Site icon Vistara News

Rishabh Pant | ಅಪಘಾತದಿಂದ ಗಾಯಗೊಂಡಾಗಲೂ ತಾಯಿಯನ್ನೇ ಕನವರಿಸುತ್ತಿದ್ದ ರಿಷಭ್​ ಪಂತ್​!

Rishabh Pant Accident

ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡ ಸಂದರ್ಭದಲ್ಲೂ ರಿಷಭ್​ ಪಂತ್(Rishabh Pant) ಅವರು ತಮ್ಮ ತಾಯಿಯನ್ನು ಕನವರಿಸುತ್ತಿದ್ದ ವಿಚಾರ ಇದೀಗ ತಿಳಿದುಬಂದಿದೆ. ಪಂತ್​ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ ಬಸ್‌ ಚಾಲಕ ಸುಶೀಲ್‌ ಕುಮಾರ್​ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ರಿಷಭ್​ ಪಂತ್​ ಅವರು ತಮ್ಮ ತಾಯಿಗೆ ಕರೆ ಮಾಡುವಂತೆ ಕೇಳಿಕೊಂಡರು ಎಂದು ಸುಶೀಲ್‌ ಹೇಳಿದ್ದಾರೆ.

ಶುಕ್ರವಾರ (ಡಿಸೆಂಬರ್​ 30) ಪಂತ್ ಕಾರಿನಲ್ಲಿ​ ದೆಹಲಿಯಿಂದ ಉತ್ತರಾಖಂಡದ ಕಡೆಗೆ ಏಕಾಂಗಿಯಾಗಿ ಹೊರಟಿದ್ದರು. ಇದೇ ವೇಳೆ ಡೆಲ್ಲಿ- ಡೆಹ್ರಾಡೂನ್​ ಎಕ್ಸ್​ಪ್ರೆಸ್​ವೇನ ರೂರ್ಕಿ ನರ್ಸನ್​ ಗಡಿಯ ಬಳಿ ಬೆಳಗ್ಗೆ 5.30ಕ್ಕೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದರು. ಸದ್ಯ ಅವರು ಡೆಹ್ರಾಡೂನ್​ನ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಂತ್​ ಅವರನ್ನು ರಕ್ಷಿಸಿದ ಬಸ್​ ಡ್ರೈವರ್​ ಸುಶೀಲ್‌ ಕುಮಾರ್ ಇದೀಗ ಅಪಘಾತ ಸಂಭವಿಸಿದ ವೇಳೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದದ್ದನ್ನು ನೋಡಿದೆ. ಇದೇ ವೇಳೆ, ನಾನು ಬಸ್​ ನಿಲ್ಲಿಸಿ ನೆರವಿಗೆ ಧಾವಿಸಿದೆ. ಅಷ್ಟರಲ್ಲಿ ಪಂತ್ ತಮ್ಮ ಕಾರಿನ ಕಿಟಕಿಯಿಂದ ಅರ್ಧದಷ್ಟು ಹೊರಗಿದ್ದರು. ಕೂಡಲೇ ಅವರನ್ನು ಕಾರಿನಿಂದ ಹೊರತೆಗೆದ ಬಳಿಕ ಬೇರೆ ಯಾರಾದರೂ ಇದ್ದಾರೆಯೇ ಎಂದು ಪರಿಶೀಲಿಸಿದೆ. ಆದರೆ ಯಾರು ಇರಲಿಲ್ಲ. ಈ ವೇಳೆ ಪಂತ್​ ನಾನು ಕ್ರಿಕೆಟಿಗ ನನ್ನ ಹೆಸರು ರಿಷಭ್​ ಪಂತ್​ ಎಂದು ಹೇಳಿ, ತಮ್ಮ ತಾಯಿಗೆ ಕರೆ ಮಾಡುವಂತೆ ಹೇಳಿದರು. ಬಳಿಕ ತಾಯಿಯ ನಂಬರ್‌ ಕೊಟ್ಟರು. ತಕ್ಷಣ ನಾವು ಆ ಸಂಖ್ಯೆಗೆ ಕರೆ ಮಾಡಿದಾಗ ಅದು ಸ್ವಿಚ್‌ ಆಫ್‌ ಆಗಿತ್ತು ಎಂದು ಘಟನೆಯನ್ನು ವಿವರಿಸಿದ್ದಾರೆ.

ಪಂತ್​ ಅವರ ಜೀವ ಉಳಿಸಿ ಮಾನವೀಯತೆ ಮೆರೆದ ಸುಶೀಲ್‌ ಕುಮಾರ್ ಮತ್ತು ಕಂಡಕ್ಟರ್‌ಗೆ ಶನಿವಾರ ಹರ್ಯಾಣ ರಾಜ್ಯ ಸಾರಿಗೆ ಸಂಸ್ಥೆ ಸನ್ಮಾನಿಸಿ, ಗೌರವಿಸಿತ್ತು.

ಇದನ್ನೂ ಓದಿ | Rishabh Pant | ಆಸ್ಟ್ರೇಲಿಯಾ ಟೆಸ್ಟ್​ ಸರಣಿ ಜತೆಗೆ ಐಪಿಎಲ್​ನಿಂದಲೂ ಸಂಪೂರ್ಣವಾಗಿ ಹೊರಬಿದ್ದ ರಿಷಭ್​ ಪಂತ್​!

Exit mobile version