Site icon Vistara News

IND vs ENG: ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯಕ್ಕೆ ಚೇತೇಶ್ವರ್ ಪೂಜಾರ!

Cheteshwar Pujara

ರಾಜ್​ಕೋಟ್​: ರಾಷ್ಟ್ರೀಯ ತಂಡದ ಪರ ರನ್‌ ಕಲೆ ಹಾಕುವಲ್ಲಿ ವಿಫಲರಾದ ಕಾರಣ ಟೀಮ್​ ಇಂಡಿಯಾದಿಂದ ದೂರ ಉಳಿದಿರುವ ಹಿರಿಯ ಆಟಗಾರ ಚೇತೇಶ್ವರ್ ಪೂಜಾರ(Cheteshwar Pujara) ಅವರು ಸದ್ಯ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ರನ್​ ಮಳೆಯನ್ನೇ ಸುರಿಸುತ್ತಿದ್ದಾರೆ. ಹೀಗಾಗಿ ಅವರನ್ನು ಇಂಗ್ಲೆಂಡ್(IND vs ENG)​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಪ್ರಸಕ್ತ ಥರುವಿನ ರಣಜಿ ಟ್ರೋಫಿ ಕ್ರಿಕೆಟ್​ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪೂಜಾರ ದ್ವಿಶತಕ ಬಾರಿಸಿ ಮಿಂಚಿದ್ದರು. ಆದರೂ ಕೂಡ ಅವರನ್ನು ಇಂಗ್ಲೆಂಡ್​ ಸರಣಿಗೆ ಆಯ್ಕೆ ಮಾಡಿರಲಿಲ್ಲ. ಇದೀಗ ಶುಕ್ರವಾರ ರಾಜಸ್ಥಾನ ವಿರುದ್ಧ ಪೂಜಾರ ಶತಕ ಬಾರಿಸಿ ಗಮನಸೆಳೆದಿದ್ದಾರೆ. ಸೌರಾಷ್ಟ್ರ ಪರ ಆಡುವ ಪೂಜಾರ 230 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ 110 ರನ್ ಸಿಡಿಸಿ ಅಬ್ಬರಿಸಿದ್ದಾರೆ.

ಇದನ್ನೂ ಓದಿ IND vs ENG: ಭಾರತ ತಂಡ ಪ್ರಕಟ ವಿಳಂಬಕ್ಕೆ ಏನು ಕಾರಣ?

ವಿರಾಟ್​ ಕೊಹ್ಲಿ ಅವರು ಇಂಗ್ಲೆಂಡ್​ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐಗೆ ತಿಳಿಸಿರುವುದಾಗಿ ವರದಿಯಾಗಿದೆ. ಮತ್ತೊಂದೆಡೆ ಅಯ್ಯರ್​ ಕೂಡ ಗಾಯಗೊಂಡು ಆಡುವುದು ಅನುಮಾನ ಎನ್ನಲಾಗಿದೆ. ತಂಡದಲ್ಲಿ ಅನುಭವಿ ಆಟಗಾರರ ಕೊರೆಯೊಂದು ಕಾಡಿದೆ. ಹೀಹಾಗಿ ಸದ್ಯ ದೇಶೀಯ ಕ್ರಿಕೆಟ್​ನಲ್ಲಿ ಉತ್ತಮವಾಗಿ ಆಡುತ್ತಿರುವ ಚೇತೇಶ್ವರ್​ ಪೂಜಾರ ಅವರನ್ನು ಉಳಿದ ಪಂದ್ಯಗಳಿಗಾಗಿ ಭಾರತ ತಂಡಕ್ಕೆ ಆಯ್ಕೆ ಮಾಡಲು ಬಿಸಿಸಿಐ ಮತ್ತು ಆಯ್ಕೆ ಸಮಿತಿ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್​ಕೋಟ್​ ಪೂಜಾರ ಅವರ ತವರು ಮೈದಾನವೂ ಆಗಿದೆ.

35 ವರ್ಷದ ಪೂಜಾರ ಕೊನೆಯ ಬಾರಿ ಭಾರತ ಪರ ಆಡಿದ್ದು ಜುಲೈ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ. ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದರು. ಪೂಜಾರ ಎರಡೂ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್​ನಲ್ಲಿ ವಿಕೆಟ್​ಗೆ ಬಂದ ಚೆಂಡನ್ನು ಬ್ಯಾಟ್​ ಎತ್ತಿ ಹಿಡಿದು ಕ್ಲೀನ್​ ಬೌಲ್ಡ್​ ಆಗಿದ್ದರು. ಪೂಜಾರ ಈ ರೀತಿ ವಿಕೆಟ್​ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು. ಪೂಜಾರ ಇದುವರೆಗೆ ಭಾರತ ಪರ 103 ಟೆಸ್ಟ್​ ಪಂದ್ಯ ಆಡಿ 7195 ರನ್​ ಬಾರಿಸಿದ್ದಾರೆ. ಇದರಲ್ಲಿ 19 ಶತಕ ಮತ್ತು 35 ಅರ್ಧಶತಕ ಒಳಗೊಂಡಿದೆ.

ಮುಂಬೈ ಪರ ದೇಶೀಯ ಕ್ರಿಕೆಟ್​ ಟೂರ್ನಿ ಆಡುವ ಸರ್ಫರಾಜ್​ ಖಾನ್ ಅವರು ದ್ವಿತೀಯ ಟೆಸ್ಟ್​ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ ಆಡುವ ಬಳಗದಲ್ಲಿ ಅವಕಾಶ ಪಡೆದಿರಲಿಲ್ಲ.​ ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳಲ್ಲಿ ಕ್ರಮವಾಗಿ 96 ಮತ್ತು 55 ರನ್ ಬಾರಿಸಿದ್ದರು. ಹಿಂದಿನ ಮೂರು ರಣಜಿ ಟ್ರೋಫಿ ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ತೋರಿದ್ದರು. ಮೂರನೇ ಟೆಸ್ಟ್​ ಪಂದ್ಯಕ್ಕೂ ಇವರು ಆಯ್ಕೆಯಾಗುವ ಸಾಧ್ಯತೆ ಇದ್ದು ಶ್ರೇಯಸ್​ ಅಯ್ಯರ್​ ಸ್ಥಾನದಲ್ಲಿ ಆಡುವ ನಿರೀಕ್ಷೆ ಇದೆ. ಒಂದೊಮ್ಮೆ ಅವರು ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಿದರೆ ಇದು ಅವರ ಪದಾರ್ಪಣ ಪಂದ್ಯವಾಗಲಿದೆ.

Exit mobile version