Site icon Vistara News

IND vs PAK | ರಿಷಭ್‌ ಪಂತ್‌ ಇದ್ದರೂ ದಿನೇಶ್‌ ಕಾರ್ತಿಕ್‌ ಆಡುವ ಬಳಗದಲ್ಲಿ ಚಾನ್ಸ್‌ ಪಡೆದಿದ್ದು ಹೇಗೆ?

ind vs pak

ದುಬೈ : ಪಾಕಿಸ್ತಾನ ವಿರುದ್ಧ ಪಂದ್ಯದ ಮೊದಲು ಟೀಮ್ ಇಂಡಿಯಾ ಪ್ರಕಟಗೊಂಡಾಗ ಸಾಕಷ್ಟು ಕ್ರಿಕೆಟ್‌ ಪ್ರೇಮಿಗಳು ಅಚ್ಚರಿಗೆ ಒಳಗಾಗಿದ್ದರು. ಕಾಯಂ ವಿಕೆಟ್‌ ಕೀಪರ್ ರಿಷಭ್‌ ಪಂತ್‌ ಅವರನ್ನು ಬೆಂಚು ಕಾಯಿಸಿ, ಟೀಮ್‌ ಇಂಡಿಯಾದ ಹಿರಿಯ ಆಟಗಾರ ದಿನೇಶ್‌ ಕಾರ್ತಿಕ್‌ಗೆ ವಿಕೆಟ್‌ ಹಿಂದಿನ ಜವಾಬ್ದಾರಿ ನೀಡಲಾಗಿತ್ತು. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್‌ ಸೇರಿದಂತೆ ಹಲವರು ಟೀಮ್‌ ಇಂಡಿಯಾ ಮ್ಯಾನೇಜ್ಮೆಂಟ್‌ನ ಈ ಯೋಜನೆಯನ್ನು ಟೀಕಿಸಿದ್ದಾರೆ. ಭವಿಷ್ಯದ ವಿಕೆಟ್‌ ಕೀಪರ್‌ ಅನ್ನು ಕೈ ಬಿಟ್ಟು ಕಾರ್ತಿಕ್‌ಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ ಎಂದು ಹೇಳಿದ್ದಾರೆ. ಆದರೆ, ಕಾರ್ತಿಕ್‌ ಆಯ್ಕೆ ವಿಚಾರದಲ್ಲಿ ಕೆಲವು ಲೆಕ್ಕಾಚಾರಗಳು ಕೋಚ್ ದ್ರಾವಿಡ್‌ ಹಾಗೂ ನಾಯಕ ರೋಹಿತ್‌ ಅವರ ಮುಂದಿದ್ದವು.

ಕಳೆದ ಹಲವು ಪಂದ್ಯಗಳ ಫಾರ್ಮ್‌ ಪರಿಗಣಿಸಿ ಮ್ಯಾನೇಜ್ಮೆಂಟ್‌ ಈ ಬದಲಾವಣೆ ಮಾಡಿದ್ದು ಸ್ಪಷ್ಟ. ರಿಷಭ್‌ ಪಂತ್‌ ಅವರು ಟಿ೨೦ ಮಾದರಿಯಲ್ಲಿ ಕಳೆದ ಹಲವಾರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದಾರೆ. ಜತೆಗೆ ಅವರ ಕ್ರಮಾಂಕದಲ್ಲಿ ಬ್ಯಾಟ್‌ಮಾಡುವುದಕ್ಕೆ ಸೂರ್ಯಕುಮಾರ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಇದ್ದಾರೆ. ಹೀಗಾಗಿ ಕೊನೆಯಲ್ಲಿ ಫಿನಿಶರ್‌ ಪಾತ್ರ ವಹಿಸಬಹುದಾದ ಕಾರ್ತಿಕ್‌ ಅವರನ್ನು ವಿಕೆಟ್ ಕೀಪರ್‌ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.

ದಿನೇಶ್‌ ಕಾರ್ತಿಕ್ ಐಪಿಎಲ್‌ ಸೇರಿದಂತೆ ಕಳೆದ ಕೆಲವು ಟಿ೨೦ ಪಂದ್ಯಗಳಲ್ಲಿ ಭರ್ಜರಿಯಾಗಿ ಬ್ಯಾಟ್‌ ಬೀಸಿದ್ದಾರೆ. ಅದರಲ್ಲೂ ಡೆತ್‌ ಓವರ್‌ಗಳಲ್ಲಿ ರನ್‌ ಕ್ರೋಡೀಕರಣ ಮಾಡುವುದರಲ್ಲಿ ಅವರು ನಿಸ್ಸೀಮರು. ಹೀಗಾಗಿ ಪಾಕ್‌ ವಿರುದ್ಧ ಸತತವಾಗಿ ಸ್ಫೋಟಕ ಬ್ಯಾಟಿಂಗ್ ಮಾಡುವ ಉದ್ದೇಶದಿಂದ ಕಾರ್ತಿಕ್‌ಗೆ ಅವಕಾಶ ನೀಡಲಾಗಿದೆ.

ದಿನೇಶ್ ಕಾರ್ತಿಕ್‌ ಹಿರಿಯ ಆಟಗಾರ ಎನಿಸಿಕೊಂಡ ಹೊರತಾಗಿಯೂ ವಿಕೆಟ್‌ಕೀಪರ್‌ ಆಗಿ ಜವಾಬ್ದಾರಿ ಮೆರೆಯುತ್ತಾರೆ. ಭಾನುವಾರದ ಪಂದ್ಯದಲ್ಲಿ ಇಫ್ತಿಕಾರ್ ಅವರ ಕ್ಯಾಚ್ ಹಿಡಿಯುವ ಮೂಲಕ ಅದನ್ನು ಸಾಬೀತು ಮಾಡಿದ್ದಾರೆ. ಅವರ ಈ ಸಾಮರ್ಥ್ಯವನ್ನು ಗುರುತಿಸಿ ಕೋಚ್‌ ದ್ರಾವಿಡ್‌ ಅವಕಾಶ ಕೊಟ್ಟಿದ್ದಾರೆ.

ತಂಡದ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಪಂತ್‌ಗೆ ಕೊಕ್‌ ಕೊಡಲಾಗಿದೆ. ಪಂತ್ ಅವರನ್ನೂ ಆಯ್ಕೆ ಮಾಡಿದ್ದರೆ ಒಂದು ಸ್ಪಿನ್‌ ಬೌಲಿಂಗ್‌ ಆಯ್ಕೆಯನ್ನು ಕಡಿಮೆ ಮಾಡಬೇಕಾಗಿತ್ತು. ಆದರೆ, ಭಾನುವಾರ ಪಾಕಿಸ್ತಾನ ವಿರುದ್ದ ನಾಲ್ವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಾಗಿದೆ. ಅದಕ್ಕಾಗಿ ಪಂತ್‌ ಅವರನ್ನು ಕೈಬಿಡಬೇಕಾಯಿತು.

ಇದನ್ನೂ ಓದಿ | IND vs PAK | ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಸೃಷ್ಟಿಸಿದ ಭುವನೇಶ್ವರ್‌ ಕುಮಾರ್‌

Exit mobile version