Site icon Vistara News

KL Rahul & Shreyas: ಏಷ್ಯಾಕಪ್​ನಿಂದಲೂ ಹೊರಗುಳಿಯಲಿದ್ದಾರೆ ರಾಹುಲ್​,ಅಯ್ಯರ್​

KL Rahul, Shreyas Iyer

ಬೆಂಗಳೂರು: ಏಷ್ಯಾಕಪ್​ ವೇಳೆ ತಂಡಕ್ಕೆ ಮರಳಬಹುದೆಂದು ನಿರೀಕ್ಷೆ ಮಾಡಿದ್ದ ಕೆ.ಎಲ್​ ರಾಹುಲ್​ ಅವರ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ರಾಹುಲ್​ಗೆ ಹೆಚ್ಚಿನ ಸಮಯ ಬೇಕಿದೆ ಹೀಗಾಗಿ ಅವರು ಏಷ್ಯಾಕಪ್​ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಇನ್​ಸೈಡ್​ ಸ್ಪೋರ್ಟ್ಸ್​ ವರದಿ ಮಾಡಿದೆ. ಬೆನ್ನು ನೋವಿನಿಂದ ಚೇತರಿಕೆ ಕಾಣುತ್ತಿರುವ ಶ್ರೇಯಸ್​ ಅಯ್ಯರ್​(Shreyas Iyer) ಕೂಡ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಕೆ.ಎಲ್​ ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಅವರು ಗಾಯದಿಂದ ಸಂಪೂರ್ಣ ಚೇತರಿಕೆ ಕಂಡು ಅಭ್ಯಾಸ ನಡೆಸುತ್ತಿದ್ದರೂ. ಅವರು ಇನ್ನೂ ಸಂಪೂರ್ಣ ಫಿಟ್​ ಆಗಿಲ್ಲ. ಏಕದಿನ ವಿಶ್ವಕಪ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ಅವಸರ ಮಾಡಿ ಇವರನ್ನು ಆಡಿಸದರೆ ಮತ್ತೆ ಗಾಯಗಳಾಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಇನ್ನೂ ಕೆಲ ದಿನಗಳ ಫಿಟ್​ನೆಸ್​ ತರಬೇತಿ ನೀಡಲಾಗುತ್ತದೆ. ಹೀಗಾಗಿ ಅವರು ಏಷ್ಯಾ ಕಪ್​ನಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇನ್​ಸೈಡ್​ ಸ್ಪೋರ್ಟ್ಸ್​ ವರದಿ ಮಾಡಿದೆ.

ಸದ್ಯ ಎನ್​ಸಿಎಯಲ್ಲಿ ಬ್ಯಾಟಿಂಗ್​ ಮತ್ತು ಕೀಪಿಂಗ್​ ಅಭ್ಯಾಸದಲ್ಲಿ ತೊಡಗಿರುವ ರಾಹುಲ್​ ಮತ್ತು ಅಯ್ಯರ್​ ಅವರು ಸೆಪ್ಟಂಬರ್​ನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ್ಲಲಿ ಆಡುವುದು ಖಚಿತ ಎಂದು ತಿಳಿದುಬಂದಿದೆ. ಅಲ್ಲಿಯ ವರೆಗೆ ಈ ಉಭಯ ಆಟಗಾರರು ಯಾವುದೇ ಕ್ರಿಕೆಟ್​ ಸರಣಿಯಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ವಿಶ್ವಕಪ್​ನಲ್ಲಿ ಈ ಆಟಗಾರರ ಪ್ರದರ್ಶನ ಭಾರತ ತಂಡಕ್ಕೆ ಪ್ರಮುಖವಾಗಿದೆ. ಹೀಗಾಗಿ ಬಿಸಿಸಿಐ ಅವರ ಮೇಲೆ ವಿಶೇಷ ಕಾಳಜಿ ವಹಿಸಿಕೊಂಡಿದೆ.

ಇದನ್ನೂ ಓದಿ KL Rahul: ರಾಹುಲ್​ ಕಮ್​ಬ್ಯಾಕ್​ಗೆ ವೇದಿಕೆ ಸಜ್ಜು; ಈ ಸರಣಿಯಲ್ಲಿ ಆಡುವುದು ಖಚಿತ

ರಾಹುಲ್​ ಅವರು ಬುಧವಾರ ಕೀಪಿಂಗ್​ ಮತ್ತು ಬ್ಯಾಟಿಂಗ್​ ನಡೆಸುತ್ತಿರುವ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಚೇತರಿಕೆಯ ಅಪ್​ಡೇಡ್​ ನೀಡಿದ್ದರು. 31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್​ಸಿಬಿ ವಿರುದ್ಧದ ಐಪಿಎಲ್​ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಿಂದ ಹೊರಗುಳಿದಿದ್ದರು.

Exit mobile version