Site icon Vistara News

IND VS BAN | ಸರಣಿ ಜೀವಂತಕ್ಕೆ ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಮ್​ ಇಂಡಿಯಾ

liton das and rohit sharma

ಢಾಕಾ: ಕಳೆದ ಭಾನುವಾರ ನಡೆದ ಬಾಂಗ್ಲಾದೇಶ(IND VS BAN) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್​ ವಿರೋಚಿತ ಸೋಲು ಕಂಡಿದ್ದ ಟೀಮ್​ ಇಂಡಿಯಾ ಬುಧವಾರ ದ್ವಿತೀಯ ಪಂದ್ಯದಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು 1-0 ಮುನ್ನಡೆ ಕಾಯ್ದುಕೊಂಡಿರುವ ಬಾಂಗ್ಲಾ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸಿ ಸರಣಿಯನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ. ಅತ್ತ ಭಾರತ ಸರಣಿ ಆಸೆ ಜೀವಂತವಿರಿಸುವ ನಿಟ್ಟಿನಲ್ಲಿ ಹೇಗಾದರೂ ಪಂದ್ಯವನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ.

ಫೀಲ್ಡಿಂಗ್​ ಸುಧಾರಣೆ ಕಾಣಬೇಕಿದೆ ಭಾರತ

ಮೊದಲ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಕಳಪೆ ಫೀಲ್ಡಿಂಗ್. ಕೆ.ಎಲ್​. ರಾಹುಲ್​ ಸೇರಿದಂತೆ ಇತರ ಆಟಗಾರು ಪಂದ್ಯದ ಪ್ರಮುಖ ಘಟ್ಟದಲ್ಲಿ ಕ್ಯಾಚ್​ ಕೈಚೆಲ್ಲಿ ಪಂದ್ಯವನ್ನು ಕಳೆದುಕೊಳ್ಳುವಂತಾಯಿತು. ಆದ್ದರಿಂದ ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಫೀಲ್ಡಿಂಗ್​ ನಡೆಸಬೇಕಿದೆ. ಉಳಿದಂತೆ ಬ್ಯಾಟಿಂಗ್​ ಕೂಡ ಸುಧಾರಣೆ ಕಾಣಬೇಕಿದೆ.

ನಾಯಕ ರೋಹಿತ್​ ಶರ್ಮಾ ಟಿ20 ವಿಶ್ವ ಕಪ್​ನಲ್ಲಿ ಅನುಭವಿಸಿದ ಬ್ಯಾಟಿಂಗ್​ ವೈಫಲ್ಯದ ಸರಣಿಯನ್ನು ಬಾಂಗ್ಲಾ ವಿರುದ್ಧವೂ ಮುಂದುವರಿಸಿದ್ದಾರೆ. ಮುಂದಿನ ವರ್ಷದ ಏಕ ದಿನ ವಿಶ್ವ ಕಪ್​ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ರೋಹಿತ್​ ಈ ಪಂದ್ಯದಿಂದಲೇ ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳಬೇಕಿದೆ. ಜತೆಗೆ ಶಿಖರ್​ ಧವನ್​ ಕೂಡ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ನೀಡಬೇಕಿದೆ.

​ಬಾಂಗ್ಲಾ ಸಮರ್ಥ ತಂಡ

ಹಿರಿಯ ಮತ್ತು ಯುವ ಆಟಗಾರರನ್ನು ಸಮತೋಲಿತವಾಗಿ ನೆಚ್ಚಿಕೊಂಡಿರುವ ಬಾಂಗ್ಲಾ ತಂಡ ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗದಲ್ಲಿ ಸಮರ್ಥವಾಗಿದೆ. ಅದರಲ್ಲೂ ಅನುಭವಿ ಆಲ್​ರೌಂಡರ್​ ಶಕಿಬ್​ ಅಲ್​ ಹಸನ್ ಮೊದಲ ಪಂದ್ಯದಲ್ಲಿ​ ಚೆಂಡನ್ನು ಬುಗುರಿಯಂತೆ ತಿರುಗಿಸಿ ಭಾರತದ ಬ್ಯಾಟರ್​ಗಳನ್ನು ಕಾಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಈ ಪಂದ್ಯದಲ್ಲಿಯೂ ಅವರ ಬೌಲಿಂಗ್​ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟಿದೆ. ಉಳಿದಂತೆ ಕೆಲ ಕ್ರಮಾಂಕದಲ್ಲಿ ಆಡಲಿಳಿದು ಪಂದ್ಯದ ಗತಿಯನ್ನೇ ಬದಲಿಸುವ ಮೆಹೆದಿ ಹಸನ್​ ಕೂಡ ಡೇಂಜರಸ್​ ಬ್ಯಾಟರ್​ ಆಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ | IND VS BAN | ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಏಕದಿನ ಪಂದ್ಯದ ಪಿಚ್​ ರಿಪೋರ್ಟ್​ ಹೇಗಿದೆ?

Exit mobile version