Site icon Vistara News

Hardik Pandya: ಮುಂದಿನ ಪಂದ್ಯಗಳಿಗೂ ​ ಪಾಂಡ್ಯ ಅಲಭ್ಯ; ಕಮ್​ಬ್ಯಾಕ್ ಯಾವಾಗ?

Hardik Pandya

ಬೆಂಗಳೂರು: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಎಡ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್​ ಪಾಂಡ್ಯ(Hardik Pandya) ಅವರು ಸದ್ಯ ಚೇತರಿಕೆಯ ಹಾದಿಯಲ್ಲಿದ್ದಾರೆ. ಆದರೆ ಅವರು ಇನ್ನೂ ಕೂಡ ತಂಡ ಸೇರುವುದು ತಡವಾಗಲಿದೆ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

“ಹಾರ್ದಿಕ್​ ಪಾಂಡ್ಯ ಅವರು ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ. ಆದರೆ ಅವರು ಭಾರತದ ಮುಂದಿನ ಎಲ್ಲ ಲೀಗ್​ ಪಂದ್ಯಗಳಿಂದ ಹೊರಳಿಯಲಿದ್ದು ಸೆಮಿಫೈನಲ್​ ವೇಳೆ ತಂಡಕ್ಕೆ ಕಮ್​ಬ್ಯಾಕ್​ ಮಾಡುವ ಸಾಧ್ಯತೆ ಇದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ನ್ಯೂಸ್​ 18 ವರದಿ ಮಾಡಿದೆ. ಸದ್ಯ ಭಾರತ ಆಡಿದ 6 ಪಂದ್ಯಗಳಲ್ಲಿ 6ನ್ನೂ ಗೆದ್ದು 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೆ ಅಧಿಕೃತವಾಗಿ ಸೆಮಿ ಫೈನಲ್​ ಪ್ರವೇಶ ಪಡೆಯಲಿದೆ. ಇದು ಭಾರತಕ್ಕೆ ಕಷ್ಟವೇನು ಅಲ್ಲ. ಹೀಗಾಗಿ ಪಾಂಡ್ಯಗೆ ಮತ್ತಷ್ಟು ವಿಶ್ರಾಂತಿ ನೀಡಿದ ಹಾಗಿದೆ.


ಒಂದೊಮ್ಮೆ ಪಾಂಡ್ಯ ಅವರನ್ನು ಆತುರದಲ್ಲಿ ಆಡಿಸಿದರೆ ಅವರು ಮತ್ತೆ ಗಾಯಗೊಂಡರೆ ಟೂರ್ನಿಯಿಂದ ಹೊರಬೀಳುವುದು ಖಚಿತ. ಪಾಂಡ್ಯ ಸ್ಥಾನಕ್ಕೆ ಸದ್ಯ ಯಾವುದೇ ಆಲ್​ ರೌಂಡರ್​ ಕೂಡ ತಂಡದಲ್ಲಿಲ್ಲ. ಶಾರ್ದೂಲ್​ ಠಾಕೂರ್​ ಅವರು ಇದ್ದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಈ ಎಲ್ಲ ವಿಚಾರವನ್ನು ಮನಗಂಡು ಬಿಸಿಸಿಐ ಪಾಂಡ್ಯ ಅವರನ್ನು ಲೀಗ್​ ಪಂದ್ಯಗಳಿಂದ ದೂರ ಇರಿಸಿ ಸೆಮಿಫೈನಲ್​ನಲ್ಲಿ ಕಣಕ್ಕಿಳಿಸುವ ಯೋಚನೆಯಲ್ಲಿದ್ದಂತೆ ತೋರುತ್ತಿದೆ.

ಇದನ್ನೂ ಓದಿ 20 ವರ್ಷಗಳ ಬಳಿಕ ಆಂಗ್ಲರನ್ನು ಸದೆಬಡಿದ ಭಾರತ; ಸೆಮಿ ಟಿಕೆಟ್​ ಬಹುತೇಕ ಖಚಿತ


ಮೊದಲ ಓವರ್​ನಲ್ಲೇ ಗಾಯಗೊಂಡಿದ್ದ ಪಾಂಡ್ಯ

ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್​ 19ರಂದು ಪುಣೆಯಲ್ಲಿ ನಡೆದಿದ್ದ ಪಂದ್ಯದ 9ನೇ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಅವರು ಲಿಟನ್ ದಾಸ್ ಬಾರಿಸಿದ ಬೌಂಡರಿ ತಡೆಯುವ ಯತ್ನದಲ್ಲಿ ಸ್ಲಿಪ್ ಆಗಿ ಕೆಳಗೆ ಬಿದ್ದು ಪಾದದ ಗಾಯಕ್ಕೆ ತುತ್ತಾಗಿದ್ದರು. ಬಳಿಕ ನೋವಿನಿಂದಾಗಿ ಮೈದಾನ ತೊರೆದಿದ್ದರು. ಪಾಂಡ್ಯ ಅವರ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಅವರು ಪೂರ್ಣಗೊಳಿಸಿದ್ದರು. ಗಾಯಗೊಂಡು ಮೈದಾನದಿಂದ ಹೊರ ನಡೆದ ಪಾಂಡ್ಯ ಸಂಪೂರ್ಣವಾಗಿ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಸೂರ್ಯಕುಮಾರ್​ ಅವರು ಬದಲಿ ಆಟಗಾರನಾಗಿ ಫೀಲ್ಡಿಂಗ್​ ನಡೆಸಿದ್ದರು.


ಲೀಗ್​ನಲ್ಲಿ ಸೂರ್ಯಕುಮಾರ್​ಗೆ ಅವಕಾಶ

ಹಾರ್ದಿಕ್​ ಪಅಮಡ್ಯ ಅವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್​ ಯಾದವ್​ ಮುಂದಿನ ಲೀಗ್​ ಪಂದ್ಯಗಳಲ್ಲಿಯೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಪಾಂಡ್ಯ ಬರುವವರೆಗೆ ಅವರಿಗೆ ಚಿಂತೆಯಿಲ್ಲ. ಭಾನುವಾರ ನಡೆದ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ 49 ರನ್​ ಬಾರಿಸಿ ಸೂರ್ಯ ತಂಡಕ್ಕೆ ಆಸರೆಯಾಗಿದ್ದರು. ಇವರು ಬಾರಿಸಿದ ಈ ಮೊತ್ತದಿಂದಾಗಿ ಭಾರತ 200 ರನ್​ಗಳ ಗಡಿ ದಾಟುಂತಾಗಿತ್ತು.

ಇದನ್ನೂ ಓದಿ IND vs ENG: ಆಂಗ್ಲರ ಬೌಲಿಂಗ್​ ದಾಳಿಗೆ ಕುಸಿದ ಭಾರತ; ಇಂಗ್ಲೆಂಡ್​ ಗೆಲುವಿಗೆ 230 ರನ್​ ಗುರಿ

ಲಂಕಾ ಮುಂದಿನ ಎದುರಾಳಿ

ಭಾರತ ತಂಡ ಮುಂದಿನ ಪಂದ್ಯದಲ್ಲಿ ಶ್ರೀಲಂಕಾದ ಸವಾಲು ಎದುರಿಸಲಿದೆ. ಈ ಪಂದ್ಯ ನವೆಂಬರ್​ 2 ರಂದು ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಮೊದಲ ತಂಡವಾಗಿ ಸೆಮಿಫೈನಲ್​ ಪ್ರವೇಶಿಸಲಿದೆ. ನಾಯಕ ರೋಹಿತ್​ ಶರ್ಮ, ಶ್ರೇಯಸ್​ ಅಯ್ಯರ್​ ಅವರಿಗೆ ಇದು ತವರಿನ ಪಂದ್ಯವಾಗಿದೆ. ಹೀಗಾಗಿ ಉಭಯ ಆಟಗಾರರ ಮಲೆ ತವರಿನ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ.

Exit mobile version