಗವಾಸ್ಕರ್​ ಕೋಪ ಯಾರ ಮೇಲೆ?

kuldeep yadav

ಹೊಸದಿಲ್ಲಿ : ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯಕ್ಕೆ ಟೀಮ್​ ಇಂಡಿಯಾದ ಆಡುವ ಬಳಗದಲ್ಲಿ ಕುಲ್ದೀಪ್​ ಯಾದವ್​ ಅವರನ್ನು ಹೊರಗಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಮೊದಲ ಪಂದ್ಯದಲ್ಲಿ ಒಟ್ಟು 8 ವಿಕೆಟ್​ ಕಬಳಿಸಿ ಪಂದ್ಯಶ್ರೇಷ್ಠ ಪುರಸ್ಕಾರ ಪಡೆದ ಅವರನ್ನು ಮುಂದಿನ ಪಂದ್ಯದಲ್ಲಿ ಅಡುವ ಬಳಗದಿಂದಲೇ ಹೊರಗಿಟ್ಟಿರುವುದು ಕ್ರಿಕೆಟ್​ ಅಭಿಮಾನಿಗಳಿಗೆ ಸಹಿಸಲಾಗದ ಸಂಗತಿ ಎನಿಸಿಕೊಂಡಿದೆ. ಈ ನಿಟ್ಟಿನಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ನಾಯಕ ಸುನೀಲ್​ ಗವಾಸ್ಕರ್​, ನಂಬಲು ಅಸಾಧ್ಯವಾದ ಬದಲಾವಣೆ ಎಂದು ಹೇಳಿಕೊಂಡಿದ್ದಾರೆ.

ಕುಲ್ದೀಪ್​ ಯಾದವ್​ ಚತ್ತೋಗ್ರಾಮ್​ನಲ್ಲಿ ನಡೆದ ಮೊದಲ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 40 ರನ್​ ಬಾರಿಸಿದ್ದರು. ಅಂತೆಯೇ ಮೊದಲ ಇನಿಂಗ್ಸ್​ ಬೌಲಿಂಗ್​ನಲ್ಲಿ 40 ರನ್​ಗಳಿಗೆ 5 ವಿಕೆಟ್​ ಕಬಳಿಸಿದ್ದರು. ಎರಡನೇ ಇನಿಂಗ್ಸ್​ನಲ್ಲಿ 3 ವಿಕೆಟ್​ ಕಬಳಿಸಿದ್ದರು. 113 ರನ್​ಗಳಿಗೆ 8 ವಿಕೆಟ್​ ಕಬಳಿಸಿದ ಅವರು 188 ರನ್​ಗಳ ಬೃಹತ್​ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ ಎರಡನೇ ಪಂದ್ಯಕ್ಕೆ ಬೆಂಚು ಕಾಯಿಸಿದ್ದು ಗವಾಸ್ಕರ್​ಗೆ ಸರಿ ಎನಿಸಲಿಲ್ಲ.

ಸೋನಿ ಸ್ಪೋರ್ಟ್ಸ್​ ಜತೆ ಮಾತನಾಡಿದ ಅವರು “ಇದು ನಂಬಲು ಸಾಧ್ಯವೇ ಇಲ್ಲದ ನಿರ್ಧಾರ. ಇದು ನಾನು ಬಳಸಬಹುದಾದ ಒಳ್ಳೆಯ ಪದ. ಇನ್ನೂ ಕೆಟ್ಟ ಪದಗಳನ್ನು ನಾನು ಬಳಸಬಹುದಾಗಿತ್ತು. ಆದರೆ, ಅದನ್ನು ಮಾಡುವುದಿಲ್ಲ. 20 ವಿಕೆಟ್​ಗಳಲ್ಲಿ 8 ವಿಕೆಟ್​ ಕಬಳಿಸಿದ್ದಾರೆ, ಅವರನ್ನು ಆಡಿಸದೇ ಹೋಗಿರುವುದು ಸೂಕ್ತ ನಿರ್ಧಾರವಲ್ಲ ” ಎಂಬುದಾಗಿ ಹೇಳಿದ್ದಾರೆ.

“ಟೀಮ್​ ಇಂಡಿಯಾದಲ್ಲಿ ಇನ್ನಿಬ್ಬರು ಸ್ಪಿನ್ನರ್​ಗಳಿದ್ದರು. ಅಕ್ಷರ್​ ಪಟೇಲ್​, ಆರ್​. ಅಶ್ವಿನ್. ಅವರಲ್ಲಿ ಒಬ್ಬರನ್ನು ತಂಡದಿಂದ ಹೊರಕ್ಕೆ ಇಡಬಹುದಾಗಿತ್ತು. ಆದರೆ, ಆ ರೀತಿ ಮಾಡಿಲ್ಲ. ಪಿಚ್ ಕೂಡ ಸ್ಪಿನ್​ಗೆ ಅನುಕೂಲಕರವಾಗಿರುವ ವೇಳೆ ಎಂಟು ವಿಕೆಟ್​ ಪಡೆದ ಆಟಗಾರನನ್ನು ಪಂದ್ಯದಿಂದ ಕೈ ಬಿಟ್ಟಿರುವುದು ಸರಿಯಲ್ಲ,” ಎಂಬುದಾಗಿ ಅವರು ಹೇಳಿದರು.

ಇದನ್ನೂ ಓದಿ | Kuldeep Yadav | ಬಾಂಗ್ಲಾದೇಶ ವಿರುದ್ಧ ಟೆಸ್ಟ್​ ಪಂದ್ಯದಲ್ಲಿ 5 ವಿಕೆಟ್​ ಉರುಳಿಸಿದ ಕುಲ್ದೀಪ್​ ಯಾದವ್​ ಸಾಧನೆಗಳಿವು

Exit mobile version