Site icon Vistara News

KS Bharat: ಭರತ್​ಗೆ ಮತ್ತೆ ಅವಕಾಶ ನೀಡಿದಕ್ಕೆ ಟೀಮ್​ ಇಂಡಿಯಾ ಅಭಿಮಾನಿಗಳು ಕೆಂಡಾಮಂಡಲ

KS Bharat

ರಾಜ್​ಕೋಟ್​: ಇಂಗ್ಲೆಂಡ್(India vs England 3rd Test)​ ವಿರುದ್ಧದ ಉಳಿದಿರುವ ಮೂರು ಟೆಸ್ಟ್ ಪಂದ್ಯಕ್ಕೆ ಇಂದು ಭಾರತ ತಂಡ ಪ್ರಕಟಗೊಂಡಿದೆ. ಆದರೆ, ಟೆಸ್ಟ್​ ಕ್ರಿಕೆಟ್​ನಲ್ಲಿ ಹಲವು ಅವಕಾಶ ನೀಡಿದರೂ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಶ್ರೀಕರ್​ ಭರತ್(KS Bharat)​ಗೆ ಮತ್ತೆ ಅವಕಾಶ ನೀಡಿದ ಕುರಿತು ಟೀಮ್​ ಇಂಡಿಯಾ ಅಭಿಮಾನಿಗಳು ಆಯ್ಕೆ ಸಮಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಟೀಮ್​ ಇಂಡಿಯಾ ಅಭಿಮಾನಿಗಳು, ಕಳಪೆ ಪ್ರದರ್ಶನ ತೋರುತ್ತಿರುವ ಆಟಗಾರರಿಗೆ ಪದೇಪದೆ ಅವಕಾಶ ನೀಡುತ್ತಿರುವ ಕೆಟ್ಟ ಚಾಳಿಯನ್ನು ನಿಲ್ಲಿಸಬೇಕು. ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ತಂಡದಿಂದ ಕೈಬಿಡುವುದು ಸರಿಯಲ್ಲ. ಇದಲ್ಲದೆ ತಂಡಕ್ಕೆ ಆಯ್ಕೆ ಮಾಡಿ ಅವರನ್ನು ಬೆಂಚ್​ ಕಾಯಿಸುವುದು ದೊಡ್ಡ ಅಪರಾಧ. ಮೂರನೇ ಪಂದ್ಯದಲ್ಲಿ ಯುವ ವಿಕೆಟ್​ ಕೀಪರ್​ ಧ್ರುವ್​ ಜುರೆಲ್​ಗೆ(Dhruv Jurel) ಅವಕಾಶ ನೀಡುವಂತೆ ಟೀಮ್​ ಇಂಡಿಯಾ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ IND vs ENG: ಕೊನೆಗೂ ಭಾರತ ತಂಡ ಪ್ರಕಟ; ವಿರಾಟ್​ ಕೊಹ್ಲಿ ಸರಣಿಯಿಂದಲೇ ಔಟ್​

23 ವರ್ಷದ ಧೃವ್​ ಜುರೆಲ್ ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ (RR) ತಂಡದ ಪರ ಗಮನಾರ್ಹ ಪ್ರದರ್ಶನ ತೋರುವ ಮೂಲಕ ವಿಶ್ವ ಕ್ರಿಕೆಟ್‌ಗೆ ಪರಿಚಿತರಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೆಚ್ಚಾಗಿ ಆಡುತ್ತಿದ್ದ ಅವರು​ 13 ಪಂದ್ಯಗಳನ್ನು ಆಡಿ 152 ರನ್​ ಬಾರಿಸಿದ್ದಾರೆ. ಜುರೆಲ್ ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. 

2020ರಲ್ಲಿ ಭಾರತ ಪರ ಜುರೆಲ್​ ಅಂಡರ್​-19 ವಿಶ್ವಕಪ್ ಆಡಿದ್ದರು. ಈ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜುರೆಲ್, 89 ರನ್ ಗಳಿಸಿದ್ದರು. ಇದರಲ್ಲಿ ಒಂದು ಅರ್ಧಶತಕ ಒಳಗೊಂಡಿದೆ. 2022ರಲ್ಲಿ ಉತ್ತರ ಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜುರೆಲ್​ ಇದುವರೆಗೆ ಒಟ್ಟು 15 ಪಂದ್ಯಗಳಲ್ಲಿ 46.47ರ ಸರಾಸರಿಯಲ್ಲಿ 790 ರನ್ ಗಳಿಸಿದ್ದಾರೆ. ಒಂದು ಶತಕವನ್ನೂ ಸಿಡಿಸಿದ್ದಾರೆ. ಜುರೆಲ್ ಕಳೆದ ತಿಂಗಳು ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದ ಭಾರತ-ಎ ತಂಡದ ಭಾಗವಾಗಿದ್ದರು. ಆದರೆ, ಆಡುವ ಅವಕಾಶ ಸಿಕ್ಕಿರಲಿಲ್ಲ. ಮೂರನೇ ಪಂದ್ಯದಲ್ಲಿ ಕಣಕ್ಕಿಳಿದರೆ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಂತಾಗುತ್ತದೆ.

ಆಡಿದ ಎಲ್ಲ ಟೆಸ್ಟ್​ನಲ್ಲಿಯೂ ಭರತ್​ ವಿಫಲ


ಭರತ್​ ಭಾರತ ಪರ ಇದುವರೆಗೆ 7 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. 12 ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸಿದರೂ ಕನಿಷ್ಠ ಒಂದೇ ಒಂದು ಅರ್ಧಶತಕ ಕೂಡ ಇವರಿಂದ ಬಾರಿಸಲು ಸಾಧ್ಯವಾಗಿಲ್ಲ. 44 ರನ್​ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ರಿಷಭ್​ ಪಂತ್​ ಅವರು ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆಯಲ್ಲಿರುವ ಕಾರಣ ಅವರ ಬದಲಿಗೆ ಭರತ್​ ಅವರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾದಲ್ಲಿ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಮೂರನೇ ಪಂದ್ಯದಿಂದ ಅವರು ಆಡುವ ಬಳಗದಿಂದ ಡ್ರಾಪ್​ ಔಟ್​ ಆಗುವುದು ಬಹುತೇಕ ಖಚಿತ ಎನ್ನುವಂತೆ ತೋರುತ್ತಿದೆ.

Exit mobile version