Site icon Vistara News

Rohit Sharma: ಮುಂಬೈಗೆ ಮತ್ತೆ ರೋಹಿತ್​ ನಾಯಕನಾಗುವುದು ಖಚಿತ; ಸುಳಿವು ನೀಡಿದ ಮಾಜಿ ಕ್ರಿಕೆಟಿಗ

Rohit Sharma

ಮುಂಬಯಿ: ಮುಂದಿನ ಆವೃತ್ತಿ ವೇಳೆ ರೋಹಿತ್​ ಶರ್ಮ(Rohit Sharma) ಅವರು ಮುಂಬೈ ಇಂಡಿಯನ್ಸ್(Mumbai Indians) ತಂಡವನ್ನು ತೊರೆಯಲು ಬಯಸಿದ್ದಾರೆ ಎಂಬ ಮಾತು ಕೇಳಿ ಬಂದ ಒಂದೇ ದಿನದ ಅಂತರದಲ್ಲಿ ರೋಹಿತ್​ ಮತ್ತೆ ಮುಂಬೈ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಭಾರತ ತಂಡ ಮಾಜಿ ಆಟಗಾರ ಎಸ್ ಶ್ರೀಶಾಂತ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ(Hardik Pandya) ಅವರ ನಾಯಕತ್ವದಿಂದ ರೋಹಿತ್​ಗೆ ಸ್ವಲ್ಪವೂ ಸಂತೋಷವಾಗಿಲ್ಲ ಮತ್ತು ಡ್ರೆಸ್ಸಿಂಗ್ ರೂಮ್‌ ನಲ್ಲಿಯೂ ಭಿನ್ನಾಭಿಪ್ರಾಯವಿದೆ ಹೀಗಾಗಿ ರೋಹಿತ್​ ಮುಂಬೈ ತಂಡವನ್ನು ತೊರೆಯಲಿದ್ದಾರೆ ಎಂದು ಗುರುವಾರ ವರದಿಯಾಗಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿಯೂ ಬಹಳಷ್ಟು ಚರ್ಚೆಗಳು ಕೂಡ ನಡೆದಿತ್ತು. ಇದರ ಬೆನ್ನಲ್ಲೇ ಶ್ರೀಶಾಂತ್ ನೀಡಿದ ಹೇಳಿಕೆ ಮತ್ತಷ್ಟು ಕುತೂಹಲ ಕೆರಳಿದೆ.

ರೋಹಿತ್​ ಮತ್ತು ಪಾಂಡ್ಯ ಹಲವಾರು ನಿರ್ಧಾರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಾದಗಳು ನಡೆಯುತ್ತಿವೆ, ಇದು ಡ್ರೆಸ್ಸಿಂಗ್ ರೂಮ್‌ನಲ್ಲಿಯೂ ಕಳಪೆ ವಾತಾವರಣವನ್ನು ಉಂಟುಮಾಡುತ್ತಿದೆ ಎಂದು ಮುಂಬೈ ಆಟಗಾರನೊಬ್ಬ ಹೇಳಿಕೆ ನೀಡಿದ್ದಾಗಿ ನ್ಯೂಸ್-24 ವರದಿ ಮಾಡಿತ್ತು. ಮುಂದಿನ ಸೀಸನ್ ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ ಹೀಗಾಗಿ ಈ ವರದಿಯನ್ನು ಬಹುತೇಕರು ನಂಬಿದ್ದರು. ಆದರೆ ಶ್ರೀಶಾಂತ್ ಮತ್ತೆ ರೋಹಿತ್​ ಮುಂಬೈ ನಾಯಕನಾಗಲಿದ್ದಾರೆ ಎಂದು ಹೇಳಿದ್ದಾರೆ.

2011ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ ರೋಹಿತ್ ಶರ್ಮಾ ಅವರು ತಂಡದ ನಾಯಕತ್ವ ವಹಿಸಿದ್ದರು. 2013, 2015, 2017, 2019 ಮತ್ತು 2020ರಲ್ಲಿ ಅವರ ನಾಯಕತ್ವದಲ್ಲಿ ಮುಂಬೈ ಕಪ್ ಗೆದ್ದುಕೊಂಡಿತ್ತು. ಸದ್ಯ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಆಡಿದ ಸತತ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ಪಾಂಡ್ಯ ಅವರ ಕಳಪೆ ನಾಯಕತ್ವವೇ ಕಾರಣ ಎಂದು ಮುಂಬೈ ಮತ್ತು ರೋಹಿತ್​ ಅಭಿಮಾನಿಗಳು ಆರೋಪ ಮಾಡಿದ್ದಾರೆ.

ಇತ್ತೀಚೆಗೆ ತಂಡದ ನಾಯಕತ್ವವನ್ನು ಮತ್ತೊಮ್ಮೆ ರೋಹಿತ್ ಶರ್ಮಾಗೆ(Rohit Sharma) ನೀಡುವ ಕುರಿತು ಮಾತುಕತೆ ನಡೆಯುತ್ತಿದೆ, ರೋಹಿತ್ ಅವರನ್ನು ಮನವೊಲಿಸಲು ಮ್ಯಾನೇಜ್‌ಮೆಂಟ್‌ ಸಭೆ ನಡೆಸಿದೆ ಎನ್ನಲಾಗಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಇದನ್ನೂ ಓದಿ IPL 2024: ಮೂರು ಕೋಟಿ ವಿದ್ಯುತ್ ಬಿಲ್‌ ಪಾವತಿ; ಚೆನ್ನೈ-ಹೈದರಾಬಾದ್​ ಪಂದ್ಯ ನಿರಾಳ

ವೈರಲ್​ ಆಗಿದ್ದ ಫೋಟೊದಲ್ಲಿ ಮುಂಬೈ ಫ್ರಾಂಚೈಸಿಯ ಮಾಲೀಕರಾದ ನೀತು ಅಂಬಾನಿ (Nita Ambani) ಮತ್ತು ಅವರ ಪುತ್ರ ಆಕಾಶ್ ಅಂಬಾನಿ (Akash Ambani) ಹಾಗೂ ಫ್ರಾಂಚೈಸ್‌ನ ಜಾಗತಿಕ ಪ್ರದರ್ಶನದ ಮುಖ್ಯಸ್ಥ ಮಹೇಲಾ ಜಯವರ್ಧನೆ (Mahela Jayawardene) ಮಹತ್ವದ ಸಭೆ ನಡೆಸುತ್ತಿರುವುದು ಕಂಡು ಬಂದಿತ್ತು.

ಹಾರ್ದಿಕ್‌ ಅವರ ನಾಯಕತ್ವದ ಬಗ್ಗೆ ತಂಡದ ಕೋಚ್‌ಗಳಿಗೂ ಮತ್ತು ಆಟಗಾರರಿಗೂ ಅಸಮಾಧಾನವಿದೆ ಎನ್ನಲಾಗಿದೆ. ಪ್ರಮುಖವಾಗಿ ಬೌಲರ್‌ಗಳ ನಿರ್ವಹಣೆಯಲ್ಲಿ ಹಾರ್ದಿಕ್‌ ಪಾಂಡ್ಯ ಪದೇಪದೇ ಎಡವಟ್ಟು ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ. ತಂಡದ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ ಅವರಿಗೆ ಇನಿಂಗ್ಸ್​ನ ಮೊದಲ ಓವರ್​ ನೀಡುವ ಬದಲು 5 ಓವರ್​ ಬಳಿಕ ಬೌಲಿಂಗ್​ ನೀಡುತ್ತಿದ್ದಾರೆ. ಇದೇ ವಿಚಾರದಲ್ಲಿ ಹಾರ್ದಿಕ್‌ರ ಮೇಲೆ ಬೌಲಿಂಗ್‌ ಕೋಚ್‌ ಲಸಿತ್‌ ಮಾಲಿಂಗ ಸಿಟ್ಟು ಮಾಡಿಕೊಂಡು ಎದ್ದು ಹೋಗುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು.

Exit mobile version