Site icon Vistara News

INDvsPAK | ಅಧಿಕಾರ ಕಳೆದುಕೊಂಡರೂ ಅಹಂಕಾರ ಬಿಡದ ರಮೀಜ್!​; ಭಾರತವನ್ನು ಪದೇ ಪದ ಸೋಲಿಸಿ ಎಂದ ಪಿಸಿಬಿ ಮಾಜಿ ಅಧ್ಯಕ್ಷ

INDvsPAK

ಇಸ್ಲಾಮಾಬಾದ್​ : ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ರಮೀಜ್​ ರಾಜಾ ಅವರು ಇತ್ತೀಚೆಗೆ ಪಿಸಿಬಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ. ಪ್ರಧಾನ ಮಂತ್ರಿ ಶಹಬಾಜ್​ ಶರೀಫ್​ ತಮಗೆ ಆಪ್ತರಾಗಿರುವ ನಜೀಮ್ ಸೇಥ್​ಗೆ ಪಟ್ಟ ಕಟ್ಟಿದ್ದಾರೆ. ಏತನ್ಮಧ್ಯೆ, ಪಿಸಿಬಿಯ ಹುದ್ದೆ ಹೊಂದಿರುವ ಸಂದರ್ಭದಲ್ಲಿ ಭಾರತ ಕ್ರಿಕೆಟ್​ ತಂಡ ಹಾಗೂ ಬಿಸಿಸಿಐ ವಿರುದ್ಧ ಅನಗತ್ಯ ಹೊಟ್ಟೆಕಿಚ್ಚು ಪ್ರದರ್ಶಿಸುತ್ತಿದ್ದ ರಮೀಜ್​, ಸ್ಥಾನ ಕಳೆದುಕೊಂಡ ಬಳಿಕವೂ ಹಳೆ ಚಾಳಿ ಬದಲಿಸಿಕೊಂಡಿಲ್ಲ. ಈಗಲೂ ಭಾರತ ತಂಡವನ್ನು (INDvsPAK) ಸೋಲಿಸುವ ಮತ್ತು ಬಿಸಿಸಿಐ ಆತ್ಮಸ್ಥೈರ್ಯ ಕುಗ್ಗಿಸುವ ಕಾರ್ಯ ಮಾಡುತ್ತಿದ್ದಾರೆ.

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅಭಿಮಾನಿಗಳ ಜತೆ ಮಾತನಾಡಿದ ಅವರು ಭಾರತ ತಂಡವನ್ನು ಪದೇ ಪದೆ ಸೋಲಿಸಬೇಕು ಹಾಗೂ ಅವರ ಆತ್ಮ ವಿಶ್ವಾಸವನ್ನು ಕುಗ್ಗಿಸಬೇಕು ಎಂಬುದಾಗಿ ಬಾಬರ್ ಅಜಮ್​ ಪಡೆಗೆ ಕರೆ ಕೊಟ್ಟಿದ್ದಾರೆ.

“ಭಾರತ ಕ್ರಿಕೆಟ್​ ತಂಡಕ್ಕೆ ತಾನು ವಿಶ್ವದ ಸೂಪರ್​ ಪವರ್​ ಎಂಬ ಭ್ರಮೆ ಇದೆ. ಅದನ್ನು ಹೋಗಲಾಡಿಸಬೇಕಾದರೆ ಅವರನ್ನು ಆಗಾಗ ಸೋಲಿಸುತ್ತಿರಬೇಕು. ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡವನ್ನು ಎರಡು ಬಾರಿ ಸೋಲಿಸಿದ್ದೇವೆ. ಇದರಿಂದ ಅವರ ಅಹಂಕಾರ ಕಡಿಮೆಯಾಗಿದೆ. ಮುಂದೆಯೂ ಅವಕಾಶ ಸಿಕ್ಕಾಗ ಸೋಲಿಸುತ್ತಿರಬೇಕು,” ಎಂಬದಾಗಿ ರಮೀಜ್​ ಹೇಳಿದ್ದಾರೆ.

”ತಾನು ದೊಡ್ಡವನು ಎಂಬ ಭ್ರಮೆಯಿಂದಲೇ ಬಿಸಿಸಿಐ ತನಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತಿದೆ. ಏಷ್ಯಾ ಕಪ್​ ಅನ್ನು ಪಾಕಿಸ್ತಾನ ಬಿಟ್ಟು ಬೇರೆ ಕಡೆಯಲ್ಲಿ ನಡೆಸುವುದಾಇ ಹೇಳುತ್ತಿದೆ.ಈ ಮಾದರಿಯ ವರ್ತನೆಗಳನ್ನು ನಿಲ್ಲಿಸಬೇಕಾದರೆ ಭಾರತ ತಂಡವನ್ನು ನಿರಂತರವಾಗಿ ಸೋಲಿಸುತ್ತಿರಬೇಕು,” ಎಂದು ಹೇಳಿದರು.

ಇದೇ ವೇಳೆ ಅವರು ಭಾರತ ತಂಡ ಪಾಕಿಸ್ತಾನಕ್ಕೆ ಏಷ್ಯಾ ಕಪ್​ಗಾಗಿ ಬರವುದರ ಮೇಲೆ ಪಾಕಿಸ್ತಾನ ಭಾರತದಲ್ಲಿ ನಡೆಯುವ ವಿಶ್ವ ಕಪ್​ನಲ್ಲಿ ಪಾಲ್ಗೊಳ್ಳುವ ನಿರ್ಧಾರ ಕೈಗೊಳ್ಳಬೇಕು ಎಂದು ಪುನರುಚ್ಚರಿಸಿದರು.

ಇದನ್ನೂ ಓದಿ | Pakistan Cricket Team | ಪಾಕಿಸ್ತಾನ ಕ್ರಿಕೆಟ್​ ಮಂಡಳಿಯಲ್ಲಿ ಅಫ್ರಿದಿಗೂ ಒಂದು ಸ್ಥಾನ; ಯಾವ ಹುದ್ದೆ ಅವರಿಗೆ?

Exit mobile version