Site icon Vistara News

IND VS BANGLA | ಬಾಂಗ್ಲಾ ಹುಲಿಗಳನ್ನು ಬಗ್ಗು ಬಡಿದೀತೇ ಟೀಮ್​ ಇಂಡಿಯಾ

t20

ಅಡಿಲೇಡ್​: ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್ ವೈಫಲ್ಯಕ್ಕೆ ಬೆಲೆತೆತ್ತ ಟೀಮ್​ ಇಂಡಿಯಾ 5 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಇದೀಗ ಕಳೆದ ಪಂದ್ಯದಲ್ಲಿನ ಲೋಪವನ್ನು ಸರಿಪಡಿಸಿ ರೋಹಿತ್​ ಪಡೆ ಬುಧವಾರ ಅಡಿಲೇಡ್‌ ಓವಲ್ ಮೈದಾನದಲ್ಲಿ ಬಾಂಗ್ಲಾದೇಶ(IND VS BANGLA ) ವಿರುದ್ಧ ಸೆಣಸಲು ಸಜ್ಜಾಗಿದೆ. ಉಭಯ ತಂಡಗಳಿಗೂ ಸೆಮಿ ಹಾದಿಯನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಆದ್ದರಿಂದ ಈ ಪಂದ್ಯವೂ ಹೈವೋಲ್ಟೆಜ್​ನಿಂದ ಕೂಡಿರಲಿದೆ.

ಭಾರತಕ್ಕೆ ಮತ್ತೆ ಬ್ಯಾಟಿಂಗ್​ ಚಿಂತೆ

ಭಾರತ ತಂಡಕ್ಕೆ ಮತ್ತೆ ಬ್ಯಾಟಿಂಗ್​ ಚಿಂತೆ ಕಾಡಲಾರಂಭಿಸಿದೆ. ಒಂದು ಪಂದ್ಯದಲ್ಲಿ ಮಿಂಚಿದರೆ ಮತ್ತೆರಡು ಪಂದ್ಯದಲ್ಲಿ ಕಳಪೆ ಪ್ರದರ್ಶ ತೋರುತ್ತಿರುವುದು ತಂಡಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ. ಆ ಸರದಿಯಲ್ಲಿರುವ ಆಟಗಾರರೆಂದರೆ ನಾಯಕ ರೋಹಿತ್​ ಶರ್ಮಾ, ಹಾರ್ದಿಕ್​ ಪಾಂಡ್ಯ ಮತ್ತು ದಿನೇಶ್​ ಕಾರ್ತಿಕ್​. ಆರಂಭಿಕ ಆಟಗಾರ ಕೆ.ಎಲ್​. ರಾಹುಲ್ ಬ್ಯಾಟಿಂಗ್​ ಮರೆತಂತೆ ಕಾಣುತ್ತಿದೆ. ಹೀಗಾಗಿ ಟೀಕೆಗಳನ್ನು ಎದುರಿಸುವಂತಾಗಿದೆ. ಈ ಪಂದ್ಯದಿಂದ ಅವರನ್ನು ಕೈ ಬಿಟ್ಟರು ಅಚ್ಚರಿಯಿಲ್ಲ. ತಂಡದ ಆಪ್ತರಕ್ಷಕನಾಗಿ ಸದ್ಯಕ್ಕೆ ಸೂರ್ಯಕುಮಾರ್​ ಮೇಲೆ ನಂಬಿಕೆ ಇರಿಸಬಹುದು. ಕಳೆದ ಎರಡೂ ಪಂದ್ಯದಲ್ಲಿಯೂ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು.

ದಿನೇಶ್​ ಕಾರ್ತಿಕ್​ ಅನುಮಾನ

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೆನ್ನು ಸ್ನಾಯು ನೋವಿಗೆ ತುತ್ತಾಗಿ ಪಂದ್ಯಿಂದ ಹೊರಗುಳಿದಿದ್ದ ದಿನೇಶ್​ ಕಾರ್ತಿಕ್​ ಈ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಆಸ್ಟ್ರೇಲಿಯಾದಲ್ಲಿ ಚಳಿ ವಾತಾವರಣ ಇರುವುದರಿಂದ ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಗುಣವಾಗಲು 3 ರಿಂದ 5ದಿನಗಳು ಬೇಕಾಗುತ್ತದೆ. ಕಾರ್ತಿಕ್​ ಚೇತರಿಕೆಯ ಕುರಿತು ಇದುವರೆಗೂ ತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದೆಲ್ಲವನ್ನೂ ಗಮನಿಸುವಾಗ ಕಾರ್ತಿಕ್​ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಕಷ್ಟಸಾಧ್ಯ ಎನ್ನಬಹುದು. ಒಂದೆಮ್ಮೆ ಕಾರ್ತಿಕ್​ ಹೊರಗುಳಿದರೆ ಆಗ ರಿಷಭ್​ ಪಂತ್​ಗೆ ಅವಕಾಶ ಸಿಗಬಹುದು.

ಪಂತ್​ಗೆ ಅವಕಾಶ ನಿರೀಕ್ಷೆ

ಗಾಯಾಳು ದಿನೇಶ್​ ಕಾರ್ತಿಕ್ ಫಿಟ್​ ಆದರೂ, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ರಿಷಭ್​ ಪಂತ್​ ಅವರನ್ನೇ ಆಡಿಸುವುದು ಉತ್ತಮ ಎಂಬ ಮಾತುಗಳೂ ಈಗಾಗಲೆ ಕೇಳಿಬಂದಿವೆ. ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಟೆಸ್ಟ್​ ಸರಣಿಯಲ್ಲಿ ಆಕ್ರಮಣಕಾರಿ ನಿರ್ವಹಣೆ ತೋರಿದ ದಾಖಲೆ ಹೊಂದಿರುವ ಪಂತ್​, ಕೆಲ ಹೊಡೆತಗಳನ್ನು ಕಾರ್ತಿಕ್​ಗಿಂತ ಚೆನ್ನಾಗಿ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ಅಗ್ರ ಕ್ರಮಾಂಕದಲ್ಲಿ ಕಾಡುತ್ತಿರುವ ಬ್ಯಾಟಿಂಗ್​ ಸಮಸ್ಯೆಗೆ ಪಂತ್​ ಉತ್ತಮ ಆಯ್ಕೆ ಎಂಬ ಟಾಕ್​ಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಪಂತ್​ಗೆ ಅವಕಾಶ ನೀಡಿದರೂ ಅಚ್ಚರಿ ಪಡಬೇಕಿಲ್ಲ.

ಬಾಂಗ್ಲಾ ಸಾಮಾನ್ಯ ತಂಡ

ಭಾರತ ತಂಡಕ್ಕೆ ಹೋಲಿಸಿದರೆ ಬಾಂಗ್ಲಾದೇಶ ತಂಡದಲ್ಲಿ ಅಪಾಯಕಾರಿ ಆಟಗಾರರು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ ಭಾರತ ಬಾಂಗ್ಲಾ ಹುಲಿಗಳ ಸವಾಲನ್ನು ಕಡೆಗಣಿಸುವಂತಿಲ್ಲ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧ ಸಣ್ಣ ಮೊತ್ತ ಪೇರಿಸಿದರೂ. ಟೀಮ್​ ಇಂಡಿಯಾ ಬೌಲರ್​ಗಳು ಸಮರ್ಥ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಅಂತಿಮ ಓವರ್​ ತನಕ ತಂದ ಪರಿ ಅದ್ಭುತ. ಆದರೆ ಈ ಪಂದ್ಯದಲ್ಲಿ ರೋಹಿತ್​ ಮತ್ತು ವಿರಾಟ್​ ಕೊಹ್ಲಿ ಕಳಪೆ ಫೀಲ್ಡಿಂಗ್​ ನಡೆಸದೆ ಇದ್ದರೆ ಭಾರತಕ್ಕೆ ಗೆಲ್ಲುವ ಅವಕಾಶವೊಂದಿತ್ತು. ಆದ್ದರಿಂದ ಬಾಂಗ್ಲಾ ವಿರುದ್ಧ ಇಂತಹದ್ದೇ ತಪ್ಪುಗಳು ಫೀಲ್ಡಿಂಗ್​ನಲ್ಲಿ ಸಂಭವಿಸಿದರೆ ಗೆಲ್ಲುವ ಪಂದ್ಯವನ್ನು ಸೋಲುವಂತಾದಿತು. ಈ ನಿಟ್ಟಿನಲ್ಲಿ ಎಚ್ಚರಿಕೆ ಮತ್ತು ಗುಣಮಟ್ಟದ ಫೀಲ್ಡಿಂಗ್ ಅತ್ಯಗತ್ಯ.​

ಸಂಭಾವ್ಯ ತಂಡ

ಭಾರತ: ಕೆ.ಎಲ್​. ರಾಹುಲ್​, ರೋಹಿತ್​ ಶರ್ಮಾ(ನಾಯಕ), ವಿರಾಟ್​ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯ, ದೀಪಕ್​ ಹೂಡಾ/ಅಕ್ಷರ್​ ಪಟೇಲ್​, ಆರ್​.ಅಶ್ವಿನ್​/ಯಜುವೇಂದ್ರ ಚಹಲ್​, ದಿನೇಶ್​ ಕಾರ್ತಿಕ್​/ರಿಷಭ್​ ಪಂತ್​, ಮೊಹಮ್ಮದ್​ ಶಮಿ, ಭುವನೇಶ್ವರ್​ ಕುಮಾರ್​, ಅರ್ಶ್​ದೀಪ್​ ಸಿಂಗ್​.

ಬಾಂಗ್ಲಾದೇಶ: ಶಕಿಬ್​ ಅಲ್​ ಹಸನ್​(ನಾಯಕ), ಶಂಟೊ, ಸೌಮ್ಯ ಸರ್ಕಾರ್​, ಲಿಟ್ಟನ್​ ದಾಸ್​, ಅಫಿಫ್​ ಹೊಸೈನ್​, ಯಾಸಿರ್​ ಅಲಿ, ನೂರುಲ್​ ಹಸನ್​, ಮೊಸ್ದೆಕ್​ ಹೊಸೈನ್​, ಟಸ್ಕಿನ್​ ಅಹ್ಮದ್​, ಹಸನ್​ ಮಹ್ಮುದ್​, ಮುಸ್ತಾಫಿಜುರ್​ ರೆಹಮಾನ್​.

ಇದನ್ನೂ ಓದಿ | IND VS BANGLA | ಭಾರತ- ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮಳೆ ಭೀತಿ ಸಾಧ್ಯತೆ

Exit mobile version