Site icon Vistara News

Ram Mandir: ‘ಪ್ರಾಣ ಪ್ರತಿಷ್ಠಾ’ ಆಹ್ವಾನ ಪಡೆದ ಟೀಮ್​ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್

Harmanpreet Kaur

ಮುಂಬಯಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಸೋಮವಾರ (ಜನವರಿ 22) ಪ್ರಾಣಪ್ರತಿಷ್ಠೆ ನೆರವೇರಿಸಲಾಗುತ್ತದೆ. ರಾಮಮಂದಿರದ (Ram Mandir) 500 ವರ್ಷಗಳ ಕನಸು ಈಗ ನನಸಾಗುತ್ತಿರುವ ಕಾರಣ ಕೋಟ್ಯಂತರ ಭಾರತೀಯರು ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಟೀಮ್​ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್(Harmanpreet Kaur)​ ಕೂಡ ರಾಮಮಂದಿರ ಉದ್ಘಾಟನೆಯ ಆಹ್ವಾನ ಪಡೆದಿದ್ದಾರೆ. ಮಾಜಿ ನಾಯಕಿ ಮಿಥಾಲಿ ರಾಜ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಸಚಿನ್ ತೆಂಡೂಲ್ಕರ್ ಅವರು ಮೊದಲು ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ಸ್ವೀಕರಿಸಿದ್ದರು. ನಂತರ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ಹರ್ಮನ್ಪ್ರೀತ್ ಕೌರ್ ಅವರಿಗೂ ಆಹ್ವಾನವನ್ನು ನೀಡಲಾಯಿತು. ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಬಿಸಿಸಿಐ (ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಅಲ್ಲಿಗೆ ಹೋಗಲು ಅನುಮತಿ ನೀಡಿದೆ.

ಬೆಳಗ್ಗೆ 6.30ರಿಂದಲೇ ಕಾರ್ಯಕ್ರಮ ಆರಂಭ

ರಾಮಮಂದಿರದಲ್ಲಿ ಬೆಳಗ್ಗೆ 6.30ರಿಂದಲೇ ಧಾರ್ಮಿಕ ವಿಧಿವಿಧಾನಗಳು ಶುರುವಾಗಲಿವೆ. ಬೆಳಗ್ಗೆ 6.30ಕ್ಕೆ ರಾಮಲಲ್ಲಾ ಮೂರ್ತಿಗೆ ಶೃಂಗಾರ ಅಥವಾ ಜಾಗರಣ ಆರತಿ ಬೆಳಗಲಾಗುತ್ತದೆ. ಇನ್ನು 7 ಗಂಟೆಯಿಂದಲೇ ರಾಮನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ರಾಮಮಂದಿರ ಟ್ರಸ್ಟ್‌ ನೀಡಿರುವ ಪಾಸ್‌ಗಳ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಭಕ್ತರು ದೇವಾಲಯ ಪ್ರವೇಶಿಸಿ ಬೆಳಗ್ಗೆ 7 ಗಂಟೆಯಿಂದ 11.30ರವರೆಗೆ ರಾಮನ ದರ್ಶನ ಪಡೆಯಬಹುದಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರತಿ ನಡೆಯಲಿದೆ.

ಇದನ್ನೂ ಓದಿ Ram Mandir : ಅಯೋಧ್ಯೆ ರಾಮನಿಗೆ ಬೆಂಗಳೂರಿನಿಂದ ತುಳಸಿ ಹಾರ ರವಾನೆ

ಪ್ರಾಣ ಪ್ರತಿಷ್ಠೆ ಎಷ್ಟು ಗಂಟೆಗೆ?

ಮಧ್ಯಾಹ್ನ 12.20ರಿಂದ 12.45ರ ಅವಧಿಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೆಲವರು ಮಾತ್ರ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿಸಲಿದ್ದಾರೆ. ಪ್ರಾಣಪ್ರತಿಷ್ಠಾಪನೆ ನೆರವೇರಿದ ಬಳಕ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತ್ತೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 7.30ಕ್ಕೆ ಸಂಧ್ಯಾರತಿಯೊಂದಿಗೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವು ಸಮಾರೋಪವಾಗಲಿದೆ.

ಪ್ರಾಣ ಪ್ರತಿಷ್ಠಾ ಎಂದರೇನು?

ಪ್ರಾಣ ಪ್ರತಿಷ್ಠಾ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ.

Exit mobile version