Site icon Vistara News

INDvsNZ T20 : ಭಾರತ ತಂಡ ಸೋತರೂ ಅಭಿಮಾನಿಗಳಿಗೆ ಖುಷಿ ಕೊಟ್ಟ ಮಹೇಂದ್ರ ಸಿಂಗ್​ ಧೋನಿ

Dhoni

ರಾಂಚಿ : ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ (INDvsNZ T20) ಭಾರತ ತಂಡ 21 ರನ್​ಗಳ ಸೋಲಿಗೆ ಒಳಗಾಗಿದೆ. ಪ್ರಮುಖ ಬ್ಯಾಟರ್​ಗಳ ವೈಫಲ್ಯವೇ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ. ನ್ಯೂಜಿಲ್ಯಾಂಡ್​ನ ಸ್ಪಿನ್ನರ್​ಗಳ ದಾಳಿಗೆ ನಲುಗಿದ ಭಾರತದ ಬ್ಯಾಟರ್​ಗಳು ನಿರಂತರವಾಗಿ ಪೆವಿಲಿಯನ್​ ಹಾದಿ ಹಿಡಿದ ಕಾರಣ ಟೀಮ್​ ಇಂಡಿಯಾಗೆ ಹಿನ್ನಡೆ ಉಂಟಾಯಿತು. ಆದಾಗ್ಯೂ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್​ (washington sundar) ಸ್ಫೋಟಕ ಬ್ಯಾಟಿಂಗ್​ ಹಾಗೂ ಮಾರಕ ಬೌಲಿಂಗ್​ ಮೂಲಕ ಗಮನ ಸೆಳೆದರು. ಇವೆಲ್ಲದಕ್ಕಿಂತ ಹೆಚ್ಚಾಗಿ ರಾಂಚಿಯ ಕ್ರಿಕೆಟ್​ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯ(M S Dhoni) ಉಪಸ್ಥಿತಿ.

ರಾಂಚಿಯ ಜೆಎಸ್​ಸಿಎ ಇಂಟರ್​ನ್ಯಾಷನಲ್​ ಸ್ಟೇಡಿಯಮ್​ ಮಹೇಂದ್ರ ಸಿಂಗ್​ ಧೋನಿಯ ತವರು ಮೈದಾನ. ಹೀಗಾಗಿ ಅವರು ಪತ್ನಿ ಸಾಕ್ಷಿ ಸಿಂಗ್​ ಜತೆಗೂಡಿ ಶುಕ್ರವಾರ ಪಂದ್ಯವನ್ನು ವೀಕ್ಷಿಸಿದರು. ಟಿವಿ ನೇರ ಪ್ರಸಾರದ ಕ್ಯಾಮೆರಾಗಳು ಕೂಡ ಸಾಕ್ಷಿ ಹಾಗೂ ಧೋನಿ ಜತೆಯಾಗಿ ಕುಳಿತು ಪಂದ್ಯವನ್ನು ವೀಕ್ಷಿಸುವ ದೃಶ್ಯವನ್ನು ದೊಡ್ಡ ಪರದೆಯಲ್ಲಿ ತೋರಿಸಿದವು. ಈ ವೇಳೆ ಸ್ಥಳೀಯ ಅಭಿಮಾನಿಗಳು ಧೋನಿ, ಧೋನಿ ಎಂದು ಕೂಗುವ ಮೂಲಕ ಅಭಿಮಾನ ಪ್ರದರ್ಶಿಸಿದರು.

ಪಂದ್ಯದ ಹಿನ್ನೆಲೆಯಲ್ಲಿ ಹಾರ್ದಿಕ್​ ಪಾಂಡ್ಯ ನೇತೃತ್ವದ ಭಾರತದ ತಂಡ ರಾಂಚಿಗೆ ಭೇಟಿ ನೀಡಿದ ದಿನವೇ ಮಹೇಂದ್ರ ಸಿಂಗ್​ ಧೋನಿ ಸ್ಟೇಡಿಯಮ್​ಗೆ ಭೇಟಿ ನೀಡಿದ್ದರು. ಎಲ್ಲ ಆಟಗಾರರ ಜತೆ ಮಾತುಕತೆ ನಡೆಸಿ ಅವರಿಗೆ ಟಿಪ್ಸ್​ ನೀಡಿದ್ದರು. ನಾಯಕ ಹಾರ್ದಿಕ್​ ಪಾಂಡ್ಯ ಜತೆಯೂ ಮಾತುಕತೆ ನಡೆಸಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

ಇದನ್ನೂ ಓದಿ : INDvsNZ T20 | ವಾಷಿಂಗ್ಟನ್​ ಸುಂದರ್​ ಹಿಡಿದ ಅದ್ಭುತ ಕ್ಯಾಚ್​ಗೆ ಶಹಬ್ಬಾಸ್​ ಎಂದ ಕ್ರಿಕೆಟ್​ ಅಭಿಮಾನಿಗಳು

ಮೊದಲ ಪಂದ್ಯದ ಸೋಲಿನೊಂದಿಗೆ ಭಾರತ ತಂಡಕ್ಕೆ ಸರಣಿಯಲ್ಲಿ 0-1 ಹಿನ್ನಡೆ ಉಂಟಾಗಿದೆ. ಭಾನುವಾರ (ಜನವರಿ29ರಂದು) ಎರಡನೇ ಪಂದ್ಯ ನಡೆಯಲಿದ್ದು, ಫೆಬ್ರವರಿ 1ರಂದು ಅಹಮದಾಬಾದ್​ನಲ್ಲಿ ಮೂರನೇ ಹಾಗೂ ಕೊನೇ ಹಣಾಹಣಿ ನಡೆಯಲಿದೆ. ಮೊದಲ ಪಂದ್ಯ ಸೋತಿರುವ ಕಾರಣ ಭಾರತ ತಂಡಕ್ಕೆ ಉಳಿದೆರಡು ಪಂದ್ಯಗಳಲ್ಲಿ ಜಯ ಕಂಡರೆ ಮಾತ್ರ ಸರಣಿಯನ್ನು ವಶಪಡಿಸಿಕೊಳ್ಳುವುದಕ್ಕೆ ಸಾಧ್ಯವಿದೆ.

Exit mobile version