Site icon Vistara News

IND VS NZ | ನ್ಯೂಜಿಲೆಂಡ್​ ಪ್ರವಾಸ ಹಾರ್ದಿಕ್​ ಪಾಂಡ್ಯ ಯುಗಕ್ಕೆ ಮುನ್ನುಡಿಯೇ?

new zealand vs india t20 2022

ವೆಲ್ಲಿಂಗ್ಟನ್​: ಕಳೆದ ದುಬೈ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಎರಡು ಟಿ20 ವಿಶ್ವ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಟೀಮ್​ ಇಂಡಿಯಾ(IND VS NZ ) ಹೀನಾಯವಾಗಿ ಸೋತು ಹೊರಬಿದ್ದ ಬಳಿಕ ಭಾರತದ ಅಭಿಮಾನಿಗಳ ಜತೆಗೆ ಮಾಜಿ ಕ್ರಿಕೆಟಿಗರ ಒಂದೇ ಕೂಗು ಚುಟುಕು ಮಾದರಿಯ ಕ್ರಿಕೆಟ್‌ನಿಂದ ಸೀನಿಯರ್‌ಗಳನ್ನೆಲ್ಲ ಕೈಬಿಟ್ಟು ಯುವ ಪಡೆಯೊಂದನ್ನು ರೂಪಿಸಿ ಇವರನ್ನು 2024ರ ವಿಶ್ವ ಕಪ್‌ಗೆ ಸಜ್ಜುಗೊಳಿಸಬೇಕೆನ್ನುವುದು. ಇದಕ್ಕೆ ಈಗ ಕಾಲ ಸನ್ನಿಹಿತವಾದಂತಿದ್ದೆ. ನ್ಯೂಜಿಲೆಂಡ್​ ಪ್ರವಾಸದಲ್ಲಿರುವ ಹಾರ್ದಿಕ್​ ಪಾಂಡ್ಯ ನೇತೃತ್ವದ ತಂಡ, ಈ ಸರಣಿ ಗೆದ್ದರೆ ಪಾಂಡ್ಯ ಯುಗ ಇಲ್ಲಿಂದಲೇ ಆರಂಭವಾಗುವ ಸಾಧ್ಯತೆ ಇದೆ.

ಹಿರಿಯರ ಅನುಪಸ್ಥಿತಿ

ಭಾರತ ತಂಡದ ಖಾಯಂ ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ದಿನೇಶ್‌ ಕಾರ್ತಿಕ್‌, ಆರ್‌. ಅಶ್ವಿ‌ನ್‌, ಮೊಹಮ್ಮದ್‌ ಶಮಿ ಮೊದಲಾದ ಸೀನಿಯರ್‌ಗಳಿಗೆಲ್ಲ ಈ ಸರಣಿಗೆ ವಿಶ್ರಾಂತಿ ನೀಡಿದ್ದು. ಐಪಿಎಲ್​ನಲ್ಲಿ ಚೊಚ್ಚಲ ನಾಯಕತ್ವದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ಮತ್ತು ಐರ್ಲೆಂಡ್​ ವಿರುದ್ಧ ಸರಣಿ ಗೆದ್ದ ಹಾರ್ದಿಕ್‌ ಪಾಂಡ್ಯ ನ್ಯೂಜಿಲೆಂಡ್​ನಲ್ಲಿ ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ. ಒಂದೊಮ್ಮೆ ಸೀನಿಯರ್‌ಗಳನ್ನೆಲ್ಲ ಶಾಶ್ವತವಾಗಿ ಹೊರಗಿರಿಸಿ ಪಾಂಡ್ಯ ಮತ್ತು ಯುವ ತಂಡವನ್ನೇ ಮುಂದುವರಿಸುವುದು ಬಿಸಿಸಿಐಯ ಮುಂದಿನ ಯೋಜನೆ ಆಗಿದ್ದರೂ ಅಚ್ಚರಿಯೇನಿಲ್ಲ. ಏಕೆಂದರೆ ಇಲ್ಲಿಂದಲೇ 2024ರ ಟಿ20 ವಿಶ್ವ ಕಪ್‌ಗೆ ಸಿದ್ಧತೆ ಆರಂಭಗೊಂಡಂತಾಗುತ್ತದೆ.

ಟಿ20 ಭವಿಷ್ಯಕ್ಕೊಂದು ದಿಕ್ಸೂಚಿ

ಟೀಮ್​ ಇಂಡಿಯಾ ನ್ಯೂಜಿಲೆಂಡ್​ ಪ್ರವಾಸದಲ್ಲಿ 3 ಟಿ20 ಮತ್ತು ಏಕದಿನ ಪಂದ್ಯಗಳನ್ನಾಡಲಿದೆ. ಶುಕ್ರವಾರವೇ ಮೊದಲ ಮುಖಾಮುಖಿ. ಇಲ್ಲಿ ಪಾಂಡ್ಯ ಪಡೆ ಮೇಲುಗೈ ಸಾಧಿಸಿದರೆ ರೋಹಿತ್‌ ಶರ್ಮ ಖಾಯಂ ಆಗಿ ಹೊರಗುಳಿಯುವುದರಲ್ಲಿ ಅನುಮಾನವಿಲ್ಲ. ಜತೆಗೆ ಮೂವತ್ತು ವರ್ಷ ದಾಟಿದ ಭುವನೇಶ್ವರ್​, ಶಮಿ, ಆರ್​. ಅಶ್ವಿನ್​, ಕೊಹ್ಲಿ, ದಿನೇಶ್​ ಕಾರ್ತಿಕ್ ಅವರಿಗೂ ಟಿ20 ಬಾಗಿಲು ಬಂದ್​ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಬಹುದು.​ ಆಗ ಶುಭಮನ್‌ ಗಿಲ್‌, ಇಶಾನ್‌ ಕಿಶನ್‌, ದೀಪಕ್‌ ಹೂಡಾ, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ಉಮ್ರಾನ್‌ ಮಲಿಕ್‌, ಮೊಹಮ್ಮದ್‌ ಸಿರಾಜ್‌ ಮೊದಲಾದವರು ಭಾರತದ ಟಿ20 ಕ್ರಿಕೆಟಿಗೆ ನೂತನ ದಿಶೆಯೊಂದನ್ನು ಕಲ್ಪಿಸುವ ಬಲವಾದ ನಿರೀಕ್ಷೆ ಇದೆ. ಒಟ್ಟಾರೆ ಕಿವೀಸ್​ ಸರಣಿಯ ಫ‌ಲಿತಾಂಶ ಭಾರತೀಯ ಟಿ20 ಭವಿಷ್ಯಕ್ಕೊಂದು ದಿಕ್ಸೂಚಿ ಆಗಬಹುದು ಎಂಬುದೊಂದು ನಿರೀಕ್ಷೆ.

ಇದನ್ನೂ ಓದಿ | IND VS NZ | ಕಿವೀಸ್​​ ವಿರುದ್ಧದ ಸರಣಿಯಲ್ಲಿ ಸ್ವತಂತ್ರವಾಗಿ ಆಡುವಂತೆ ಹಾರ್ದಿಕ್​ ಪಡೆಗೆ ಲಕ್ಷ್ಮಣ್‌ ಕಿವಿಮಾತು

Exit mobile version