Site icon Vistara News

MS Dhoni: ವಿಶೇಷ ರೀತಿಯಲ್ಲಿ ಧೋನಿ ಹುಟ್ಟುಹಬ್ಬ ಆಚರಿಸಿದ ರಿಷಭ್​ ಪಂತ್​

rishabh pant and dhoni

ಬೆಂಗಳೂರು: ಮಹೇಂದ್ರ ಸಿಂಗ್‌ ಧೋನಿ(MS Dhoni) ಭಾರತ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಮತ್ತು ವಿಕೆಟ್‌ಕೀಪರ್‌. ಈ ಮಾತಲ್ಲಿ ಯಾವುದೇ ಅತಿಶಯೋಕ್ತಿಯಲ್ಲ. ಟಿ20, ಏಕದಿನ, ಟೆಸ್ಟ್‌ನಲ್ಲಿ ನಾಯಕನಾಗಿ, ಬ್ಯಾಟ್ಸ್‌ಮನ್‌ ಆಗಿ, ವಿಕೆಟ್‌ ಕೀಪರ್‌ ಆಗಿ ಎಲ್ಲದರಲ್ಲೂ ಧೋನಿ(dhoni birthday) ಸೈ ಎನಿಸಿಕೊಂಡವರು. ಇದೀಗ ಅವರಿಗೆ 42ನೇ ವರ್ಷದ ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬವನ್ನು ರಿಷಭ್​ ಪಂತ್(rishabh pant)​ ಅವರು ವಿಶೇಷವಾಗಿ ಆಚರಿಸಿಕೊಂಡು ಗಮನಸೆಳೆದಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ದಾಖಲೆಗಳ ವೀರನಾಗಿ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾಗ ಮುಂದೆ ವಿಕೆಟ್‌ ಕೀಪರ್‌ ಯಾರು? ಎನ್ನುವಂತಹ ಪ್ರಶ್ನೆಗಳು ಬಿಸಿಬಿಸಿ ಚರ್ಚೆಯ ವಿಷಯವಾಗಿತ್ತು. ಅಂತಹ ಪ್ರಶ್ನೆಗೆ ಉತ್ತರವಾಗಿ ಸಿಕ್ಕಿದ್ದೇ ರಿಷಭ್​ ಪಂತ್​. ಧೋನಿ(rishabh pant and dhoni) ಬಳಿಕ ಭಾರತ ತಂಡದ ಕೀಪಿಂಗ್​ ಜವಾಬ್ದಾರಿಯನ್ನು ಅತಿ ಕಿರಿಯ ವಯಸ್ಸಿನಲ್ಲಿಯೇ ಹೆಗಲ ಮೇಲೆ ಹೊತ್ತುಕೊಂಡ ಈ ಯುವ ಆಟಗಾರ ಪಂತ್​ ಆರಂಭದಲ್ಲಿ ಅಷ್ಟಾಗಿ ನಿರೀಕ್ಷಿತ ಮಟ್ಟದಲ್ಲಿ ಕೀಪಿಂಗ್​ ನಡೆಸುವಲ್ಲಿ ವಿಫಲರಾಗಿದ್ದರು. ಆ ಸಮಯದಲ್ಲಿ ಧೋನಿ ಅವರು ಪಂತ್​ಗೆ ಬೆನ್ನುಲುಬಾಗಿ ನಿಂತು ಅವರಿಗೆ ಕೀಪಿಂಗ್​ ಕೌಶಲವನ್ನು ಹೇಳಿಕೊಟ್ಟರು. ಇಲ್ಲಿಂದ ಆರಂಭವಾದ ಇವರ ಅಣ್ಣ ತಮ್ಮನಂತಹ ಬಾಂಧವ್ಯ ಸದಾ ಮುಂದುವರಿಯುತ್ತಲೇ ಬಂದಿದೆ. ಧೋನಿಯ ಮನೆ ಸದಸ್ಯರಲ್ಲಿ ಒಬ್ಬರಾಗಿದ್ದಾರೆ ಪಂತ್.

​ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ ಪಂತ್​ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಅಣ್ಣನ ಸ್ಥಾನದಲ್ಲಿರುವ ಧೋನಿಗೆ ಪಂತ್​ ಅವರು ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಪಂತ್​ ಸದ್ಯ ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ತರಬೇತಿ ಪಡೆಯುತ್ತಿದ್ದಾರೆ. ಎನ್​ಸಿಎಯಲ್ಲಿಯೇ ಪಂತ್​ ಅವರು ಕೇಕ್​ ಮೇಲೆ ಧೋನಿಯ ಸಣ್ಣ ಕಟೌಟ್​ ನಿಲ್ಲಿಸಿ ಕೇಕ್​ ಕತ್ತರಿಸಿದ್ದಾರೆ. “ನೀವು ನಮ್ಮ ಬಳಿ ಇಲ್ಲವಾದರೂ ನಾನು ನಿಮಗೋಸ್ಕರ ಕೇಕ್​ ಕತ್ತರಿಸಿದ್ದೇನೆ, ಹುಟ್ಟುಹಬ್ಬದ ಶುಭಾಶಯಗಳು ಮಾಹಿ ಬಾಯ್​” ಎಂದು ಬರೆದುಕೊಂಡಿದ್ದಾರೆ. ಈ ಫೋಟೊವನ್ನು ಪಂತ್​ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ Rishabh Pant: ಮರುಹುಟ್ಟಿನ ದಿನಾಂಕ ಘೋಷಿಸಿದ ರಿಷಭ್​ ಪಂತ್​

ಕಳೆದ ವರ್ಷ ಧೋನಿ ಪರಿವಾರದೊಂದಿಗೆ ಪಂತ್​ ಅವರು ದುಬೈಯಲ್ಲಿ ಕ್ರಿಸ್​ಮಸ್​ ಪಾರ್ಟಿಯಲ್ಲಿ ಪಾಲ್ಗೊಂಡು ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್​ಪ್ರೈಸ್​ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್​ಗೆ ತೆರಳುತ್ತಿದ್ದ ವೇಳೆ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಗಿತ್ತು. ಪ್ರಸ್ತುತ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದು ಮುಂದಿನ ವರ್ಷ ಕ್ರಿಕೆಟ್​ಗೆ ಮರಳುವ ವಿಶ್ವಾಸದಲ್ಲಿದ್ದಾರೆ.

Exit mobile version