Site icon Vistara News

Rohit Sharma: ಬೆಸ್ಟ್​ ಫೀಲ್ಡರ್ ಅವಾರ್ಡ್​ ಗೆದ್ದ ನಾಯಕ ರೋಹಿತ್​; ವಿಡಿಯೊ ವೈರಲ್

Rohit Sharma best fielder award

ಕೋಲ್ಕೊತಾ: ಪ್ರತಿ ಪಂದ್ಯದಲ್ಲಿಯೂ ಉತ್ತಮ ಫೀಲ್ಡಿಂಗ್​ ನಡೆಸಿದ ಆಟಗಾರರನ್ನು ಗುರುತಿಸಿ ನೀಡಲಾಗುವ ‘ಬೆಸ್ಟ್​ ಫೀಲ್ಡರ್ ಅವಾರ್ಡ್’ ಈ ಬಾರಿ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರಿಗೆ ಲಭಿಸಿದೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ತಂಡದ ಎಲ್ಲ ಆಟಗಾರರು ಜೋರಾಗಿ ಕೂಗಿ ರೋಹಿತ್​ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವೀಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಆಟಗಾರರಲ್ಲಿ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಬಿಸಿಸಿಐ ಈ ವಿನೂತನ ಚಿನ್ನದ ಪದಕ ನೀಡಿವ ಕಾರ್ಯಕ್ರಮವನ್ನು ನಡೆಸುತ್ತ ಬಂದಿದೆ. ಪಂದ್ಯದ ವೇಳೆ ಯಾರು ಉತ್ತಮವಾಗಿ ಫೀಲ್ಡಿಂಗ್​ ನಡೆಸುತ್ತಾರೋ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ. ಈಗಾಗಲೇ ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಶಾರ್ದೂಲ್​ ಠಾಕೂರ್​, ಕೆ.ಎಲ್​ ರಾಹುಲ್​ ಮತ್ತು ರವೀಂದ್ರ ಜಡೇಜ ಈ ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಶರ್ಮ ಅವರಿಗೆ ಈ ಪ್ರಶಸ್ತಿ ಒಲಿದಿದೆ.

ಇದನ್ನೂ ಓದಿ Virat Kohli: ಲಂಕಾದ ದಿಗ್ಗಜ ಬ್ಯಾಟರ್​ನ ವಿಶ್ವಕಪ್ ದಾಖಲೆ ಮುರಿದ ಕಿಂಗ್​ ಕೊಹ್ಲಿ

ಪಂದ್ಯದ ಮುಕ್ತಾಯದ ಬಳಿಕ ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್ ಅವರು ತಂಡದ ಫೀಲ್ಡಿಂಗ್​ ಪ್ರದರ್ಶನದ ಬಗ್ಗೆ ವಿವರಿಸಿ ಯಾವೆಲ್ಲ ಆಟಗಾರರು ಉತ್ತಮ ನಿರ್ವಹಣೆ ತೋರಿದ್ದಾರೋ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಬಳಿಕ ಉತ್ತಮ ಫೀಲ್ಡರ್​ ಪ್ರಶಸ್ತಿಗೆ ರೋಹಿತ್​ ಪಾತ್ರರಾಗಿದ್ದಾರೆ ಎಂದು ಘೋಷಣೆ ಮಾಡಿದರು. ಈ ವೇಳೆ ಇಶಾನ್​ ಕಿಶನ್​, ಶುಭಮನ್​ ಗಿಲ್​, ಶ್ರೇಯಸ್​ ಅಯ್ಯರ್​ ಅವರು ಜೋರಾಗಿ ಕೂಗಿ ರೋಹಿತ್​ ಅವರನ್ನು ಚಿಯರ್​ ಅಪ್​ ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ಉತ್ತಮ ಫೀಲ್ಡರ್​ ಪ್ರಶಸ್ತಿ ಪಡೆದ ಶ್ರೇಯಸ್​ ಅಯ್ಯರ್​ ಅವರು ರೋಹಿತ್​ ಕೊರಳಿಗೆ ಚಿನ್ನದ ಪದಕ ಹಾಕಿ ಅಭಿನಂದಿಸಿದರು.

ರೋಹಿತ್​ ಅವರು ಈ ಪಂದ್ಯದಲ್ಲಿ ಕ್ರೀಸ್​ಗಿಳಿದ ಆರಂಭದಲ್ಲೇ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಕೇವಲ 24 ಎಸೆತದಲ್ಲಿ 40 ರನ್​ ಚಚ್ಚಿದರು. ಅವರ ಈ ಬಿರುಸಿನ ಬ್ಯಾಟಿಂಗ್​ ವೇಳೆ 6 ಬೌಂಡರಿ ಮತ್ತು 2 ಸಿಕ್ಸರ್​ ಸಿಡಿಯಿತು. ಈ ಬಾರಿಯ ವಿಶ್ವಕಪ್​ನಲ್ಲಿ ರೋಹಿತ್​ ಒಂದು ಶಕತ ಬಾರಿಸಿದ್ದಾರೆ. 2019ರ ವಿಶ್ವಕಪ್​ನಲ್ಲಿ 5 ಶತಕ ಬಾರಿಸಿದ ಸಾಧನೆ ಮಾಡಿದ್ದರು.

ಭಾರತಕ್ಕೆ 243 ರನ್​ ಗೆಲುವು

ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ವಿರಾಟ್​ ಕೊಹ್ಲಿಯ ಶತಕ ಮತ್ತು ಶ್ರೇಯಸ್​ ಅಯ್ಯರ್​ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್​ ಜೋಶ್​ ಮರೆತು 27.1 ಓವರ್​ಗಳಲ್ಲಿ 83 ರನ್​ ಬಾರಿಸಿ ಸರ್ವಪತನ ಕಂಡಿತು. ಭಾರತ 243 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಪರ ಜಡೇಜಾ 5 ವಿಕೆಟ್​ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಮೊಹಮ್ಮದ್ ಸಿರಾಜ್​ ಮತ್ತು ಕುಲದೀಪ್​ ಯಾದವ್ ತಲಾ 2 ವಿಕೆಟ್​ ಕಿತ್ತರು. ಕಳೆದ ಪಂದ್ಯದಲ್ಲಿ 5 ವಿಕೆಟ್​ ಉರುಳಿಸಿದ್ದ ಶಮಿ ಈ ಪಂದ್ಯದಲ್ಲಿ 1 ವಿಕೆಟ್​ಗೆ ಸೀಮಿತರಾದರು.

Exit mobile version