Site icon Vistara News

ಪಾಕ್​ ಪಂದ್ಯಕ್ಕೂ ಮುನ್ನ ಸಹ ಆಟಗಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಕಿಂಗ್​ ಕೊಹ್ಲಿ

virat kohli and shaheen afridi

ಪಲ್ಲೆಕೆಲೆ: 16ನೇ ಆವೃತ್ತಿ ಏಷ್ಯಾಕಪ್​ನ ಶನಿವಾರದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ(IND vs PAK) ಸವಾಲು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನವೇ ಟೀಮ್​ ಇಂಡಿಯಾದ ಅನುಭವಿ ಆಟಗಾರ ವಿರಾಟ್​​ ಕೊಹ್ಲಿ(virat kohli) ಅವರು ತನ್ನ ಸಹ ಆಟಗಾರರಿಗೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದ್ದಾರೆ. ಪಾಕಿಸ್ತಾನದಂತಹ ಉತ್ತಮ ಗುಣಮಟ್ಟದ ಬೌಲಿಂಗ್ ದಾಳಿಯನ್ನು ಎದುರಿಸಲು ಅತ್ಯುತ್ತಮ ಪ್ರದರ್ಶನವನ್ನೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಡೆಗಣಿಸಿದರೆ ಅಪಾಯ ಗ್ಯಾರಂಟಿ

ಸ್ಟಾರ್​ ಸ್ಪೋರ್ಟ್ಸ್​ ಸಂದರ್ಶನದಲ್ಲಿ ಶುಕ್ರವಾರ ಮಾತನಾಡಿದ ವಿರಾಟ್​ ಕೊಹ್ಲಿ, ನಮ್ಮ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಪಾಕ್​ ಬೌಲರ್​ಗಳನ್ನು ಕಡೆಗಣಿಸಬಾರದು ಅವರ ಬೌಲಿಂಗ್​ ಉತ್ಕೃಷ್ಟ ಮಟ್ಟದಿಂದ ಕೂಡಿದೆ. ಯಾವುದೇ ಹಂತದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಬಲ್ಲ ಪ್ರಭಾವಶಾಲಿ ಬೌಲರ್‌ಗಳನ್ನು ಬಾಬರ್​ ಪಡೆ ಹೊಂದಿದೆ. ಹೀಗಾಗಿ ನಮ್ಮ ಎಲ್ಲ ಬ್ಯಾಟರ್​ಗಳು ಎಚ್ಚರಿಕೆಂದ ಆಡಬೇಕು. ಹಗುರವಾಗಿ ಕಾಣಬಾರದು. ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ರೂಪಿಸಬೇಕು ಎಂದು ಪಂದ್ಯಕ್ಕೂ ಮುನ್ನವೇ ಎಚ್ಚರಿಸಿದ್ದಾರೆ.

ಸ್ಥಿರ ಪ್ರದರ್ಶನ ನೀಡುವೆ

ತಮ್ಮ ಬ್ಯಾಟಿಂಗ್​ ಬಗ್ಗೆ ಮಾಹಿತಿ ನೀಡಿದ ಕೊಹ್ಲಿ, ಮೇಲಿನ ಮಾತು ನನಗೂ ಕೂಟ ಅನ್ವಯವಾಗುತ್ತದೆ. ಪ್ರತಿದಿನ, ಪ್ರತಿ ಅಭ್ಯಾಸದ ಅವಧಿ, ಪ್ರತಿ ವರ್ಷ, ಪ್ರತಿ ಋತುವಿನಲ್ಲಿ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ನೆರವಾಗುವುದೇ ನನ್ನ ಮೊದಲ ಗುರಿ. ಈ ಮನಸ್ಥಿತಿಯಿಲ್ಲದೆ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಕಳೆದ ವರ್ಷ ಟಿ20 ವಿಶ್ವಕಪ್​ನಲ್ಲಿ ನಾನು ಪಾಕ್​ ವಿರುದ್ಧ ತೋರಿದ ಪ್ರದರ್ಶನವನ್ನೇ ಮತ್ತೆ ಮರುಕಳಿಸಲು ಪ್ರಯತ್ನಿಸುತ್ತೇನೆ. ಹಾಗಂತ ಪಾಕ್ ಬೌಲರ್​ಗಳನ್ನು ಯಾವ ಕಾರಣಕ್ಕೂ ಕಡೆಗಣಿಸಲಾರೆ ಎಚ್ಚರಿಕೆಯ ಆಟವಾಡುವೆ ಎಂದು ತಿಳಿಸಿದರು.

ಇದನ್ನೂ ಓದಿ Asia Cup 2023: ಭಾರತ-ಪಾಕ್​ ಏಷ್ಯಾಕಪ್ ಟೂರ್ನಿಯ​ ರೆಕಾರ್ಡ್​ ಹೀಗಿದೆ

ಕೊಹ್ಲಿ ಬಗ್ಗೆ ಬಾಬರ್​ ಮೆಚ್ಚುಗೆಯ ಮಾತು

ಬಾಬರ್​ ಅಜಂ ಅವರು ಕೊಹ್ಲಿಯನ್ನು ಹೊಗಳಿದ್ದಾರೆ. ನನ್ನ ಮತ್ತು ವಿರಾಟ್ ಕೊಹ್ಲಿ ಮಧ್ಯೆಯ ಕಮೆಂಟ್​ಗಳು ತುಂಬಾ ಆಹ್ಲಾದಕರವಾಗಿವೆ. ಅದು ನನಗೆ ತುಂಬಾ ಹೆಮ್ಮೆಯ ಕ್ಷಣವಾಗಿದೆ. ಮತ್ತು ಇದು ತುಂಬಾ ಒಳ್ಳೆಯದಾಗಿದೆ. ಏಕೆಂದರೆ ಕೆಲವು ವಿಷಯಗಳು ಮತ್ತು ಕೆಲವು ಪ್ರಶಂಸೆಗಳು ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅವರೊಬ್ಬರ ಸ್ಟಾರ್​ ಆಟಗಾರ” ಎಂದು ಬಾಬರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“2019 ರ ವಿಶ್ವಕಪ್‌ನಲ್ಲಿ ನಾನು ವಿರಾಟ್​ ಕೊಹ್ಲಿಯನ್ನು ಮೊದಲ ಬಾರಿ ಭೇಟಿಯಾದೆ. ಆಗ ಅವರು ಉತ್ತುಂಗದ ಫಾರ್ಮ್​ನಲ್ಲಿದ್ದರು. ಈಗ ಕೂಡ ಇದ್ದಾರೆ. ನಾನು ಅವರಿಂದ ಕ್ರಿಕೆಟ್​ನಲ್ಲಿ ಕಲಿಯಬೇಕಿರುವುದು ತಂಬಾ ಇದೆ. ಅವರನ್ನು ಭೇಟಿಯಾದ ಪ್ರತಿ ಸಲವು ಹಲವು ಸಲಹೆಯನ್ನು ಪಡೆದಿದ್ದೇನೆ. ವಿಶ್ವಕಪ್ ಕ್ರಿಕೆಟ್​ ಕೂಡ ಹತ್ತಿರ ಇರುವ ಕ್ಷಣದಲ್ಲಿ ದಿಗ್ಗಜ ಆಟಗಾರನಿಂದ ಸಲಹೆ ಪಡೆದರೆ ಉತ್ತಮ. ಅವರ ಮೇಲೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.

ಪಂದ್ಯಕ್ಕೆ ಮಳೆಯ ಚಿಂತೆ

ಭಾರತಕ್ಕೆ ಈ ಕೂಟದ ಮೊದಲ ಪಂದ್ಯವಾದರೆ, ಪಾಕ್​ಗೆ ಎರಡನೇ ಪಂದ್ಯ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಆದರೆ ಅಭಿಮಾನಿಗಳ ಈ ಆಸೆಗೆ ಮಳೆ ತಣ್ಣೀರೆರಚುವ ಸಾಧ್ಯತೆ ಇದೆ. ಹೌದು ಪಂದ್ಯ ನಡೆಯುವ ದಿನ ಕ್ಯಾಂಡಿಯಲ್ಲಿ ಶೇ. 90ರಷ್ಟು ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Exit mobile version