Site icon Vistara News

Liquor Ban : ಕ್ರಿಕೆಟಿಗರ ಕಿಟ್​ ಬ್ಯಾಗ್​ ತುಂಬಾ ಎಣ್ಣೆ ಬಾಟಲ್​ಗಳು; ತನಿಖೆ ಆರಂಭ

liquor ban

ಬೆಂಗಳೂರು: ಅಂಡರ್ 23 ಕ್ರಿಕೆಟ್ ತಂಡ ಕಿಟ್ ಬ್ಯಾಗ್​ಗಳ ತುಂಬಾ ಎಣ್ಣೆ ಬಾಟಲ್​ಗಳು ಸಿಕ್ಕಿರುವ ವಿಚಾರದ ಬಗ್ಗೆ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ತನಿಖೆ ನಡೆಸಲು ಮುಂದಾಗಿದೆ. ಅಚ್ಚರಿ ಎಂದರೆ ಗುಜರಾತ್​ ಮದ್ಯ ನಿಷೇಧವಿರುವ (Liquor Ban) ರಾಜ್ಯ. ರಾಜ್ಯ ಸರ್ಕಾರವು ಪ್ರವಾಸಿಗರಿಗೆ ತಮ್ಮ ಆಯ್ದ ಕೆಲವು ಮಳಿಗೆಗಳಿಂದ ಮದ್ಯ ಖರೀದಿಸಲು ಅನುಮತಿ ನೀಡುತ್ತದೆ. ಆದರೆ ಅಂಡರ್- 23 ಕ್ರಿಕೆಟಿಗರ ಬ್ಯಾಗ್​​ನಿಂದ ಬಾಟಲಿಗಳನ್ನು ವಶಪಡಿಸಿಕೊಂಡ ನಂತರ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಐವರು ಅಂಡರ್ 23 ಸೌರಾಷ್ಟ್ರ ಕ್ರಿಕೆಟಿಗರಿಂದ ಒಟ್ಟು 27 ಬಾಟಲಿ ಮದ್ಯ ಮತ್ತು 2 ಕೇಸ್ ಬಿಯರ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದರೆ, ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿಲ್ಲ.

ಸೌರಾಷ್ಟ್ರ ಅಂಡರ್ 23 ಕ್ರಿಕೆಟಿಗರು ಪ್ರಯಾಣಿಸುತ್ತಿದ್ದ ವಿಮಾನದ ಕಾರ್ಗೊ ಪ್ರದೇಶದಲ್ಲಿ ಭಾರಿ ಪ್ರಮಾಣದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜನವರಿ 25ರಂದು ಸಿಕೆ ನಾಯ್ಡು ಟ್ರೋಫಿಯಲ್ಲಿ ಚಂಡೀಗಢ ವಿರುದ್ಧ ಗೆದ್ದ ನಂತರ ಕ್ರಿಕೆಟಿಗರು ಚಂಡೀಗಢದಿಂದ ರಾಜ್​ಕೋಟ್​ಗೆ ಹಿಂದಿರುಗುತ್ತಿದ್ದಾಗ ಬಾಟಲಿಗಲು ಸಿಕ್ಕಿವೆ. ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಅಂಡರ್-23 ಕ್ರಿಕೆಟಿಗರ ಬಗ್ಗೆ ತನಿಖೆ ನಡೆಸಲು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ನಿರ್ಧಾರ
ಈ ಬಗ್ಗೆ ಹೇಳಿಕೆ ನೀಡಿರುವ ಅಸೋಸಿಯೇಷನ್​ , “ಚಂಡೀಗಢದಲ್ಲಿ ನಡೆದಿದೆ ಎನ್ನಲಾದ ಘಟನೆಯನ್ನು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಗಮನಕ್ಕೆ ತರಲಾಗಿದೆ. ಇಲ್ಲಿ ತಪ್ಪು ನಡೆದಿದೆ. ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ನ ನೈತಿಕತೆ/ ಶಿಸ್ತು ಸಮಿತಿ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದೆ.

ಶ್ರೇಷ್ಠ ಕ್ರಿಕೆಟಿಗರನ್ನು ಕಂಡ ಸಮಿತಿ

ಸೌರಾಷ್ಟ್ರ ಕ್ರಿಕೆಟ್​ ಸಂಸ್ಥೆಯಿಂದ ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ ಮತ್ತು ಜಯದೇವ್ ಉನಾದ್ಕಟ್ ಅವರಂತಹ ಅನೇಕ ಶ್ರೇಷ್ಠ ಕ್ರಿಕೆಟಿಗರು ಬಂದಿದ್ದಾರೆ. ಸೌರಾಷ್ಟ್ರ ರಣಜಿ ಟ್ರೋಫಿಯ ಪ್ರಸ್ತುತ ಚಾಂಪಿಯನ್ ಆಗಿದ್ದು, ಹಿಂದಿನ ಆವೃತ್ತಿಯ ಫೈನಲ್​ನಲ್ಲಿ ಬಂಗಾಳ ತಂಡವನ್ನು ಸೋಲಿಸಿತ್ತು, ಸೌರಾಷ್ಟ್ರ ಹಾಲಿ ಋತುವಿನಲ್ಲಿ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಸೌರಾಷ್ಟ್ರ ಪ್ರಸ್ತುತ ಎಲೈಟ್ ಗ್ರೂಪ್ ಎ ನಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಇದನ್ನೂ ಓದಿ : Yashasvi Jaiswal : ವೈರಲ್ ಆದ ವಿದೇಶಿ ಹುಡುಗಿ ಯಶಸ್ವಿ ಜೈಸ್ವಾಲ್​ ಗೆಳತಿಯಾ? ಇಲ್ಲಿದೆ ವಿಡಿಯೊ ಸಾಕ್ಷಿ

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸರ್ವಿಸಸ್ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ಡ್ರಾ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಸರ್ವಿಸಸ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 536/7 ಕ್ಕೆ ಡಿಕ್ಲೇರ್ ಮಾಡಿಕೊಂಡಿತ್ತು. ಸರ್ವಿಸಸ್ ಪರ ಶುಭಂ ರೋಹಿಲ್ಲಾ 223 ರನ್ ಗಳಿಂದ 153 ರನ್ ಗಳಿಸಿದ್ದರು. ಲವ್ಕೇಶ್ ಬನ್ಸಾಲ್ ಮತ್ತು ಅರ್ಜುನ್ ಶರ್ಮಾ ಕೂಡ ಶತಕಗಳನ್ನು ಬಾರಿಸಿದರು ಮತ್ತು ಇನಿಂಗ್ಸ್​​ಗಲಲ್ಲಿ 161 ಮತ್ತು 101* ರನ್ ಗಳಿಸಿದ್ದರು. ಸೌರಾಷ್ಟ್ರ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಮೊದಲ ಇನ್ನಿಂಗ್ಸ್ ನಲ್ಲಿ ಒಟ್ಟು 462 ರನ್ ಗಳಿಸಿತು. ಚೇತೇಶ್ವರ ಪೂಜಾರ ಹಾಗೂ ವಿಶ್ವರಾಜ್ ಜಡೇಜಾ ಕ್ರಮವಾಗಿ 88 ಮತ್ತು 91 ರನ್ ಗಳಿಸಿದರೆ, ಅರ್ಪಿತ್ ವಸವಾಡ 186 ಎಸೆತಗಳಲ್ಲಿ 71 ರನ್ ಗಳಿಸಿದ್ದರು.

ಚೇತೇಶ್ವರ ಪೂಜಾರ ಪ್ರಸ್ತುತ ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. ಮೂರು ಇನ್ನಿಂಗ್ಸ್ ಗಳಿಂದ 535 ರನ್ ಗಳಿಸಿದ್ದಾರೆ. ಇದರಲ್ಲಿ ಜಾರ್ಖಂಡ್ ವಿರುದ್ಧದ ದ್ವಿಶತಕವೂ ಸೇರಿದೆ. ಇದು ಪೂಜಾರ ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಒಟ್ಟಾರೆ 17 ನೇ ಶತಕವಾಗಿದೆ. ತಮಿಳುನಾಡಿನ ನಾರಾಯಣ್ ಜಗದೀಶ್ ನಾಲ್ಕು ಪಂದ್ಯಗಳಲ್ಲಿ 600 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಗರಿಷ್ಠ ಸ್ಕೋರ್ 321 ಆಗಿದೆ.

ಪ್ರಸಕ್ತ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಅತಿ ಹೆಚ್ಚು ವಿಕೆಟ್ ಪಡೆದ ಚಿರಾಗ್ ಜಾನಿ 4 ಪಂದ್ಯಗಳಿಂದ 14 ವಿಕೆಟ್ ಪಡೆದಿದ್ದಾರೆ. ಪಾಂಡಿಚೆರಿಯ ಗೌರವ್ ಯಾದವ್ ರಣಜಿ ಟ್ರೋಫಿ 2024 ರಲ್ಲಿ ಇಲ್ಲಿಯವರೆಗೆ ಪ್ರಮುಖ ವಿಕೆಟ್ ಪಡೆದವರಾಗಿದ್ದಾರೆ ಮತ್ತು ನಾಲ್ಕು ಪಂದ್ಯಗಳಿಂದ 31 ವಿಕೆಟ್​ಗಳನ್ನು ಪಡೆದಿದ್ದಾರೆ.

Exit mobile version