Site icon Vistara News

IND vs ENG: ಪಂತ್ ಇದ್ದಿದ್ದರೆ ಭಾರತ ತಂಡ ಸೋಲುತ್ತಿರಲಿಲ್ಲ ಎಂದ ಅಭಿಮಾನಿಗಳು

Rishabh Pant

ಬೆಂಗಳೂರು: ಇಂಗ್ಲೆಂಡ್(IND vs ENG)​ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋತ ಬಳಿಕ ಅಭಿಮಾನಿಗಳು ರಿಷಭ್​ ಪಂತ್(Rishabh Pant) ಅವರನ್ನು ನೆನೆಸಿಕೊಂಡಿದ್ದಾರೆ. ಪಂತ್​ ಇದ್ದಿದ್ದರೆ ಪಂದ್ಯದ ಕತೆಯೇ ಬೇರೆ ಆಗುತ್ತಿತ್ತು. ಸೋಲುವ ಗತಿ ಟೀಮ್​ ಇಂಡಿಯಾಕ್ಕೆ ಬರುತ್ತಿರಲಿಲ್ಲ ಎಂದು ಮರುಗಿದ್ದಾರೆ.

ರಿಷಭ್​ ಪಂತ್​ ಅವರು ಹಲವು ಟೆಸ್ಟ್​ ಪಂದ್ಯಗಳಲ್ಲಿ ತಂಡ ಸಂಕಷ್ಟದಲ್ಲಿರುವಾಗ ಕೆಳ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿ ಅದೆಷ್ಟೋ ಬಾರಿ ಪಂದ್ಯ ಗೆಲ್ಲಿಸಿದ್ದು ಇದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಮೂರು ವರ್ಷಗಳ ಹಿಂದೆ ಗಬ್ಬಾ ಮೈದಾನದಲ್ಲಿ ಆಡಿದ್ದ ಇನಿಂಗ್ಸ್ ಯಾರೂ ಮರೆಯಲು ಸಾಧ್ಯವಿಲ್ಲ. ಇತ್ತೀಚೆಗೆ ಬಿಸಿಸಿಐ ಜೀವಮಾನದ ಸಾಧನೆಗಾಗಿ ಕರ್ನಲ್‌ ಸಿ.ಕೆ. ನಾಯ್ಡು ಪ್ರಶಸ್ತಿಯಿಂದ ಗೌರವಿತರಾದ ರವಿಶಾಸ್ತ್ರಿ  ಕೂಡ ಈ ಪ್ರಶಸ್ತಿ ಪಡೆದ ಬಳಿಕ ಮಾತನಾಡುವ ವೇಳೆ ತಮ್ಮ ಜೀವಮಾನದ ಅತ್ಯದ್ಭುತ ಪಂದ್ಯವೆಂದರೆ ಅದು ರಿಷಭ್​ ಪಂತ್​ ಆಡಿದ ಆಸೀಸ್​ ವಿರುದ್ಧದ ಗಬ್ಬಾ ಟೆಸ್ಟ್​ ಪಂದ್ಯ. ಪಂತ್​ ನಾನು ಕಂಡ ಶ್ರೇಷ್ಠ ಕ್ರಿಕೆಟಿಗ ಎಂದು ತುಂಬಾ ಹೆಮ್ಮೆಯಿಂದ ಹೇಳಿಕೊಂಡಿದ್ದರು.

2021ರಲ್ಲಿ ಗಬ್ಬಾ ಅಂಗಳದಲ್ಲಿ ನಡೆದ ಅಂತಿಮ ಟೆಸ್ಟ್​ ಪಂದ್ಯದಲ್ಲಿ 100 ಓವರ್‌ಗಳಲ್ಲಿ ಭಾರತ ಗೆಲುವಿಗೆ 328 ರನ್‌ ಗಳಿಸ ಬೇಕಿತ್ತು. ಅಂತಿಮ ದಿನ ಪಂದ್ಯ ಹೇಗೂ ತಿರುವು ಪಡೆಯಬಹುದಿತ್ತು. ಗೆದ್ದರೆ ಆಸ್ಟ್ರೇಲಿಯ ಗೆದ್ದೀತು, ಇಲ್ಲವೇ ಪಂದ್ಯ ಡ್ರಾ ಆದೀತು, ಆದರೆ ಭಾರತಕ್ಕೆ ಗೆಲುವು ಒಲಿಯುವುದು ಕಷ್ಟ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಅಲ್ಲದೇ ಬ್ರಿಸ್ಬೇನ್‌ ಅಂಗಳದ ಅಷ್ಟೂ ದಾಖಲೆಗಳು ಆಸ್ಟ್ರೇಲಿಯದ ಪರವಾಗಿದ್ದವು.

ಇದನ್ನೂ ಓದಿ WTC Points Table: ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಕುಸಿತ ಕಂಡ ಭಾರತ

ಪಂಥಾಹ್ವಾನವನ್ನು ಸ್ವೀಕರಿಸಿ ಬಂದಿದ್ದ ರಿಷಭ್‌ ಪಂತ್‌ ಎಂದಿನ ಬಿರುಸಿನ ಶೈಲಿಯಲ್ಲಿ ಬ್ಯಾಟ್‌ ಬೀಸುತ್ತ ಸಾಗಿ ಕಾಂಗರೂಗಳಿಗೆ ಸೋಲಿನ ರುಚಿ ತೋರಿಸಿದ್ದರು. ಅಂತಿಮವಾಗಿ ಜೋಶ್‌ ಹ್ಯಾಝಲ್‌ವುಡ್‌ ಎಸೆತವನ್ನು ಲಾಂಗ್‌ ಆಫ್‌ ಬೌಂಡರಿಗೆ ಬಡಿದಟ್ಟುವುದರೊಂದಿಗೆ ನೂತನ ಇತಿಹಾಸವೊಂದು ನಿರ್ಮಾಣಗೊಂಡಿತ್ತು. 32 ವರ್ಷಗಳಿಂದ ಬ್ರಿಸ್ಬೇನ್‌ನಲ್ಲಿ ಸೋಲನ್ನೇ ಕಾಣದ ಆಸ್ಟ್ರೇಲಿಯಾ ಈ ಅನಿರೀಕ್ಷಿತ ಆಘಾತಕ್ಕೆ ತತ್ತರಿಸಿ ಬಿಕ್ಕಳಿಸಿತ್ತು.! 138 ಎಸೆತಗಳಿಂದ ಅಜೇಯ 89 ರನ್‌ (9 ಬೌಂಡರಿ, ಒಂದು ಸಿಕ್ಸರ್‌) ಬಾರಿಸಿದ ರಿಷಭ್‌ ಪಂತ್‌ ಈ ಗೆಲುವಿನ ನಿಜವಾದ ಹೀರೋ ಆಗಿ ಮೆರೆದಾಡಿದ್ದರು. 

ಇಂಗ್ಲೆಂಡ್​ ವಿರುದ್ಧದ ಮೊದಲ ಪಂದ್ಯದಲ್ಲಿಯೂ ಇದೇ ರೀತಿಯ ಸನ್ನಿವೇಶವಿತ್ತು. ಯಾರಾದರೂ ಒಬ್ಬರು ಕೆಳ ಕ್ರಮಾಂಕದಲ್ಲಿ ನಿಂತು ಆಡುತ್ತಿದ್ದರೆ ಪಂದ್ಯವನ್ನು ಗೆಲ್ಲಬಹುದಿತ್ತು. ಆದರೆ ಡಿಫೆನ್ಸ್​ ಆಡಲು ಹೋಗಿ ಸತತ ವಿಕೆಟ್​ ಕಳೆದುಕೊಂಡು 28 ರನ್ ಗಳಿಂದ ಪಂದ್ಯ ಸೋತಿತು. ಒಂದೊಮ್ಮೆ ಪಂತ್​ ಇರುತ್ತಿದ್ದರೆ ಭಾರತ ಖಂಡಿತವಾಗಿಯೂ ಈ ಪಂದ್ಯ ಗೆದ್ದು ಬೀಗುತ್ತಿತ್ತು ಎನ್ನುವುದು ಅಭಿಮಾನಗಳ ಮಾತು.

2022ರ ಡಿಸೆಂಬರ್​ 30ರಂದು(rishabh pant accident date) ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್​ ಸದ್ಯ ಚೇತರಿಕೆಯ ಹಾದಿಯಲ್ಲಿದ್ದಾರೆ. ಬಹುತೇಕ ಫಿಟ್​ ಆಗಿರುವ ಅವರು ಇದೇ ವರ್ಷದ ಐಪಿಎಲ್​ ಟೂರ್ನಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಪಂತ್ ಅಂದಿನ ಕಾರು ಅಪಘಾತದಲ್ಲಿ​ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

Exit mobile version