Site icon Vistara News

Shikhar Dhawan: ಆಯ್ಕೆ ಸಮಿತಿ ಬಗ್ಗೆ ಮೌನ ಮುರಿದ ಶಿಖರ್​ ಧವನ್

Shikhar Dhawan Indian cricketer

ನವದೆಹಲಿ: ಒಂದು ಕಾಲದಲ್ಲಿ ಭಾರತದ ಇನಿಂಗ್ಸ್​ ಆರಂಭಿಸುತ್ತಿದ್ದ ಹಿರಿಯ ಏಡಗೈ ಬ್ಯಾಟರ್​ ಶಿಖರ್​ ಧವನ್​ ಅವರು ತಂಡಕ್ಕೆ ಆಯ್ಕೆ ಮಾಡದೇ ಇರುವ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಪಕ್ಷ ಏಷ್ಯನ್​ ಗೇಮ್ಸ್​ಗೂ(Asian Games) ಅವಕಾಶ ನೀಡಿಲ್ಲವಲ್ಲ ಎಂದು ಹೇಳಿದ್ದಾರೆ.

“ಬ್ಯಾಟಿಂಗ್​ ಫಾರ್ಮ್​ನಲ್ಲಿ ಇರದೇ ಇದ್ದರೆ ಆಗ ಆಯ್ಕೆ ಮಾಡದಿರುವುದರಲ್ಲಿ ಒಂದು ನ್ಯಾಯವಿದೆ. ಆದರೆ ಕಳೆದ 2 ವರ್ಷಗಳಿಂದ ನಾನು ಭಾರತ ಕ್ರಿಕೆಟ್​ ತಂಡದ ಪರ ಆಡುವ ಅವಕಾಶವಂಚಿತನಾಗಿದ್ದೇನೆ. ಐಪಿಎಲ್​ನಲ್ಲಿ(IPL) ಉತ್ತಮ ಪ್ರದರ್ಶನ ತೋರಿದ್ದೇನೆ. ಜತೆಗೆ ಫಾರ್ಮ್​ನಲ್ಲಿರುವಾಗಲೇ ನನ್ನು ತಂಡದಿಂದ ಕೈ ಬಿಡಲಾಗಿತ್ತು. ಇದು ಯಾವ ಕಾರಣಕ್ಕೆ ಎಂದು ಇದುವರೆಗೂ ನನಗೆ ತಿಳಿದಿಲ್ಲ. ಕಳಪೆ ಪ್ರದರ್ಶನ ತೋರುತ್ತಿರುವ ಅದೆಷ್ಟೋ ಆಟಗಾರರು ಭಾರತ ಸೀನಿಯರ್​ ತಂಡದಲ್ಲಿ ಸತತವಾಗಿ ಅವಕಾಶ ಪಡೆಯುತ್ತಿದ್ದಾರೆ. ಏಷ್ಯನ್​ ಗೇಮ್ಸ್​ಗೂ ನನ್ನನ್ನು ಪರಿಗಣಿಸದೇ ಇರುವುದನ್ನು ಕೇಳಿ ಆಘಾತವಾಯಿತು” ಎಂದು ಶಿಖರ್​ ಧವನ್​ ಅಳಲು ತೋಡಿಕೊಂಡರು.

ಯುವ ಆಟಗಾರರ ಮೇಲೆ ನಂಬಿಕೆ

ತಂಡದಲ್ಲಿ ಅನೇಕ ಯುವ ಆಟಗಾರರು ಬೆಳಕಿಗೆ ಬಂದಿದ್ದಾರೆ ಶುಭಮನ್​ ಗಿಲ್​,ಇಶಾನ್​ ಕಿಶನ್​, ಋತುರಾಜ್​ ಗಾಯಕ್ವಾಡ್​ ಸೇರಿ ಇನ್ನು ಹಲವು ಆಟಗಾರರು ಇದ್ದಾರೆ. ಈ ಎಲ್ಲ ಯುವ ಪಡೆ ಭಾರತ ತಂಡದಲ್ಲಿ ಉನ್ನತ ಮಟ್ಟದ ಸಾಧನೆ ತೋರುವಂತಾಗಬೇಕು. ಯುವ ಆಟಗಾರರಿಗೆ ನನ್ನ ಪ್ರೋತ್ಸಾಹ ಸದಾ ಇರಲಿದೆ. ಏಷ್ಯನ್​ ಗೇಮ್ಸ್​ನಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಗಾಯಕ್ವಾಡ್​ಗೆ ಶುಭಹಾರೈಕೆ, ಆತ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬಲ್ಲ ಎಂದು ಧವನ್​ ಪಿಟಿಐಗೆ ತಿಳಿಸಿದ್ದಾರೆ.

ಕ್ರಿಕೆಟ್​ ಭವಿಷ್ಯದ ಬಗ್ಗೆ ಚಿಂತಿಸಿಲ್ಲ

“ನಾನು ಯಾವುದೇ ಆಯ್ಕೆದಾರರೊಂದಿಗೆ ನನ್ನ ಕ್ರಿಕೆಟ್​ ಭವಿಷ್ಯದ ಬಗ್ಗೆ ಮಾತನಾಡಿಲ್ಲ. ನಾನು ಎನ್‌ಸಿಎಗೆ ಹೋಗುತ್ತಿದ್ದೇನೆ. ಅಲ್ಲಿ ನನ್ನ ಸಮಯವನ್ನು ನಾನು ಆನಂದಿಸುತ್ತೇನೆ, ಸೌಲಭ್ಯಗಳು ಉತ್ತಮವಾಗಿವೆ. ಎನ್‌ಸಿಎ ನನ್ನ ವೃತ್ತಿಜೀವನವನ್ನು ರೂಪಿಸಿದೆ ಮತ್ತು ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳುವ ಮೂಲಕ ಧವನ್​ ತಮ್ಮ ನಿವೃತ್ತಿ ಸದ್ಯದಲ್ಲಿ ಇಲ್ಲ ಎನ್ನುವ ಸುಳಿವು ನೀಡಿದ್ದಾರೆ.

ಇದನ್ನೂ ಓದಿ IPL 2023: ಚಿರತೆಯಂತೆ ಜಿಗಿದು ಕ್ಯಾಚ್​ ಪಡೆದ ಶಿಖರ್​ ಧವನ್​; ವಿಡಿಯೊ ವೈರಲ್​

ಮುಂದಿನ ತಿಂಗಳು ಟೂರ್ನಿ ಆರಂಭ

ಏಷ್ಯನ್‌ ಕ್ರೀಡಾಕೂಟ ಸೆಪ್ಟಂಬರ್‌ ಮತ್ತು ಅಕ್ಟೋಬರ್​ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ(Hangzhou ) ನಡೆಯಲಿದೆ. ಇದೇ ಮೊದಲ ಬಾರಿ ಭಾರತ ಪುರುಷರ ಕ್ರಿಕೆಟ್‌ ತಂಡ ಏಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಏಷ್ಯಾ ಕಪ್‌ ಹಾಗೂ ಐಸಿಸಿ ಏಕದಿನ ವಿಶ್ವಕಪ್‌(ICC World Cup) ಟೂರ್ನಿಯ ಹಿನ್ನೆಲೆಯಲ್ಲಿ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಇಲ್ಲಿ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ಸ್ಟಾರ್​ಗಳು ಇಲ್ಲಿ ಸ್ಥಾನ ಪಡೆದಿದ್ದಾರೆ ಋತುರಾಜ್‌ ಗಾಯಕ್ವಾಡ್‌(Ruturaj Gaikwad) ತಂಡದ ನಾಯಕನಾಗಿದ್ದಾರೆ.

Exit mobile version