Site icon Vistara News

IND vs AUS: ಭಾರತ-ಆಸೀಸ್​ ವಿಶ್ವಕಪ್​ ಪಂದ್ಯದ ಪಿಚ್​ ರಿಪೋರ್ಟ್; ಹವಾಮಾನ ವರದಿಯಲ್ಲಿ ಅಡಗಿದೆ ಪಂದ್ಯದ ಭವಿಷ್ಯ

MA Chidambaram Stadium

ಚೆನ್ನೈ: ಇದೇ ಮೊದಲ ಬಾರಿ ಸಂಪೂರ್ಣವಾಗಿ ವಿಶ್ವಕಪ್​ ಆತಿಥ್ಯ ವಹಿಸಿಕೊಂಡಿರುವ ಭಾರತ(IND vs AUS) ತನ್ನ ವಿಶ್ವಕಪ್​(icc world cup 2023) ಅಭಿಯಾನವನ್ನು ಭಾನುವಾರ ಆರಂಭಿಸಲಿದೆ. ಚೆನ್ನೈಯಲ್ಲಿ ನಡೆಯುವ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಪಂದ್ಯದ ಹವಾಮಾನ ವರದಿ, ಪಿಚ್​ ರಿಪೋರ್ಟ್​ ಕುರಿತ ಮಾಹಿತಿ ಇಲ್ಲಿದೆ.

ಪಿಚ್​ ರಿಪೋರ್ಟ್​

ಚೆನ್ನೈಯ ಐಕಾನಿಕ್ ಎಂ.ಎ ಚಿದಂಬರಂ ಸ್ಟೇಡಿಯಂನ ಪಿಚ್​ ಅನ್ನು ನವೀಕರಿಸಲಾಗಿದೆ. ಮೇಲ್ಮೈಗಳನ್ನು ಕೆಂಪು ಮಣ್ಣಿಗಿಂತ ಹೆಚ್ಚು ಜೇಡಿಮಣ್ಣಿನ ಅಂಶದೊಂದಿಗೆ ಕಪ್ಪು ಮಣ್ಣಿನಿಂದ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ವೇಗಿಗಳು ಹೆಚ್ಚುವರಿ ಬೌನ್ಸ್​ ನಡೆಸಲು ಸಾಧ್ಯವಿದೆ. ಆದಾಗ್ಯೂ, ಚೆನ್ನೈನಲ್ಲಿ ನಡೆಯುವ ಸ್ಪಿನ್​ ಮೋಡಿಗೇನು ಕೊರತೆಯಾಗದು. ಸ್ಪಿನ್ನರ್‌ಗಳು ಆಟದ ಉದ್ದಕ್ಕೂ ಯೋಗ್ಯವಾದ ತಿರುವು ಪಡೆಯಲಿದ್ದಾರೆ. ಇಲ್ಲಿನ ಮೊದಲ ಇನಿಂಗ್ಸ್​ನ ಎವರೇಜ್ ರನ್​ 247.

ಹವಾಮಾನ ವರದಿ

ಚೆನ್ನೈಯಲ್ಲಿ ಹಿಂಗಾರು ಮಾರುತ ಆರಂಭವಾಗುವ ಕಾರಣ ಈ ಪಂದ್ಯಕ್ಕೆ ಮಳೆಯ ಕಾಟ ತಪ್ಪಿದ್ದಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಚೆನ್ನೈಯಲ್ಲಿ ಕೆಲ ದಿನಗಳಿಂದ ರಾತ್ರಿಯ ವೇಳೆ ಮಳೆಯಾಗಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಪಂದ್ಯ ಮಧ್ಯಾಹ್ನ ಆರಂಭಗೊಳ್ಳುವ ಕಾರಣ ಒಂದು ಇನಿಂಗ್ಸ್​ ಪೂರ್ಣಗೊಳ್ಳಬಹುದು.

ಮೀಸಲು ದಿನ ಇಲ್ಲ

ಒಂದೊಮ್ಮೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ಫಲಿತಾಂಶ ನಿರ್ಧಾರವಾಗದಿದ್ದರೆ ಮೀಸಲು ದಿನ ಇರುವುದಿಲ್ಲ. ಈಗಾಗಕೇ ಐಸಿಸಿ ಮಳೆ ನಿಯಮವನ್ನು ಪ್ರಕಟಿಸಿದೆ. ಅದರಂತೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ವಿಶ್ವಕಪ್​ ಮುಖಾಮುಖಿ

ಭಾರತ ಮತ್ತು ಆಸೀಸ್​ ತಂಡಗಳು 12 ಆವೃತ್ತಿಯ ವಿಶ್ವಕಪ್​ ಮಹಾ ಸಮರದಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಒಂದು ಬಾರಿ ಫೈನಲ್​ನಲ್ಲಿ ಸೆಣಸಾಡಿವೆ. ಇದು 2003ರ ವಿಶ್ವಕಪ್​ ಟೂರ್ನಿ. ಫೈನಲ್​ನಲ್ಲಿ ಭಾರತ ಸೋಲು ಕಂಡು 2ನೇ ಬಾರಿ ಕಪ್​ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. 12 ಪಂದ್ಯಗಳ ಪೈಕಿ ಭಾರತ 4 ಪಂದ್ಯಗಳಲ್ಲಿ ಗೆದ್ದರೆ, ಆಸ್ಟ್ರೇಲಿಯಾ 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಇದನ್ನೂ ಓದಿ IND vs AUS: ಭಾರತ-ಆಸೀಸ್​ ವಿಶ್ವಕಪ್​ ಮುಖಾಮುಖಿಯೇ ಬಲು ರೋಚಕ; ಚೆನ್ನೈಯಲ್ಲೂ ನಡೆದಿತ್ತು ಒಂದು ಪಂದ್ಯ

ಭಾರತ ತಂಡದ ಪ್ಲಸ್​ ಮತ್ತು ಮೈನಸ್​ ಪಾಯಿಂಟ್

ಸಾಮರ್ಥ್ಯ: ಬ್ಯಾಟಿಂಗ್ ಅಥವಾ ಸ್ಪಿನ್ ಬೌಲಿಂಗ್ ಭಾರತದ ಶಕ್ತಿಯಾಗಿದ್ದ ದಿನಗಳು ಕಳೆದುಹೋಗಿವೆ. ಈಗ, ಇದು ಸಂಘಟಿತ ತಂಡವಾಗಿದೆ. ಅಗ್ರ 5 ಪರಿಪೂರ್ಣ ಬ್ಯಾಟರ್​ಗಳು ತಂಡಕ್ಕೆ ದೊಡ್ಡ ಕೊಡುಗೆ ನೀಡಿದರೆ, ಆ ಬಳಿಕ ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಆಸರೆಯಾಗಿ ನಿಂತು 7ನೇ ವಿಕೆಟ್​ಗೂ ಉತ್ತಮ ಇನಿಂಗ್ಸ್​ ಕಟ್ಟಬಲ್ಲರು. ಬೌಲಿಂಗ್​ನಲ್ಲಿ ಸಿರಾಜ್​, ಬುಮ್ರಾ ವಿಕೆಟ್​ ಟೇಕರ್​ ಬೌಲರ್​ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಳೆದ ಕೆಲ ಸರಣಿಯ ಪ್ರದರ್ಶನವೇ ಉತ್ತಮ ನಿದರ್ಶನ

ದೌರ್ಬಲ್ಯ: ಭಾರತ ತಂಡದ ದೌರ್ಬಲ್ಯವೆಂದರೆ ಅದು ಫೀಲ್ಡಿಂಗ್. ಈ ಹಿಂದೆ ಫೀಲ್ಡಿಂಗ್​ ಕೋಚ್​ ಆಗಿದ್ದ ಆರ್ ಶ್ರೀಧರ್ ನಿರ್ಗಮನದ ಬಳಿಕ ಭಾರತದ ಫೀಲ್ಡಿಂಗ್ ನಿಖರತೆ ಸಂಪೂರ್ಣವಾಗಿ ಕುಸಿದಿದೆ. ಟಿ ದಿಲೀಪ್ ಅವರ ಅಡಿಯಲ್ಲಿ, ಭಾರತ ಸಂಪೂರ್ಣ ಕಳಪೆ ಫೀಲ್ಡಿಂಗ್​ ನಡೆಸಿದೆ. ಏಷ್ಯಾಕಪ್​, ಆಸೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಹಲವು ಕ್ಯಾಚ್​ ಬಿಟ್ಟು ಟೀಕೆಗೆ ಒಳಗಾಗಿತ್ತು. ಇದನ್ನು ಭಾರತ ಸರಿಪಡಿಸಿಕೊಳ್ಳಲೇ ಬೇಕು.

Exit mobile version