Site icon Vistara News

IND vs PAK: ಕೆಟ್ಟ ಪದದಿಂದ ಇಶಾಂತ್​ ನಿಂದಿಸಿದ್ದರು; ಹಳೆಯ ಘಟನೆ ನೆನೆದ ಪಾಕ್​ ಮಾಜಿ ಆಟಗಾರ

ishant sharma and kamran aklmal

ಕರಾಚಿ: ಭಾರತ ಮತ್ತು ಪಾಕಿಸ್ತಾನ(IND vs PaK) ನಡುವಿನ ಪಂದ್ಯ ಎಂದರೆ ಕೇವಲ ಎರಡು ದೇಶಗಳ ಕ್ರಿಕೆಟ್​ ಅಭಿಮಾನಿಗಳ ನಡುವಿನ ಸಮರಕ್ಕೆ ಮಾತ್ರ ಸೀಮಿತವಾಹಿಲ್ಲ. ಫೀಲ್ಡ್​ನಲ್ಲಿ ಆಡುವ ಇತ್ತಂಡಗಳ ಆಟಗಾರರ ಮಧ್ಯೆಯೂ ಸಮರಗಳು ನಡೆಯುತ್ತಲೇ ಇರುತ್ತದೆ. ಪರಸ್ಪರ ಗುದ್ದಾಟ, ವಾಗ್ವಾದ, ದೃಷ್ಟಿ ಯುದ್ಧ ಹೀಗೆ ಹಲವು ಘಟನೆಗಳು ನಡೆಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಈ ಪಂದ್ಯವನ್ನು ಹೈವೋಲ್ಟೇಜ್​ ಎಂದು ಕರೆಯಲಾಗುತ್ತದೆ. 2013ರಲ್ಲಿ ನಡೆದ ಪಂದ್ಯವೊಂದರಲ್ಲಿ ನಡೆದ ಘಟನೆಯನ್ನು ಪಾಕ್​ ಮಾಜಿ ಆಟಗಾರ ಕಮ್ರಾನ್​ ಅಕ್ಮಲ್(Kamran Akmal) ಮೆಲುಕು ಹಾಕಿದ್ದಾರೆ.

ಕೆಟ್ಟ ಪದದಿಂದ ಬೈದ ಇಶಾಂತ್​

ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ ಕೊನೆಯ ಬಾರಿ ಏಕದಿನ ಮತ್ತು ಟಿ20 ಸರಣಿ ಆಡಿದ್ದು 2012-13ರಲ್ಲಿ, ಇದಾಗ ಬಳಿಕ ಉಭಯ ತಂಡಗಳು ತಮ್ಮ ತಮ್ಮ ದೇಶದಲ್ಲಿ ದ್ವಿಪಕ್ಷೀಯ ಸರಣಿ ಆಡಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಅಂದು ಭಾರತದಲ್ಲಿ ನಡೆದ ಟಿ20 ಸರಣಿಯಲ್ಲಿ ಇಶಾಂತ್​ ಶರ್ಮ(Ishant Sharma) ಜತೆಗೆ ನಡೆದ ವಾಗ್ವಾದ ಘಟನೆಯೊಂದನ್ನು ಇದೀಗ ಕಮ್ರಾನ್​ ಅಕ್ಮಲ್​ ನೆನಪಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅಕ್ಮಲ್​, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯ ಇದಾಗಿತ್ತು. ಬೌಲಿಂಗ್​ ನಡೆಸುತ್ತಿದ್ದ ಇಶಾಂತ್​ ಶರ್ಮ ನನ್ನ ವಿಕೆಟ್​ ಕಿತ್ತ ಜೋಶ್​ನಲ್ಲಿ ಕೆಟ್ಟ ಪದದಿಂದ ಬೈದರು ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡರು.

ಧೋನಿ,ರೈನಾಗೆ ಧನ್ಯವಾದ

ಇಶಾಂತ್​ ಅವರು ವಿಕೆಟ್​ ಕಿತ್ತ ಖುಷಿಯಲ್ಲಿ ನನಗೆ ಕೆಟ್ಟ ಪದದಿಂದ ಬೈದರು. ತಕ್ಷಣ ನಾನು ಕೂಡ ಇಶಾಂತ್​ ಬಳಿ ವಾಗ್ವಾದಕ್ಕೆ ಮುಂದಾದೆ. ಇದೇ ವೇಳೆ ನಾಯಕನಾಗಿದ್ದ ಮಹೇಂದ್ರ ಸಿಂಗ್​ ಧೋನಿ(MS Dhoni) ಮತ್ತು ಸುರೇಶ್​ ರೈನಾ(suresh raina) ಅವರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅವರಿಗೂ ಇಶಾಂತ್​ ಮಾಡಿದ ತಪ್ಪಿನ ಬಗ್ಗೆ ತಿಳಿದಿತ್ತು. ಹೀಗಾಗಿ ಧೋನಿ ಅವರು ಇಶಾಂತ್​ಗೆ ಏನೋ ವಾರ್ನಿಂಗ್​ ನೀಡಿ ಅಲ್ಲಿಂದ ಕಳುಹಿಸಿದರು, ಇದಕ್ಕಾಗಿ ನಾನು ಧೋನಿ ಮತ್ತು ರೈನಾಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದರು. ಕಮ್ರಾನ್​ ಅವರು ಕೇವಲ ಒಂದು ರನ್​ಗೆ ಇಶಾಂತ್​ಗೆ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ ICC World Cup: ಈ ಆಟಗಾರ ತಂಡದಲ್ಲಿ ಇಲ್ಲದಿದ್ದರೆ ಭಾರತ ಪಾಕ್​ ವಿರುದ್ಧ ಸೋಲುವುದು ಖಚಿತ; ಕೈಫ್​

ನಾನು ಪ್ರಾಮಾಣಿಕನಾಗಿದ್ದೆ, ಇಶಾಂತ್​ ಅವರೇ ತಪ್ಪು ಮಾಡಿದ್ದರು. ದ್ವಿತೀಯ ಪಂದ್ಯಕ್ಕೆ ಅಹಮದಾಬಾದ್​ಗೆ ತೆರಳುವ ವೇಳೆ ವಿರಾಟ್​ ಕೊಹ್ಲಿ, ಹಫೀಜ್​ ಮತ್ತು ಮಲಿಕ್​ ಅವರು ಈ ಘಟನೆ ಬಗ್ಗೆ ಕೇಳಿದರು. ಆಗ ಇಶಾಂತ್​ ಅವರು ನಾನು ಕೆಟ್ಟ ಪದ ಬಳಕೆ ಮಾಡಿದ್ದು ನಿಜ ಎಂದು ಹೇಳಿದರು. ಇದು ಹೈವೋಲ್ಟೇಜ್​ ಪಂದ್ಯದ ವೇಳೆ ಸಹಜ. ಆದರೆ ನಮ್ಮಿಬ್ಬರ ಮಧ್ಯೆ ಯಾವುದೇ ದ್ವೇಷವಿಲ್ಲ ಎಂದರು.

ಪಂದ್ಯ ಸೋತ ಭಾರತ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಭಾರತ ಗೌತಮ್​ ಗಂಭೀರ್​(43) ಮತ್ತು ಅಜಿಂಕ್ಯ ರಹಾನೆ(42) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 133 ರನ್​ ಗಳಿಸಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಮೊಹಮ್ಮದ್​ ಹಫೀಜ್​(61) ಮತ್ತು ಶೋಯೆಬ್​ ಮಲಿಕ್​ ಅಜೇಯ(57) ಅರ್ಧಶತಕದ ನೆರವಿನಿಂದ 5 ವಿಕೆಟ್​ಗೆ 134 ರನ್​ ಗಳಿಸಿ 5 ವಿಕೆಟ್​ಗಳ ಗೆಲುವು ಸಾಧಿಸಿತ್ತು.

Exit mobile version