Site icon Vistara News

ICC World Cup: ರಾಹುಲ್​ ಬಂದರೆ ಈತನಿಗೆ ವಿಶ್ವಕಪ್​ ತಂಡದಲ್ಲಿ ಸ್ಥಾನವಿಲ್ಲ

KL Rahul

ನವದೆಹಲಿ: ಏಕದಿನ ವಿಶ್ವಕಪ್​ಗೆ(ICC World Cup) ಆಸ್ಟ್ರೇಲಿಯಾ ಸೇರಿ ಕೆಲ ದೇಶಗಳು ಈಗಾಲೇ ತಂಡ ಪ್ರಕಟಿಸಿದೆ. ಆದರೆ ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಭಾರತ ಕೆಲ ಆಟಗಾರರ ಫಿಟ್​ನೆಸ್​​ ರಿಪೋರ್ಟ್​ಗಾಗಿ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ. ಆದರೆ ಮಾಜಿ ಆಟಗಾರ ಆಕಾಶ್​ ಚೋಪ್ರಾ(Aakash Chopra) ಅಚ್ಚರಿಕೆಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಸ್ನಾಯು ಸೆಳೆತದ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್ ತರಬೇತಿ ಪಡೆಯುತ್ತಿರುವ ಕೆ.ಎಲ್​ ರಾಹುಲ್(KL Rahul)​ ಅವರು ತಂಡಕ್ಕೆ ಮರಳಿದರೆ ಕೇರಳದ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಸಂಜು ಸ್ಯಾಮ್ಸನ್(sanju samson)​ ಅವರು ವಿಶ್ವಕಪ್​ ತಂಡಕ್ಕೆ ಆಯ್ಕೆ ಕಷ್ಟ ಸಾಧ್ಯ ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ. ಜತೆಗೆ ಇದಕ್ಕೆ ಕಾರಣ ಏನೆಂಬುವುದನ್ನು ಕೂಡ ತಿಳಿಸಿದ್ದಾರೆ.

ರಾಹುಲ್​ ಮೊದಲ ಆಯ್ಕೆ

ರಿಷಭ್​ ಪಂತ್​ ಅವರು ಅಪಘಾತದಿಂದಾಗಿ ತಂಡದಿಂದ ಹೊರಗುಳಿದ ಕಾರಣ ಅವರ ಸ್ಥಾನಕ್ಕೆ ಅನುಭವಿ ವಿಕೆಟ್​ ಕೀಪರ್​ ಆಗಿ ರಾಹುಲ್​ ಮೊದಲ ಆಯ್ಕೆಯಾಗಿದ್ದಾರೆ. ಜತೆಗೆ ನಾಲ್ಕನೇ ಕ್ರಮಾಂಕಕ್ಕೂ ರಾಹುಲ್​ ಪರಿಹಾರ.​ ಇನ್ನು ಮೀಸಲು ಕೀಪರ್​ ಆಗಿ ಇಶಾನ್​ ಕಿಶನ್​ ಆಯ್ಕೆಯಾಗುವ ಕಾರಣ ಈ ಕೋಟ ಭರ್ತಿಯಾಗಲಿದೆ. ಹೀಗಾಗಿ ಸಂಜು ಸ್ಯಾಮ್ಸನ್​ ಅವರನ್ನು ಕೈಬಿಡುವುದು ಬಹುತೇಕ ಖಚಿತ ಎಂದು ಆಕಾಶ್​ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅಂಬಾಟಿ ರಾಯುಡು ಅವರಿಗೆ ಎದುರಾಗಿದ್ದ ಸನ್ನಿವೇಶ ಇದೀಗ ಸಂಜು ಸ್ಯಾಮ್ಸನ್‌ಗೂ ಎದುರಾಗಿದೆ. ವಿಶ್ವಕಪ್​ ಮಾತ್ರವಲ್ಲದೆ ಏಷ್ಯಾ ಕಪ್​ಗೂ ಸಂಜು ಆಯ್ಕೆಯಾಗುವುದು ಕಷ್ಟ. ಅವರಿಗೆ ಈ ಟೂರ್ನಿಯಲ್ಲಿ ಅವಕಾಶ ಸಿಗದೇ ಹೋದರು ಇನ್ನು ಕೂಡ ವಯಸ್ಸಿದೆ ಎಂದು ಚೋಪ್ರಾ ಹೇಳಿದರು.

ಇದನ್ನೂ ಓದಿ ICC World Cup 2023: ಪಾಕ್ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ; ಕೇಂದ್ರ ಸರ್ಕಾರ

ಸಂಪೂರ್ಣ ಫಿಟ್​ ಆಗಿಲ್ಲ ರಾಹುಲ್​-ಅಯ್ಯರ್​

ಕೆ.ಎಲ್​ ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಅವರು ಗಾಯದಿಂದ ಸಂಪೂರ್ಣ ಚೇತರಿಕೆ ಕಂಡು ಅಭ್ಯಾಸ ನಡೆಸುತ್ತಿದ್ದರೂ. ಅವರು ಇನ್ನೂ ಸಂಪೂರ್ಣ ಫಿಟ್​ ಆಗಿಲ್ಲ. ಏಕದಿನ ವಿಶ್ವಕಪ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ಅವಸರ ಮಾಡಿ ಇವರನ್ನು ಆಡಿಸದರೆ ಮತ್ತೆ ಗಾಯಗಳಾಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಇನ್ನೂ ಕೆಲ ದಿನಗಳ ಫಿಟ್​ನೆಸ್​ ತರಬೇತಿ ನೀಡಲಾಗುತ್ತದೆ. ಹೀಗಾಗಿ ಅವರು ಏಷ್ಯಾ ಕಪ್​ನಲ್ಲಿ(Asia Cup 2023) ಕಣಕ್ಕಿಳಿಯುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇನ್​ಸೈಡ್​ ಸ್ಪೋರ್ಟ್ಸ್​ ವರದಿ ಮಾಡಿದೆ.

ಸದ್ಯ ಎನ್​ಸಿಎಯಲ್ಲಿ ಬ್ಯಾಟಿಂಗ್​ ಮತ್ತು ಕೀಪಿಂಗ್​ ಅಭ್ಯಾಸದಲ್ಲಿ ತೊಡಗಿರುವ ರಾಹುಲ್​ ಮತ್ತು ಅಯ್ಯರ್​ ಅವರು ಸೆಪ್ಟಂಬರ್​ನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ್ಲಲಿ ಆಡುವುದು ಖಚಿತ ಎಂದು ತಿಳಿದುಬಂದಿದೆ. ಅಲ್ಲಿಯ ವರೆಗೆ ಈ ಉಭಯ ಆಟಗಾರರು ಯಾವುದೇ ಕ್ರಿಕೆಟ್​ ಸರಣಿಯಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ವಿಶ್ವಕಪ್​ನಲ್ಲಿ ಈ ಆಟಗಾರರ ಪ್ರದರ್ಶನ ಭಾರತ ತಂಡಕ್ಕೆ ಪ್ರಮುಖವಾಗಿದೆ. ಹೀಗಾಗಿ ಬಿಸಿಸಿಐ ಅವರ ಮೇಲೆ ವಿಶೇಷ ಕಾಳಜಿ ವಹಿಸಿಕೊಂಡಿದೆ.

Exit mobile version