Site icon Vistara News

IND vs WI: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ; ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ!

Mukesh Kumar gets a pat on the head from Arshdeep Singh

ಗಯಾನಾ: ವೆಸ್ಟ್​ ಇಂಡೀಸ್(IND vs WI)​ ವಿರುದ್ಧ ಈಗಾಗಲೇ ಮೊದಲೆರಡು ಟಿ20 ಪಂದ್ಯಗಳನ್ನು ಸೋತಿರುವ ಭಾರತ ತಂಡಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಮಂಗಳವಾರ ನಡೆಯುವ ಮೂರನೇ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಸ್ಥಿತಿಯಲ್ಲಿ ಕಣಕ್ಕಿಳಿಯಬೇಕಿದೆ. ಸೋತರೆ ಸರಣಿ ಸೋಲಿನ ಮುಖಭಂಗ ಅನುಭವಿಸಲಿದೆ. ಈ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ನಡೆಸಲಿದೆ.

ಮೂರು ಬದಲಾವಣೆ ಸಾಧ್ಯತೆ

ಕಳೆದ ಪಂದ್ಯದಿಂದ ಹೊರಗುಳಿದಿದ್ದ ಕುಲ್​ದೀಪ್​ ಯಾದವ್​ ಅವರು ಮತ್ತೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರ ಬದಲಾಗಿ ದ್ವಿತೀಯ ಪಂದ್ಯದಲ್ಲಿ ಆಡಿದ ರವಿ ಬಿಷ್ಣೋಯಿ ಹೊರಗುಳಿಯುವುದು ಖಚಿತ. ಹಿಂದಿನ ಪಂದ್ಯದಲ್ಲಿ ಅವರು ದುಬಾರಿಯಾಗಿ ಪರಿಣಮಿಸಿದ್ದರು. ಮುಖೇಶ್​ ಕುಮಾರ್​ ಬದಲು ಅವೇಶ್​ ಖಾನ್​ ಆಡುವ ಸಾಧ್ಯತೆ ಇದೆ. ಬ್ಯಾಟಿಂಗ್​ ವಿಭಾಗದಲ್ಲಿ ಸಂಜು ಸ್ಯಾಮ್ಸನ್​ ಕೈ ಬಿಟ್ಟು ಯಶಸ್ವಿ ಜೈಸ್ವಾಲ್​ ಇನಿಂಗ್ಸ್​ ಆರಂಭಿಸುವ ಸೂಚನೆ ಇದೆ. ಏಕೆಂದರೆ ಸಂಜು ಆಡಿದ ಎರಡೂ ಪಂದ್ಯಗಳಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಜತೆಗೆ ತಂಡದ ಸೋಲಿಗೆ ಬ್ಯಾಟಿಂಗ್​ ವೈಫಲ್ಯವೇ ಪ್ರಮುಖ ಕಾರಣವಾಗಿದೆ. ಹೀಗಾಗಿ ಬ್ಯಾಟಿಂಗ್​ ವಿಭಾಗದಲ್ಲಿಯೂ ಬದಲಾವಣೆ ನಿರೀಕ್ಷಿತ ಎನ್ನಲಡ್ಡಿಯಿಲ್ಲ.

ಏಳನೇ ಸರಣಿ ವಶಪಡಿಸುವ ಹಾದಿ ಕಠಿಣ

ಭಾರತ-ವಿಂಡೀಸ್‌ ಈವರೆಗೆ 8 ಟಿ20 ಸರಣಿಗಳನ್ನಾಡಿವೆ. ಈ ಪೈಕಿ ಭಾರತ 6ರಲ್ಲಿ ಗೆದ್ದಿದ್ದು, 2 ಸರಣಿಯನ್ನು ವಿಂಡೀಸ್‌ ಕೈವಶಪಡಿಸಿಕೊಂಡಿತ್ತು. ಉಭಯ ತಂಡಗಳ ಕೊನೆ 5 ಸರಣಿಗಳಲ್ಲೂ ಭಾರತ ಗೆದ್ದಿದೆ. 2017ರಲ್ಲಿ ಕೊನೆ ಬಾರಿ ವಿಂಡೀಸ್‌ ಸರಣಿ ಜಯಿಸಿದೆ. 7ನೇ ಸರಣಿ ಜಯದ ಯೋಜನೆಯಲ್ಲಿದ್ದ ಭಾರತದ ಹಾದಿ ಸದ್ಯ ಸಂಕಷ್ಟಕ್ಕೆ ಸಿಲುಕಿದೆ. ಆಡಿದ ಮೊದಲೆರಡು ಪಂದ್ಯಗಳನ್ನು ಸೋತಿರುವುದು ಇದಕ್ಕೆ ಕಾರಣ. ಸದ್ಯ ಹಾರ್ದಿಕ್(hardik pandya)​ ಪಡೆಯ ಪ್ರದರ್ಶನ ನೋಡುವಾಗ ಸರಣಿ ಗೆಲ್ಲುವುದು ಕಷ್ಟಕರ ಎನ್ನುವಂತಿದೆ. ಐಪಿಎಲ್​ನಲ್ಲಿ ತೋರಿದ ಪ್ರತಾಪ ಇಲ್ಲಿ ಕಾಣಿಸುತ್ತಿಲ್ಲ. ಒಂದೆರಡು ಆಟಗಾರರು ಬಿಟ್ಟರೆ ಉಳಿದೆಲ್ಲರು ಒಂದಕಿಗೆ ಸೀಮಿತರಾಗುತ್ತಿದ್ದಾರೆ.

ಇದನ್ನೂ ಓದಿ ind vs wi : ಭಾರತ- ವೆಸ್ಟ್​ ಇಂಡೀಸ್ ಮೂರನೇ ಟಿ20 ಪಂದ್ಯ ನಡೆಯುವ ಪಿಚ್ ಹೇಗಿದೆ?

ಹವಾಮಾನ ವರದಿ

ಕಳೆದ ಪಂದ್ಯವೂ ಇದೇ ಮೈದಾನದಲ್ಲಿ ನಡೆದಿತ್ತು. ಪಂದ್ಯಕ್ಕೆ ಯಾವುದೇ ಮಳೆಯ ಸಮಸ್ಯೆ ಎದುರಾಗಿರಲಿಲ್ಲ. ಈ ಪಂದ್ಯಕ್ಕೂ ಮಳೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಸಿ ವಾತಾವರಣ ಕಂಡುಬರಲಿದೆ ಎಂದು ತಿಳಿಸಿದೆ. ಹೀಗಾಗಿ ಪಂದ್ಯ ಸರಾಗವಾಗಿ ಸಾಗಲಿದೆ.

ತಿಲಕ್​ ವರ್ಮ ಮೇಲೆ ನಂಬಿಕೆ

ಸದ್ಯ ಭಾರತ ಪರ ಯುವ ಆಟಗಾರ ತಿಲಕ್​ ವರ್ಮಾ(tilak varma) ಅವರು ಮಾತ್ರ ಏಕಾಂಗಿ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಐಪಿಎಲ್​ನಲ್ಲಿಯೂ ಅವರು ಹಲವು ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಮೊದಲ ಪಂದ್ಯದಲ್ಲಿ 39 ರನ್​ ಗಳಿಸಿದ್ದ ಅವರು ದ್ವಿತೀಯ ಪಂದ್ಯದಲ್ಲಿ 51 ರನ್​ ಬಾರಿಸಿ ಭಾರತ ತಂಡದ ನೆರವಿಗೆ ನಿಂತಿದ್ದರು. ಒಂದೊಮ್ಮೆ ಅವರು ಕೂಡ ಅಗ್ಗಕ್ಕೆ ಔಟಾಗುತ್ತಿದ್ದರೆ ತಂಡದ ಮೊತ್ತ 100ಗಡಿ ದಾಡುವುದು ಕೂಡ ಅನುಮಾನ ಎನ್ನುವಂತಿತ್ತು. ಇದೀಗ ಸರಣಿ ನಿರ್ಣಾಯಕ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್​ ಮೇಲೆ ತಂಡ ಹೆಚ್ಚು ವಿಶ್ವಾಸವಿರಿಸಿದೆ.

ಸಂಭಾವ್ಯ ತಂಡ

ವೆಸ್ಟ್​ ಇಂಡೀಸ್​: ರೋವ್ಮನ್ ಪೊವೆಲ್‌ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ರೋಸ್ಟನ್ ಚೇಸ್, ಶಿಮ್ರೋನ್ ಹೆಟ್​ಮೇರ್​, ಜೇಸನ್ ಹೋಲ್ಡರ್, ಶೈಯ್​ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್​, ಒಶಾನೆ ಥಾಮಸ್.

ಭಾರತ: ಇಶಾನ್​ ಕಿಶನ್​, ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​​ ಪಾಂಡ್ಯ(ನಾಯಕ),ಅಕ್ಷರ್​ ಪಟೇಲ್​, ತಿಲಕ್​ ವರ್ಮ ಯಜುವೇಂದ್ರ ಚಹಲ್​, ಕುಲ್​ದೀಪ್​ ಯಾದವ್​, ಆರ್ಶ್​ದೀಪ್​ ಸಿಂಗ್​, ​ಅವೇಶ್​ ಖಾನ್​.

Exit mobile version