Site icon Vistara News

Asian Games : ವಿವಾದಾತ್ಮಕ ಕಬಡ್ಡಿ ಫೈನಲ್​ನಲ್ಲಿ ಕೊನೆಗೂ ಚಿನ್ನ ಗೆದ್ದ ಭಾರತ ತಂಡ

Kabaddi Gold

ನವದೆಹಲಿ: ಬಹುನಿರೀಕ್ಷಿತ ಭಾರತ ಮತ್ತು ಇರಾನ್ ಏಷ್ಯನ್ ಗೇಮ್ಸ್ (Asian Games) ಪುರುಷರ ಕಬಡ್ಡಿ ಫೈನಲ್ ಪಂದ್ಯದ ವೇಳೆ ಉಂಟಾದ ವಿವಾದದಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತಗೊಳಿಸಲಾಯಿತು. ಕೋರ್ಟ್​ನೊಳಗಿನ ‘ಲಾಬಿ’ ಪ್ರದೇಶದ ಕುರಿತ ನಿಯಮದ ಸ್ಪಷ್ಟತೆಯ ಕೊರತೆಯಿಂದಾಗಿ ಸಮಸ್ಯೆ ಉಂಟಾಯಿತು. ಭಾರತದಲ್ಲಿ ನಡೆಯುವ ಪ್ರೊ ಕಬಡ್ಡಿ ಲೀಗ್ ಮತ್ತು ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಶನ್ ಈ ಬಗ್ಗೆ ವಿಭಿನ್ನ ನಿಯಮಗಳನ್ನು ಹೊಂದಿರುವುದೇ ಸಮಸ್ಯೆಗೆ ಮೂಲಕ. ಜತೆಗೆ ಯಾವ ನಿಯಮ ಅನ್ವಯಿಸುತ್ತದೆ ಎಂಬುದರ ಬಗ್ಗೆ ಆಯೋಜಕರಿಗೆ ಸ್ಪಷ್ಟತೆ ಇಲ್ಲದ ಕಾರಣ ಭಾರತೀಯ ಕಾಲಮಾನ ಮಧ್ಯಾಹ್ನ 1:46 ಕ್ಕೆ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. 2:48ಕ್ಕೆ ಪುನರಾರಂಭವಾಯಿತು. ಒಂದು ನಿಮಿಷದ ಬಳಿಕ ಭಾರತ 33-29 ಅಂಕಗಳಿಂದ ಗೆದ್ದು ಚಿನ್ನ ಗೆದ್ದುಕೊಂಡಿತು.

ಏನಿದು ಘಟನೆ?

ಪಂದ್ಯದ ಪೂರ್ಣ ಅವಧಿ ಮುಕ್ತಾಯಕ್ಕೆ ಒಂದು ನಿಮಿಷ ಮತ್ತು ಐದು ಸೆಕೆಂಡುಗಳು ಉಳಿದಿರುವಾಗ ವಿವಾದ ಉಂಟಾಯಿತು. ಸ್ಕೋರ್ 28-28ರಲ್ಲಿ ಸಮಬಲಗೊಂಡಿದ್ದ ವೇಳೆ ಭಾರತದ ನಾಯಕ ಪವನ್ ಕುಮಾರ್ ಶೆರಾವತ್ ರೈಡ್ ಗೆ ಹೋದರು. ಇದು ಡು ಆರ್​ ಡೈ ದಾಳಿಯಾಗಿತ್ತು. ಇದರರ್ಥ ರೇಡರ್​​ ಒಂದು ಪಾಯಿಂಟ್ ಪಡೆಯಲೇಬೇಕಾಗಿತ್ತು. ಇಲ್ಲದಿದ್ದರೆ ಔಟ್​. ವೇಗವಾಗಿ ಓಡಿದ ಪವನ್ ಮ್ಯಾಟ್​ ದಾಟಿ ಲಾಬಿಗೆ ಹೋದರು. ಅವರನ್ನು ಹಿಡಿಯಲು ಯತ್ನಿಸಿದ ಡಿಫೆಂಡರ್​ಗಳು ಕೂಡ ಲಾಬಿಗೆ ಪ್ರವೇಶ ಪಡೆದರು. ಈ ವೇಳೆ ರೆಫರಿಗೆಳು ಗೊಂದಲಕ್ಕೆ ಬಿದ್ದರು. ನಿಯಮಗಳ ಬಗ್ಗೆ ಸ್ಪಷ್ಟತೆ ಇಲ್ಲದ ಅವರು ತಲಾ ಒಂದೊಂದು ಪಾಯಿಂಟ್​ ಕೊಟ್ಟರು.

ನಿಯಮ ಏನು ಹೇಳುತ್ತದೆ?

ಐಕೆಎಫ್ ನಿಯಮ (ಐಕೆಎಫ್ ನಿಯಮ ಪುಸ್ತಕದ ನಿಯಮ 28): ರೈಡರ್​ ಮ್ಯಾಟ್​ ಬಿಟ್ಟು ಲಾಬಿಗೆ ಪ್ರವೇಶ ಮಾಡಿದರೆ ಆತ ಔಟ್​. ಅಥವಾ ಡೆಫೆಂಡರ್​ ಗಳು ಮೊದಲು ಲಾಬಿಗೆ ಪ್ರವೇಶ ಮಾಡಿ ರೇಡರ್ ನನ್ನು ಹಿಡಿದರೆ ಆತ ಸೇಫ್​ ಹಾಗೂ ಡಿಫೆಂಡರ್​ಗಳು ಔಟ್​.

ಪಿಕೆಎಲ್ ನಿಯಮ: ರೇಡರ್ ಲಾಬಿಗೆ ಪ್ರವೇಶ ಮಾಡಿದ ತಕ್ಷಣ ರೇಡಿಂಗ್​​ ಅಲ್ಲಿಯೇ ಕೊನೆಗೊಳ್ಳುತ್ತದೆ ಮತ್ತು ರೇಡರ್ ಔಟ್​. ಒಂದು ವೇಳೆ ರೇಡರ್ ಹೊರಕ್ಕೆ ಹೋದ ಬಳಿಕವೂ ಡಿಫೆಂಡರ್​ಗಳು ಲಾಬಿ ಪ್ರವೇಶ ಮಾಡಿದರೆ ರೇಡರ್​ ಸೇಫ್ ಆಗುತ್ತಾನೆ ಮತ್ತು ಡಿಫೆಂಡರ್​ಗಳು ಔಟ್​ ಆಗುತ್ತಾರೆ.

ಇದನ್ನೂ ಓದಿ : Asian Games: ಪಂದ್ಯ ರದ್ದಾದರೂ ಐತಿಹಾಸಿಕ ಚಿನ್ನ ಗೆದ್ದ ಭಾರತ ಪುರುಷರ ಕ್ರಿಕೆಟ್​ ತಂಡ

ಪ್ರೊ ಕಬಡ್ಡಿ ಸೀಸನ್ 8 ರಲ್ಲಿ ಬೆಂಗಾಲ್ ವಾರಿಯರ್ಸ್​​ ತಂಡ ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್ ಅವರನ್ನು ಹಿಂಬಾಲಿಸಿದ ಬೆಂಗಳೂರು ಬುಲ್ಸ್​ನ ಏಳು ಡಿಫೆಂಡರ್​ಗಳು ಔಟ್ ಆಗಿರುವುದು ಇದಕ್ಕೆ ಸೂಕ್ತ ಉದಾಹರಣೆ. ಈ ನಿಯಮದಿಂದ ಪಂದ್ಯದ ಗತಿಯೇ ಬದಲಾಗಿ ಬೆಂಗಾಲ್​ ಗೆಲುವು ಸಾಧಿಸಿತ್ತು.

ಭಾರತ ತಂಡಕ್ಕೆ ಅಸಮಾಧಾನ ಯಾಕೆ?

ಏಷ್ಯನ್ ಗೇಮ್ಸ್​ನ ಪಂದ್ಯದಲ್ಲಿ ರೆಫರಿ ಪ್ರತಿ ತಂಡಕ್ಕೆ ಒಂದು ಪಾಯಿಂಟ್ ಕೊಟ್ಟರು, ಇರಾನಿನ ಮೂವರು ಆಟಗಾರರು ಲಾಬಿಗೆ ಪ್ರವೇಶಿಸಿದ್ದರಿಂದ ಮೂರು ಅಂಕಗಳನ್ನು ನೀಡಬೇಕು ಎಂದು ಪವನ್ ಭಾವಿಸಿದರು. ಭಾರತೀಯರು ತೀರ್ಪು ಮರುಪರಿಶೀಲನೆಯನ್ನು ಕೇಳಿದರು. ರೆಫರಿಗಳಿಗೆ ಸ್ಪಷ್ಟ ನಿರ್ಧಾರ ಪಡೆಯಲು ಏಳು ನಿಮಿಷಗಳಿಗಿಂತ ಹೆಚ್ಚು ಸಮಯ ಹಿಡಿಯಿತು: ಭಾರತಕ್ಕೆ ಮೂರು ಅಂಕಗಳು ಮತ್ತು ಇರಾನ್​ಗೆ ಒಂದು ಪಾಯಿಂಟ್​ ನೀಡಲಾಯಿತು. ಈ ವೇಳೆ ಇರಾನ್​ ತಂಡದವರು ಪ್ರತಿಭಟನೆಯನ್ನು ಪ್ರಾರಂಭಿಸಿದರು. ರೆಫರಿಗಳಿಗೆ ಮನವಿ ಮಾಡಲಾಯಿತು. ಅವರ ನಾಯಕ ಫಝೆಲ್ ಅತ್ರಾಚಲಿ ಅವರು ರೆಫರಿಯೊಂದಿಗೆ ಮಾತನಾಡಲು ಬೆಂಚ್​ನಿಂದ ಹೊರಬಂದರು.

ರೆಫರಿ ಮೇಜಿನ ಬಳಿ ಹೋಗಿ ದಾಳಿಯ ಹೆಚ್ಚಿನ ರಿಪ್ಲೇಗಳನ್ನು ವೀಕ್ಷಿಸಿದರು. ಆದಾಗ್ಯೂ, ಯಾವ ನಿಯಮವನ್ನು ಅನುಸರಿಸಬೇಕೆಂದು ಅವರಿಗೆ ಖಚಿತವಾಗಿರಲಿಲ್ಲ. ಅಂಪೈರ್​ಗಳು ಗೊಂದಲಕ್ಕೆ ಬಿದ್ದರೆ ಆಟಗಾರರು ಮ್ಯಾಚ್​ನೊಳಗೆ ಧರಣಿ ಕುಳಿತರು.

ಭಾರತದ ಕೋಚ್ ಭಾಸ್ಕರನ್ ವಾದವೇನು?

ಹೊಸ ನಿಯಮ ಅನ್ವಯವಾಗಿದ್ದರೆ ಭಾರತದ ಪರಿಶೀಲನೆ ಮನವಿ ಮಾಡಿದ ಬಳಿಕ ತಮ್ಮ ನಿರ್ಧಾರವನ್ನು ಏಕೆ ಬದಲಾಯಿಸಿದರು. ಹಳೆ ನಿಯಮವೇ ಆಗಿದ್ದರೆ ಪವನ್​ ಮಾತ್ರ ಔಟ್​ ಎಂಬುದು ಅವರು ವಾದವಾಗಿತ್ತು. ಅಷ್ಟರಲ್ಲಿ ಮತ್ತೊಂದು ತೀರ್ಪಿನೊಂದಿಗೆ ಹಿಂದಿರುಗಿದ ಅಂಪೈರ್​ಗಳು ಇರಾನ್ ಪರವಾಗಿ ತೀರ್ಪು ನೀಡಿತು. ಈ ವೇಳೆ ಭಾರತೀಯ ತರಬೇತುದಾರ ಇ. ಭಾಸ್ಕರನ್ ತಮ್ಮ ಆಟಗಾರನಿಗೆ ಆಟವನ್ನು ನಿಲ್ಲಿಸಿ ಚಾಪೆಯ ಮೇಲೆ ಕುಳಿತುಕೊಳ್ಳುವಂತೆ ಹೇಳಿದರು.

ಬಳಿಕ ಹೆಚ್ಚಿನ ಅಧಿಕಾರಿಗಳನ್ನು ಕರೆಸಲಾಯಿತು. ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮಧ್ಯಪ್ರವೇಶಿಸಲು ಬಂದರು. ಅವರು ರಿಪ್ಲೇಗಳನ್ನು ನೋಡಿದರು ಮತ್ತು ಪ್ರತಿ ತಂಡಕ್ಕೆ ಒಂದು ಪಾಯಿಂಟ್ ನೀಡಬೇಕು ಎಂದು ಸ್ಪಷ್ಟವಾಗಿ ಹೇಳಿದರು. ಇದು ಮತ್ತೊಮ್ಮೆ ಭಾರತೀಯರಿಂದ ಒಂದು ಸುತ್ತಿನ ತೀವ್ರ ಪ್ರತಿಭಟನೆಯನ್ನು ಎದುರಿಸಿತು. ಬಳಿಕ ಪಂದ್ಯ ಮುಂದುವರಿದು ಭಾರತ ಚಿನ್ನ ಗೆದ್ದಿತು.

Exit mobile version