Site icon Vistara News

WTC Final : ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಆಡುವವರಿಗೆ ಐಪಿಎಲ್​ನಲ್ಲಿ ಬ್ರೇಕ್​ ಕೊಡಬೇಕು ಎಂದ ಶಾಸ್ತ್ರಿ

Ravi Shastri said that those who play in the World Test Championship final should be given a break in the IPL

ಮುಂಬಯಿ: ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ಗೆ ಎರಡನೇ ಬಾರಿ ತೇರ್ಗಡೆ ಹೊಂದಿದೆ. ಮೊದಲ ಆವೃತ್ತಿಯಲ್ಲಿ ಫೈನಲ್​ಗೆ ಪ್ರವೇಶ ಪಡೆದ ಹೊರತಾಗಿಯೂ ನ್ಯೂಜಿಲ್ಯಾಂಡ್​ ವಿರುದ್ಧ ಸೋತ ಕಾರಣ ಚಾಂಪಿಯನ್​ಪಟ್ಟ ಅಲಂಕರಿಸಲು ವಿಫಲಗೊಂಡಿತ್ತು. ಎರಡನೇ ಆವೃತ್ತಿಯಲ್ಲಿ ಮತ್ತೆ ಪ್ರಶಸ್ತಿ ಸುತ್ತಿಗೇರಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡ ಫೈನಲ್​ನಲ್ಲಿ ಎದುರಾಳಿ. ಹೀಗಾಗಿ ತಂಡ ರಚನೆಯ ಬಗ್ಗೆ ಜೋರು ಚರ್ಚೆಗಳು ನಡೆಯುತ್ತಿವೆ. ಇಂಗ್ಲೆಂಡ್​ನ ಕೆನಿಂಗ್ಟನ್​ ಓವಲ್​ನಲ್ಲಿ ನಡೆಯಬೇಕಾಗಿರುವ ಈ ಹಣಾಹಣಿಯಲ್ಲಿ ಯಾರೆಲ್ಲ ಇರಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಇದೇ ವೇಳೆ ವರ್ಕ್​ಲೋಡ್​ ಮ್ಯಾನೇಜ್ಮೆಂಟ್​ ಬಗ್ಗೆಯೂ ಚರ್ಚೆಗಳು ಶುರುವಾಗಿದೆ. ಯಾಕೆಂದರೆ ಟೂರ್ನಿಗಿಂತ ಮೊದಲು ಐಪಿಎಲ್ 16ನೇ ಆವೃತ್ತಿ ನಡೆಯಲಿದೆ. ಹೀಗಾಗಿ ಐಪಿಎಲ್ ಆಡಿ ಮುಗಿಸಿ ನೇರವಾಗಿ ಇಂಗ್ಲೆಂಡ್​ಗೆ ಹೋದರೆ ಒತ್ತಡ ಉಂಟಾಗಬಹುದು ಎಂದು ಹೇಳಲಾಗುತ್ತಿದೆ. ಅದಕ್ಕೆ ಪರಿಹಾರ ಎಂಬಂತೆ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಆಡುವ ಆಟಗಾರರಿಗೆ ವಿಶ್ರಾಂತಿ ನೀಡಬೇಕು ಎಂದು ಮಾಜಿ ಕೋಚ್​ ರವಿ ಶಾಸ್ತ್ರಿ ಹೇಳಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯು ಈ ವರ್ಷಾರಂಭದಲ್ಲಿ ಐಪಿಎಲ್​ ಫ್ರಾಂಚೈಸಿಗಳ ಜತೆ ಮಾತನಾಡಿ ಮುಂಬರುವ ಏಕ ದಿನ ವಿಶ್ವ ಕಪ್​ಗೆ ಪೂರಕವಾಗಿ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಬೇಕು ಎಂದು ಹೇಳಿತ್ತು. ಅದೇ ರೀತಿಯಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಆಡಲಿರುವ ಆಟಗಾರರಿಗೂ ಐಪಿಎಲ್​ನಲ್ಲಿ ವಿಶ್ರಾಂತಿ ನೀಡಬೇಕು ಎಂದು ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್​ ಟೂರ್ನಿ ಮೇ 28ಕ್ಕೆ ಮುಕ್ತಾಯವಾಗುತ್ತದೆ. ಜೂನ್ 7ರಿಂದ 11ರವರೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ನಡೆಯಲಿದೆ. ಹತ್ತು ದಿನಗಳ ಒಳಗೆ ಟಿ20 ಮಾದರಿಯಿಂದ ಟೆಸ್ಟ್ ಮಾದರಿಗೆ ಪರಿವರ್ತನೆಗೊಂಡು ಇಂಗ್ಲೆಂಡ್​ಗೆ ಪ್ರವಾಸ ಮಾಡಿ ಸಜ್ಜುಗೊಳ್ಳುವುದು ಸುಲಭದ ಕೆಲಸವಲ್ಲ. ಹೀಗಾಗಿ ಫ್ರಾಂಚೈಸಿಗಳ ಜತೆ ಬಿಸಿಸಿಐ ಮಾತುಕತೆ ನಡೆಸಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವಂತೆ ಸೂಚನೆ ನೀಡಬೇಕು ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯನ್​ ಎಕ್ಸ್​ಪ್ರೆಸ್​ ಜತೆ ಮಾತನಾಡಿದ ಅವರು, ಐಪಿಎಲ್​ ಅವಧಿಯಲ್ಲಿ ಫ್ರಾಂಚೈಸಿಗಳು ಹಿರಿಯ ಆಟಗಾರರಿಗೆ ಹೆಚ್ಚು ವಿಶ್ರಾಂತಿ ಕಲ್ಪಿಸುವಂತೆ ಬಿಸಿಸಿಐ ಮನವರಿಕೆ ಮಾಡಬೇಕು. ಭಾರತ ತಂಡಕ್ಕೆ ಅವರ ನೆರವು ಬೇಕಾಗಿದೆ. ಹೀಗಾಗಿ ಹೆಚ್ಚು ಪಂದ್ಯಗಳಲ್ಲಿ ಆಡದಂತೆ ನೋಡಿಕೊಳ್ಳಬೇಕು ಎಂದು ರವಿ ಸಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : IND VS AUS: ಸಿಕ್ಸರ್​ ಬಾರಿಸಿ ರವಿ ಶಾಸ್ತ್ರಿ ದಾಖಲೆ ಮುರಿದ ವೇಗಿ ಉಮೇಶ್​ ಯಾದವ್​​

ಕ್ರಿಕೆಟ್ ಪಂದ್ಯಗಳ ಸಂಖ್ಯೆ ಏರಿಕೆಯಾಗುತ್ತಿವೆ. ಆಟಗಾರರಿಗೆ ಕಡಿಮೆ ಪ್ರಮಾಣದಲ್ಲಿ ವಿಶ್ರಾಂತಿ ಲಭಿಸುತ್ತಿದೆ. ಇದರಿಂದಾಗಿ ಆಟಗಾರರ ಸೇವೆ ಅಗತ್ಯ ಸಂದರ್ಭದಲ್ಲಿ ರಾಷ್ಟ್ರೀಯ ತಂಡಕ್ಕೆ ದೊರೆಯುತ್ತಿಲ್ಲ. ಗಾಯದ ಸಮಸ್ಯೆಯಿಂದಾಗಿ ಹೊರಕ್ಕೆ ಕುಳಿತುಕೊಳ್ಳಬೇಕಾಗಿದೆ. ಹೀಗಾಘಿ ಹೆಚ್ಚು ಪಂದ್ಯಗಳಲ್ಲಿ ಆಡಿದಷ್ಟು ಹೆಚ್ಚು ಬ್ರೇಕ್​ ಕೂಡ ನೀಡಬೇಕಾಗುತ್ತದೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

ರಿಷಬ್ ಪಂತ್ ಇಲ್ಲದ ಕಾರಣ ಕೆಎಲ್ ರಾಹುಲ್ ಡಬ್ಲ್ಯುಟಿಸಿಯಲ್ಲಿ ವಿಕೆಟ್ ಹಿಂದೆ ಕೀಪಿಂಗ್ ಮಾಡಬೇಕು. ಇಂಗ್ಲೆಂಡ್‌ನಲ್ಲಿ ವೇಗದ ಬೌಲಿಂಗ್​ಗೆ ಹೆಚ್ಚು ಅವಕಾಶ ಇರುತ್ತದೆ. ಆದ್ದರಿಂದ ಕೀಪರ್ ಹೆಚ್ಚಿನ ಸಮಯ ದೂರ ನಿಲ್ಲಬೇಕಾಗುತ್ತದೆ. ಅದರಿಂದಾಗಿ ರಾಹುಲ್​ಗೆ ಅವಕಾಶ ನೀಡಿದರೆ ಅವರು 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲ ಹೆಚ್ಚಲಿದೆ. ಕೆ. ಎಸ್​ ಭರತ್​ ಹೊಸ ಆಟಗಾರ. ಅವರನ್ನು ಆಡಿಸಬೇಕು ಎಂದೇನೂ ಇಲ್ಲ. ಅವರಿಗೆ ಮುಂದೆ ಅವಕಾಶಗಳು ಸಿಗಬಹುದು. ದೊಡ್ಡ ದೊಡ್ಡ ಪಂದ್ಯಗಳಲ್ಲಿ ಹಿರಿಯ ಆಟಗಾರರಿಗೆ ಆಯ್ಕೆ ವಿಚಾರದಲ್ಲಿ ಹೆಚ್ಚು ಜಾಣತನ ತೋರಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.

Exit mobile version