Site icon Vistara News

ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಅಯೋಧ್ಯೆ ತಲುಪಿದ ಅನಿಲ್ ಕುಂಬ್ಳೆ, ವೆಂಕಟೇಶ್​ ಪ್ರಸಾದ್‌

anil kumble

ಲಕ್ನೋ: ಐದು ಶತಮಾನಗಳ ರಾಮಮಂದಿರದ (Ram Mandir) ಕನಸು ನನಸಾಗುತ್ತಿರುವ ಕಾರಣ ಭಾರತ ಸೇರಿ ಜಗತ್ತಿನಾದ್ಯಂತ ಇರುವ ರಾಮನ ಭಕ್ತರು ರಾಮಲಲ್ಲಾನ (Ram Lalla) ಪ್ರಾಣ ಪ್ರತಿಷ್ಠಾಪನೆಗಾಗಿ (Pran Pratishtha) ಕಾಯುತ್ತಿದ್ದಾರೆ. ಈಗಾಗಲೇ ಆಹ್ವಾನಿತರು ಅಯೋಧ್ಯೆಯತ್ತ ತೆರಳಿದ್ದಾರೆ. ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ಅನಿಲ್​ ಕುಂಬ್ಳೆ(Anil Kumble) ಮತ್ತು ವೆಂಕಟೇಶ್​ ಪ್ರಸಾದ್‌ ಅಯೋಧ್ಯೆ ತಲುಪಿದ್ದಾರೆ.

ಅನಿಲ್​ ಕುಂಬ್ಳೆ ಅವರು ಲಕ್ನೋ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ವಿಡಿಯೊ ವೈರಲ್​ ಆಗಿದೆ. ಇದೇ ವೇಳೆ ಮಾತನಾಡಿದ ಕುಂಬ್ಳೆ, ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ.


ಟೀಮ್​ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಮೊದಲು ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ಸ್ವೀಕರಿಸಿದ್ದರು. ನಂತರ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ಮಿಥಾಲಿ ರಾಜ್​ ,ಹರ್ಮನ್​ಪ್ರೀತ್​ ಕೌರ್ ಸೇರಿ ಇನ್ನು ಕೆಲ ಹಾಲಿ ಮತ್ತು ಮಾಜಿ ಆಟಗಾರರಿಗೂ ಆಹ್ವಾನವನ್ನು ನೀಡಲಾಗಿದೆ. ವರದಿಗಳ ಪ್ರಕಾರ ಆಹ್ವಾನ ಪಡೆದ ಎಲ್ಲ ಆಟಗಾರರು ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ರಾಮಮಂದಿರದಲ್ಲಿ ಬೆಳಗ್ಗೆ 6.30ರಿಂದಲೇ ಧಾರ್ಮಿಕ ವಿಧಿವಿಧಾನಗಳು ಶುರುವಾಗಲಿವೆ. ಬೆಳಗ್ಗೆ 6.30ಕ್ಕೆ ರಾಮಲಲ್ಲಾ ಮೂರ್ತಿಗೆ ಶೃಂಗಾರ ಅಥವಾ ಜಾಗರಣ ಆರತಿ ಬೆಳಗಲಾಗುತ್ತದೆ. ಇನ್ನು 7 ಗಂಟೆಯಿಂದಲೇ ರಾಮನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ರಾಮಮಂದಿರ ಟ್ರಸ್ಟ್‌ ನೀಡಿರುವ ಪಾಸ್‌ಗಳ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಭಕ್ತರು ದೇವಾಲಯ ಪ್ರವೇಶಿಸಿ ಬೆಳಗ್ಗೆ 7 ಗಂಟೆಯಿಂದ 11.30ರವರೆಗೆ ರಾಮನ ದರ್ಶನ ಪಡೆಯಬಹುದಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರತಿ ನಡೆಯಲಿದೆ.

ಇದನ್ನೂ ಓದಿ Ram Mandira: ಅಯೋಧ್ಯೆ ಮಂದಿರ ಉದ್ಘಾಟನೆಗೆ ಪಾಲ್ಗೊಳ್ಳಲಿದ್ದಾರೆ ʻರಾಮಾಯಣʼದ ಸೀತಾ!

ಪ್ರಾಣ ಪ್ರತಿಷ್ಠೆ ಎಷ್ಟು ಗಂಟೆಗೆ?

ಮಧ್ಯಾಹ್ನ 12.20ರಿಂದ 12.45ರ ಅವಧಿಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೆಲವರು ಮಾತ್ರ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿಸಲಿದ್ದಾರೆ. ಪ್ರಾಣಪ್ರತಿಷ್ಠಾಪನೆ ನೆರವೇರಿದ ಬಳಕ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತ್ತೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 7.30ಕ್ಕೆ ಸಂಧ್ಯಾರತಿಯೊಂದಿಗೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವು ಸಮಾರೋಪವಾಗಲಿದೆ.

ಪ್ರಾಣ ಪ್ರತಿಷ್ಠಾ ಎಂದರೇನು?

ಪ್ರಾಣ ಪ್ರತಿಷ್ಠಾ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ.

Exit mobile version