Site icon Vistara News

Team India | ನಾಲ್ಕನೇ ಕ್ರಮಾಂಕಲ್ಲಿ ಬ್ಯಾಟ್‌ ಮಾಡುವ ನಿರೀಕ್ಷೆಯಿತ್ತು ಎಂದ ರವೀಂದ್ರ ಜಡೇಜಾ

team india

ದುಬೈ : ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿದ್ದು ಕ್ಯಾಪ್ಟನ್‌ ರೋಹಿತ್‌ ಶರ್ಮ ಅವರ ಮಾಸ್ಟರ್‌ ಸ್ಟ್ರೋಕ್‌ ನಿರ್ಧಾರವಾಗಿತ್ತು. ೨೯ ಎಸೆತಗಳಲ್ಲಿ ೩೫ ರನ್‌ ಬಾರಿಸಿದ ಅವರು ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಆರು ಅಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದುಕೊಂಡು ಬರಬೇಕಾಗಿದ್ದ ಆಟಗಾರನನ್ನು ನಾಲ್ಕನೇ ಕ್ರಮಾಂಕದಲ್ಲಿ ಕಳುಹಿಸಿ ವಿಕೆಟ್‌ ಉರುಳದಂತೆ ನೋಡಿಕೊಂಡಿದ್ದಲ್ಲದೆ, ಜಯ ದಾಖಲಿಸಲು ಬೇಕಾದ ಅಗತ್ಯ ರನ್‌ಗಳನ್ನು ಭಾರತ ತಂಡ ಕ್ರೋಡೀಕರಿಸಿತ್ತು. ಅಂತೆಯೇ ತಮಗೆ ಬಡ್ತಿ ಕೊಟ್ಟ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ನಿರ್ಧಾರವನ್ನು ಸ್ವತಃ ರವೀಂದ್ರ ಜಡೇಜಾ ಸ್ವಾಗತಿಸಿದ್ದು, ಅಂಥ ಅವಕಾಶದ ನಿರೀಕ್ಷೆಯಿತ್ತು ಎಂದು ಹೇಳಿದ್ದಾರೆ.

“ಆಡುವ ೧೧ರ ಬಳಗವನ್ನು ನೋಡಿದ ಬಳಿಕ ನನಗೆ ಅಂಥದ್ದೊಂದು ನಿರೀಕ್ಷೆ ಇತ್ತು. ನಾನು ಮಾನಸಿಕವಾಗಿ ಸಿದ್ಧಗೊಂಡಿದ್ದೆ ಅದೃಷ್ಟಕ್ಕೆ ತಂಡಕ್ಕೆ ಅಗತ್ಯವಾಗಿದ್ದ ರನ್‌ ಬಾರಿಸಿದೆ,” ಎಂದು ಜಡೇಜಾ ಹೇಳಿದ್ದಾರೆ.

“ತಂಡದಲ್ಲಿ ನಾನೊಬ್ಬನೇ ಎಡಗೈ ಬ್ಯಾಟರ್‌ ಆಗಿದ್ದೆ. ಎಡಗೈ ಸ್ಪಿನ್ನರ್‌ಗಳು ಅಥವಾ ಲೆಗ್ ಸ್ಪಿನ್ನರ್‌ಗಳನ್ನು ಎದುರಿಸಲು ಎಡಗೈ ಸ್ಪಿನ್ನರ್‌ಗಳಿಗೆ ಹೆಚ್ಚಿನ ಅವಕಾಶ ಇರುತ್ತದೆ. ಹೀಗಾಗಿ ನಾನು ಅವಕಾಶ ಪಡೆದುಕೊಂಡೆ,” ಎಂದು ಹೇಳಿದರು.

ನಾನು ಪರಿಸ್ಥಿತಿಗೆ ಪೂರಕವಾಗಿ ಆಡುತ್ತೇನೆ. ಆದರೆ, ಟಿ೨೦ ಮಾದರಿಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸುವಷ್ಟು ಸಮಯ ಇರುವುದಿಲ್ಲ. ಕ್ರೀಸ್‌ಗೆ ಇಳಿದ ಮೇಲೆ ಏನು ಅನಿಸುತ್ತದೊ ಅದನ್ನು ಮಾಡಬೇಕು. ಅಗತ್ಯವಿದ್ದಾಗ ರನ್ ಬಾರಿಸಬೇಕು,” ಎಂದು ಅವರು ಹೇಳಿದ್ದಾರೆ.

ನಾಲ್ಕನೇ ಕ್ರಮಾಂಕ ಮುಂದುವರಿಯುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ಎದುರಾಳಿ ತಂಡದಲ್ಲಿ ಯಾರು ಬೌಲಿಂಗ್‌ ದಾಳಿ ನಡೆಸುತ್ತಿದ್ದಾರೆ ಎಂಬುದನ್ನು ಆಧರಿಸಿ ಬ್ಯಾಟಿಂಗ್‌ಗೆ ಇಳಿಯುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | IPL | ಸಿಎಸ್‌ಕೆ ಮತ್ತು ಜಡೇಜಾ ನಡುವಿನ ಮುನಿಸು ಕೊನೆಯಾಗುವುದೆಂದು? ಇನ್ನೂ ಮೂಡಿಲ್ಲ ಒಮ್ಮತ

Exit mobile version