Site icon Vistara News

world cup ಗೆದ್ದ ಅಪೂರ್ವ ಕ್ಷಣಕ್ಕೆ 39 ವರ್ಷ

world cup

ನನಗೆ ಈ ದೃಶ್ಯ ಕೊಟ್ಟಷ್ಟು ಪ್ರೇರಣೆಯನ್ನು ಬೇರೆ ಯಾವುದೂ ಕೊಡಲು ಸಾಧ್ಯವೇ ಇಲ್ಲ. ಕಾರ್ಕಳದ ನಮ್ಮ ಮನೆಯ ಜಗಲಿಯಲ್ಲಿ ನಾವು ಒಂದಿಷ್ಟು ಗೆಳೆಯರು ಕಿವಿಗೆ ಪುಟ್ಟ ರೇಡಿಯೋ ಹಚ್ಚಿ ವೀಕ್ಷಕ ವಿವರಣೆ ಕೇಳಿದ ನೆನಪು ಮರೆತು ಹೋಗುವುದಿಲ್ಲ. ಭಾರತ ಗೆದ್ದಾಗ ಮಧ್ಯರಾತ್ರಿಯ ಹೊತ್ತು ಎಲ್ಲರೂ ಸೇರಿ ಒಂದಿಷ್ಟು ದುಡ್ಡು ಒಟ್ಟು ಮಾಡಿ ಕಾರ್ಕಳದ ಪಟಾಕಿ ಅಂಗಡಿಯವರನ್ನು ಎಬ್ಬಿಸಿ ಪಟಾಕಿ ತಂದು ರಸ್ತೆಯುದ್ದಕ್ಕೂ ಸಿಡಿಸಿದ ಸಂಭ್ರಮ ಮರೆಯಲು ಸಾಧ್ಯವೇ ಇಲ್ಲ.

ಆ ಘಟನೆ ನಡೆಯದೆ ಹೋಗಿದ್ದರೆ.

ಭಾರತ ಗೆದ್ದ ಮೊತ್ತ ಮೊದಲ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಅದು. ಅದರಿಂದಾಗಿ ಮುಂದೆ ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆ ಆಯಿತು. ಭಾರತದ ಕ್ರಿಕೆಟಿಗರು ಜನಪ್ರಿಯತೆ ಗಳಿಸಿದರು ಹಾಗೂ ಶ್ರೀಮಂತರಾದರು. ಸಚಿನ್ ತೆಂಡೂಲ್ಕರ್‌, ಅನಿಲ್‌ ಕುಂಬ್ಳೆ, ಜಾವಗಲ್ ಶ್ರೀನಾಥ್, ಮಹೇಂದ್ರ ಸಿಂಗ್‌ ಧೋನಿ, ಯುವರಾಜ್, ವೀರೇಂದ್ರ ಸೆಹ್ವಾಗ್‌, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್‌ ದ್ರಾವಿಡ್, ಸೌರವ್‌ ಗಂಗೂಲಿ, ಗೌತಮ್‌ ಗಂಭೀರ್ ಮೊದಲಾದ ತಾರಾ ಮೌಲ್ಯದ ನೂರಾರು ಆಟಗಾರರು ಬೆಳೆದರು. ಅಂದು ಕಪಿಲ್‌ ದೇವ್‌ ಅವರ ಹುಡುಗರು ವಿಶ್ವ ಕಪ್‌ ಗೆಲ್ಲದೇ ಹೋಗಿದ್ದರೆ ಐಪಿಎಲ್ ಪಂದ್ಯಾಟವು ಭಾರತದಲ್ಲಿ ಆರಂಭ ಆಗುತ್ತಲೇ ಇರಲಿಲ್ಲ. ಇನ್ನೂ ಮುಂದಕ್ಕೆ ಹೋಗುವುದಾದರೆ ಅಂದು ವಿಶ್ವ ಕಪ್‌ ಗೆಲ್ಲದೇ ಹೋಗಿದ್ದರೆ ಭಾರತದಲ್ಲಿ ಕ್ರಿಕೆಟ್ ‘ಒಂದು ಧರ್ಮ’ ಆಗುತ್ತಲೇ ಇರಲಿಲ್ಲ.

ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ ಕ್ಷಣ

ಅಂಡರ್ ಡಾಗ್ ಆಗಿತ್ತು ಭಾರತ!

1983ರ ವಿಶ್ವಕಪ್ ಆರಂಭ ಆಗುವ ಮೊದಲು ಭಾರತ ತಂಡದ ಮೇಲೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಕಾರಣ ಹಿಂದಿನ ಎರಡು ವಿಶ್ವಕಪ್ ಪಂದ್ಯಗಳಲ್ಲಿ ನಮ್ಮ ಭಾರತದ ನಿರ್ವಹಣೆ ತುಂಬಾನೇ ಕಳಪೆಯಾಗಿತ್ತು. ಭಾರತೀಯ ಆಟಗಾರರು ಟೆಸ್ಟ್ ಮಾದರಿಯ ಡಿಫೆನ್ಸಿವ್ ಮೈಂಡ್ ಸೆಟನಿಂದ ಹೊರಬರಲು ಕಷ್ಟ ಪಡುತ್ತಿದ್ದರು.

ಮತ್ತೊಂದು ಕಡೆ ಬಲಿಷ್ಠ ವೆಸ್ಟ್ ಇಂಡೀಸ್ ಹಿಂದಿನ ಎರಡೂ ವಿಶ್ವಕಪ್ ಟ್ರೋಫಿಗಳನ್ನು ಎತ್ತಿ ಹಿಡಿದ ಕೀರ್ತಿ ಪಡೆದಿತ್ತು. ಹೆಚ್ಚು ಕಡಿಮೆ ಅದೇ ಸ್ಟಾರ್ ಆಟಗಾರರು ಆ ತಂಡದಲ್ಲಿ ಇದ್ದರು. ಕ್ಲೈವ್ ಲಾಯ್ಡ್ ಎಂಬ ಬಲಾಢ್ಯ ಕ್ಯಾಪ್ಟನ್ ಕಟ್ಟಿದ ತಂಡ ಅದು. ಜಗತ್ತಿನ ಅತ್ಯಂತ ಶ್ರೇಷ್ಠ ವೇಗದ ಬೌಲರ್‌ಗಳು ಮತ್ತು ಬ್ಯಾಟಿಂಗ್ ದೈತ್ಯರು ಆ ತಂಡದಲ್ಲಿ ಇದ್ದರು.
ಭಾರತ ತಂಡಕ್ಕೆ ಹೊಸ ಕ್ಯಾಪ್ಟನ್ ಕಪಿಲ್ ದೇವ್ ಸಾರಥ್ಯ. ಯಾವ ಆಟಗಾರನಿಗೂ ಸ್ಟಾರ್ ವ್ಯಾಲ್ಯೂ ಇರಲಿಲ್ಲ. ಆದರೆ ಹೆಚ್ಚಿನವರು ಆಲರೌಂಡರ್ ಆಟಗಾರರು. ಫೈಟಿಂಗ್ ಸ್ಪಿರಿಟ್ ಇದ್ದವರು. ಆದರೆ…ಕಪಿಲ್ ನಾಯಕತ್ವವೇ ಅದ್ಭುತ.
ತನ್ನ ಯುವ ಪಡೆಯನ್ನು ಇಂಗ್ಲೆಂಡ್‌ಗೆ ತಂದು ಇಳಿಸಿದಾಗ ಕಪಿಲ್ ದೇವ್ ಹೇಳಿದ ಮಾತು ತುಂಬಾ ಪ್ರೇರಣಾದಾಯಕವಾಗಿತ್ತು.

“ಹುಡುಗರೇ. ನಮ್ಮ ತಂಡದ ಮೇಲೆ ಯಾರಿಗೆ ಕೂಡ ದೊಡ್ಡ ನಿರೀಕ್ಷೆ ಇಲ್ಲ. ಸೋತರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ, ಆದರೆ ವೆಸ್ಟ್ ಇಂಡೀಸ್‌ ಚಾಂಪಿಯನ್ ತಂಡ. ಅವರಿಗೆ ಟ್ರೋಫಿ ಉಳಿಸಿಕೊಳ್ಳುವ ಒತ್ತಡ ಇದೆ. ಅದೇ ನಮಗೆ ಈ ಬಾರಿ ಬಂಡವಾಳ ಆಗಬೇಕು” ಎಂದಿದ್ದರು. ಅದೇ ನಮ್ಮ ತಂಡಕ್ಕೆ ಟಾನಿಕ್ ಆಗಿತ್ತು. ಇಡೀ ವಿಶ್ವ ಕಪ್ ಟೂರ್ನಿಯಲ್ಲಿ ಕಪಿಲದೇವ್ ಅವರ ಸ್ಫೂರ್ತಿಯುತವಾದ ನಾಯಕತ್ವವೇ ಭಾರತವನ್ನು ಗೆಲ್ಲಿಸಿದ್ದು.

ಮರೆಯಲಾಗದ ಜಿಂಬಾಬ್ವೆ ಪಂದ್ಯ!

ಆ ಟೂರ್ನಿಯಲ್ಲಿ ಇದ್ದ ತಂಡಗಳು ಒಟ್ಟು ಎಂಟು. ಅದರಲ್ಲಿ ದುರ್ಬಲ ತಂಡ ಅಂದರೆ ಜಿಂಬಾಬ್ವೆ. ಆದರೆ ಭಾರತಕ್ಕೆ ಆ ಜಿಂಬಾಬ್ವೆ ವಿರುದ್ಧದ ಪಂದ್ಯವೇ ಬಿಸಿ ತುಪ್ಪ ಆಯಿತು. ಮೊದಲು ಬ್ಯಾಟ್ ಮಾಡಿದ ಭಾರತ ಒಂದು ಹಂತದಲ್ಲಿ 17 ರನ್‌ಗೆ ೫ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಉಳಿದವರು ಕೇವಲ ಬಾಲಂಗೋಚಿಗಳು. ಆಗ ಬ್ಯಾಟ್ ಹಿಡಿದು ಬಂದ ಕಪಿಲ್‌ ದೇವ್ ಮೈಗೆ ಆವೇಶ ಬಂದ ಹಾಗಿತ್ತು.

ಮೈದಾನದ ಎಲ್ಲ ಕಡೆ ಚೆಂಡನ್ನು ಅಟ್ಟಿಸುತ್ತಾ ಕಪಿಲ್ ಅಂದು ಗಳಿಸಿದ್ದು ಅಜೇಯ 175 ರನ್. 16 ಬೌಂಡರಿಗಳು ಮತ್ತು 6 ಮನಮೋಹಕ ಸಿಕ್ಸರ್‌ಗಳು. ಅಂದು ಭಾರತ ಸೋತಿದ್ದರೆ ಭಾರತಕ್ಕೆ ಗಂಟು ಮೂಟೆ ಕಟ್ಟಬೇಕಾಗಿತ್ತು. ಆದರೆ ತನ್ನ ವೀರೋಚಿತ ಇನಿಂಗ್ಸ್‌ ಮೂಲಕ ಕಪಿಲ್‌ದೇವ್ ಭಾರತವನ್ನು ಗೆಲ್ಲಿಸಿದ್ದರು.

ಆಗ ವಿಶ್ವ ಕಪ್ ಟೂರ್ನಿಯ ಎಲ್ಲ ಪಂದ್ಯಗಳು ಟಿವಿಯಲ್ಲಿ ನೇರ ಪ್ರಸಾರ ಆಗುತ್ತಿದ್ದವು. ಆದರೆ ಜಿಂಬಾಬ್ವೆ ಪಂದ್ಯದ ದಿನ ಬಿಬಿಸಿಯ ಸ್ಟಾಫ್ ಮುಷ್ಕರ ಹೂಡಿದ್ದ ಕಾರಣ ಆ ಪಂದ್ಯದ ವೈಭವ ಮತ್ತು ಕಪಿಲ್ ದೇವ್ ಅವರ ಸಾಹಸವನ್ನು ಕ್ರಿಕೆಟ್ ಜಗತ್ತು ನೋಡಲು ಸಾಧ್ಯ ಆಗಲಿಲ್ಲ!

ಸೆಮಿಫೈನಲ್ ಪಂದ್ಯಗಳು

ಒಂದು ಕಡೆ ಪಾಕ್ ತಂಡವನ್ನು ಸೋಲಿಸಿ ವಿಂಡೀಸ್ ತಂಡ ನಿರೀಕ್ಷೆಯಂತೆ ಫೈನಲ್‌ಗೆ ಟಿಕೆಟ್ ಪಡೆಯಿತು. ಮತ್ತೊಂದು ಕಡೆ ಭಾರತ ತಂಡವು ಕ್ರಿಕೆಟ್ ಜನಕರಾದ ಇಂಗ್ಲೆಂಡ್‌ ತಂಡವನ್ನು ಅವರದೇ ನೆಲದಲ್ಲಿ ೬ ವಿಕೆಟ್‌ಗಳ ಅಂತರದಲ್ಲಿ ಬಗ್ಗು ಬಡಿದು ಫೈನಲ್ ಪ್ರವೇಶ ಪಡೆಯಿತು. ವಿಂಡೀಸ್ ತಂಡಕ್ಕೆ ಅದು ಮೂರನೇ ಫೈನಲ್. ಭಾರತಕ್ಕೆ ಅದು ಚೊಚ್ಚಲ ಫೈನಲ್.

1983ರ ಜೂನ್ 25ರಂದು ಏನಾಯಿತು?

ಅದು ಕ್ರಿಕೆಟ್ ಸ್ವರ್ಗ ಎಂದು ಕರೆಸಿಕೊಂಡಿದ್ದ ಲಾರ್ಡ್ಸ್ ಮೈದಾನ. ಅಂದು ಮೈದಾನದ ತುಂಬಾ ವಿಂಡೀಸ್ ಬೆಂಬಲಿಗರು ತುಂಬಿದ್ದರು. ಭಾರತದ ಬೆಂಬಲಿಗರು 10% ಕೂಡ ಇರಲಿಲ್ಲ. ಭಾರತ ಟ್ರೋಫಿ ಗೆಲ್ಲುವ ಭರವಸೆಯೇ ಭಾರತೀಯರಿಗೇ ಇರಲಿಲ್ಲ!

ಆ ಟೂರ್ನಿಯಲ್ಲಿ ನಡೆದ ಪ್ರತೀ ಪಂದ್ಯವೂ 60 ಓವರ್ ಪಂದ್ಯ ಆಗಿತ್ತು. ಟಾಸ್ ಗೆದ್ದ ವಿಂಡೀಸ್ ನಾಯಕ ಭಾರತಕ್ಕೆ ಮೊದಲು ಬ್ಯಾಟ್ ಮಾಡಲು ಆಹ್ವಾನ ನೀಡಿತು. ಭಾರತ ಕುಂಟುತ್ತಾ 183 ರನ್ ಮಾಡಿತು. ಶ್ರೀಕಾಂತ್ 38 ಮಾಡಿದ್ದೆ ಗರಿಷ್ಠ ಸ್ಕೋರ್. ಸಂದೀಪ್ ಪಾಟೀಲ್ ಮತ್ತು ಮೋಹಿಂದರ್ ಅಮರನಾಥ್ ತಕ್ಕಮಟ್ಟಿಗೆ ಆಡಿದರು. ಅದಕ್ಕೆ ಕಾರಣ ವಿಂಡೀಸ್ ತಂಡದ ವೇಗದ ಬೌಲಿಂಗ್ ಪವರ್‌ . ಆ್ಯಂಡಿ ರಾಬರ್ಟ್ಸ್, ಮಾಲ್ಕಮ್ ಮಾರ್ಷಲ್, ದೈತ್ಯ ಜಾಯಲ್ ಗಾರ್ನರ್, ಲಾರಿ ಗೊಮ್ಸ್ ಇವರೆಲ್ಲರೂ ತಂಡವನ್ನು ಕಟ್ಟಿ ಹಾಕಿದ್ದರು.

ದೈತ್ಯ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಗಾರ್ಡನ್ ಗ್ರಿನೀಜ್ ಮತ್ತು ಡೆಸ್ಮಂಡ್ ಹೇನ್ಸ್‌ ಆ ಕಾಲಕ್ಕೆ ವಿಶ್ವದಾಖಲೆ ಹೊಂದಿದ್ದವರು. ಗ್ರೀನೀಜ್ ಕ್ರೀಸಿಗೆ ಹೋಗುವಾಗ ತಮ್ಮ ತಂಡದ ಇತರ ಸದಸ್ಯರಿಗೆ “ನೀವು ಪ್ಯಾಡ್ ಕಟ್ಟುವ ಅಗತ್ಯವೇ ಇಲ್ಲ. ನಾವಿಬ್ಬರೇ ಮ್ಯಾಚನ್ನು ಗೆಲ್ಲಿಸಿ ಬರುತ್ತೇವೆ,” ಎಂದು ಹೇಳಿ ಕ್ರೀಸಿಗೆ ಇಳಿದಿದ್ದರು.

ಆದರೆ ಭಾರತದ ಯುವ ಬೌಲರ್‌ಗಳು ಅಂದು ಅದ್ಭುತವನ್ನೇ ಮಾಡಿದರು. ಮೊದಲ ವಿಕೆಟ್ ಕಡಿಮೆ ಮೊತ್ತಕ್ಕೆ ಉರುಳಿದಾಗ ಭಾರವಾದ ಬ್ಯಾಟ್ ಹಿಡಿದು ಕ್ರೀಸಿಗೆ ಬಂದವರು ವಿಂಡೀಸ್ ಬ್ಯಾಟಿಂಗ್ ಲೆಜೆಂಡ್ ವಿವಿಯನ್‌ ರಿಚರ್ಡ್ಸ್. ನಿರಂತರ ಬೌಂಡರಿಗಳ ಸದ್ದು ಬಂದಾಗ ವಿಂಡೀಸ್ ಮೂರನೇ ಟ್ರೋಫಿ ಎತ್ತಿ ಬಿಟ್ಟಿತ್ತು ಅನಿಸಲು ತೊಡಗಿತ್ತು. ಆದರೆ ಕಪಿಲ್ ದೇವ್ ಸುಮಾರು 30 ಹೆಜ್ಜೆ ಹಿಂದಕ್ಕೆ ಓಡಿ ಹಿಡಿದ ಒಂದು ಕ್ಯಾಚ್ ರಿಚರ್ಡ್ಸ್ ಅವರ ಇನಿಂಗ್ಸ್‌ಗೆ ಮಂಗಳ ಹಾಡಿತು. ಅಲ್ಲಿಂದ ಮುಂದೆ ನಡೆದದ್ದು ಭಾರತದ್ದೇ ಕಾರುಬಾರು.

ಚಾಂಪಿಯನ್ ವಿಂಡೀಸ್ ತಂಡ 140ಕ್ಕೆ ಆಲೌಟ್. ಭಾರತ ತಂಡಕ್ಕೆ 43 ರನ್ ವಿಜಯ. ಅಂದು ಮದನ್‌ಲಾಲ್ ಮತ್ತು ಮೋಹಿಂದರ್‌ ಅಮರನಾಥ್ ತಲಾ ೩ ವಿಕೆಟ್ ಪಡೆದಿದ್ದರು. ಟೂರ್ನಿ ಆರಂಭ ಆಗುವ ಮೊದಲು ಅಂಡರ್ ಡಾಗ್ ಎಂದು ಕರೆಸಿಕೊಂಡಿದ್ದ ಭಾರತದ ಯುವ ತಂಡವು ಕ್ರಿಕೆಟ್ ದೈತ್ಯರಾದ ವಿಂಡೀಸ್ ತಂಡವನ್ನು ಲಾರ್ಡ್ಸ್ ಮೈದಾನದಲ್ಲಿ ಹೆಡೆಮುರಿ ಕಟ್ಟಿಬಿಟ್ಟಿತ್ತು. ಇದು ಯಾರೂ ಊಹೆ ಕೂಡ ಮಾಡದ ಗೆಲುವು ಎಂದೇ ಹೇಳಬಹುದು.

ಲಾರ್ಡ್ಸ್ ಮೈದಾನದ ಗ್ಯಾಲರಿಯಲ್ಲಿ ಕಪಿಲ್‌ದೇವ್ ನೀಲಿ ಬಣ್ಣದ ಬ್ಲೇಜರ್ ಧರಿಸಿ ಪ್ರುಡೆನ್ಶಿಯಲ್ ಕಪ್ ಎತ್ತಿಹಿಡಿದ ಫೋಟೋ ಇಡೀ ಭಾರತೀಯ ಕ್ರಿಕೆಟ್ ರಂಗದ ವೈಭವದ ಮುನ್ಸೂಚನೆ ಆಗಿತ್ತು.

ಭಾರತಕ್ಕೆನಿಜವಾಗಿ ಸ್ಫೂರ್ತಿಯ ಸೆಲೆ!

ಭಾರತ ಹಾಕಿ ತಂಡವು ಆ ಮೊದಲೇ ಎಂಟು ಬಾರಿ ಒಲಿಂಪಿಕ್ಸ್ ಚಿನ್ನ ಗೆದ್ದ ಸಾಧನೆ ಮಾಡಿತ್ತು. ಹಾಕಿ ಮಾಂತ್ರಿಕ ಧ್ಯಾನ್‌ ಚಂದ್ ಅವರು ಆಗಲೇ ಭಾರತದ ಐಕಾನ್ ಆಗಿದ್ದರು. ಹಾಗೆಯೇ ಮುಂದೆ ಭಾರತದ ಕ್ರಿಕೆಟ್ ತಂಡ ಹಲವು ವಿಶ್ವಮಟ್ಟದ ಟ್ರೋಫಿಗಳನ್ನು ಗೆದ್ದಿತು. ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಟಾರ್‌ ಆಟಗಾರರು ಬಂದರು. ಆದರೆ ಆ ಚೊಚ್ಚಲ ವಿಶ್ವಕಪ್ ವಿಜಯವು ಭಾರತಕ್ಕೆ ಒಂದು ಚಿನ್ನದ ಪ್ರಭಾವಳಿ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದು ನಮಗೆಲ್ಲ ಸ್ಮರಣೀಯ. ಅದರ ಪೂರ್ತಿ ಶ್ರೇಯಸ್ಸು ಕಪಿಲ್ ದೇವ್ ಮತ್ತು ಅವರ ಹುಡುಗರಿಗೆ ಸಲ್ಲಬೇಕು.
ರಾಜೇಂದ್ರ ಭಟ್ ಕೆ.
ಲೇಖಕರು ಶಿಕ್ಷಕರು ಹಾಗೂ ಜೆಸಿ ಅಂತಾರಾಷ್ಟ್ರೀಯ ತರಬೇತುದಾರರು.

ಇದನ್ನೂ ಓದಿ| Team India ಹಿಟ್ಟರ್‌ ರೋಹಿತ್‌ ಶರ್ಮಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ: ಇಲ್ಲಿದೆ ನೋಡಿ ಅಭಿಮಾನಿಗಳಿಗೆ ವಿಶೇಷ ಸಂದೇಶ

Exit mobile version