Site icon Vistara News

Team India : ಶ್ರೇಯಸ್​ ಅಯ್ಯರ್​ಗೆ ಸದ್ಯಕ್ಕಿಲ್ಲ ಸರ್ಜರಿ

Shreyas Iyer does not have surgery for now

#image_title

ಬೆಂಗಳೂರು: ಟೀಮ್ ಇಂಡಿಯಾದ (Team India) ಮಧ್ಯಮ ಕ್ರಮಾಂಕದ ಬ್ಯಾಟರ್​​ ಶ್ರೇಯಸ್​ ಅಯ್ಯರ್​ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಗೆ ಅವರು ಅಲಭ್ಯರಾಗಿದ್ದರು. ಹೀಗಾಗಿ ಅವರು ಮುಂದಿನ ಐಪಿಎಲ್ ಆಡುವರೇ ಎಂಬ ಚರ್ಚೆ ಆರಂಭಗೊಂಡಿದೆ. ಅದೇ ರೀತಿ ಮುಂದಿನ ಏಕ ದಿನ ವಿಶ್ವ ಕಪ್​ ವೇಳೆಗೆ ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣ ಸುಧಾರಿಸುವರೇ ಎಂಬ ಕಡೆಗೂ ಚರ್ಚೆ ಸಾಗಿದೆ. ಏತನ್ಮಧ್ಯೆ, ವೈದ್ಯರು ಶ್ರೇಯಸ್​ ಅಯ್ಯರ್​ಗೆ ಸರ್ಜರಿಯ ಅಗತ್ಯವಿದೆ ಎಂದ ಸಲಹೆ ಕೊಟ್ಟಿದ್ದಾರೆ. ಇದೀಗ ಹೊಸ ವರ್ತಮಾನದ ಪ್ರಕಾರ ಶ್ರೇಯಸ್​ ಸದ್ಯಕ್ಕೆ ಸರ್ಜರಿಗೆ ಒಳಗಾಗುತ್ತಿಲ್ಲ. ಬದಲಾಗಿ ಏಕ ದಿನ ವಿಶ್ವ ಕಪ್​ ಮುಕ್ತಾಯಗೊಂಡ ಬಳಿಕ ಅಪರೇಷನ್​ ಮಾಡಿಸಿಕೊಳ್ಳಲಿದ್ದಾರೆ. ಅಲ್ಲಿ ತನಕ ರೆಸ್ಟ್ ಹಾಗೂ ರಿಹ್ಯಾಬಿಲಿಟೇಷನ್​ ಮೂಲಕ ಸುಧಾರಣೆ ಕಂಡುಕೊಳ್ಳಲಿದ್ದಾರೆ.

ಶ್ರೇಯಸ್​ ಅಯ್ಯರ್​ ಐಪಿಎಲ್​ನಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೇ ಪಂದ್ಯದಲ್ಲಿ ಗಾಯಗೊಂಡಿದ್ದ ಅವರು ಬ್ಯಾಟ್​ ಮಾಡಲೂ ಇಳಿದಿರಲಿಲ್ಲ. ನೇರವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡು ಪುನಶ್ಚೇತನಕ್ಕೆ ಒಳಗಾಗಿದ್ದಾರೆ. ಏತನ್ಮಧ್ಯೆ ನುರಿತ ವೈದ್ಯರು ಶ್ರೇಯಸ್​ ಅಯ್ಯರ್​ ಸಂಪೂರ್ಣವಾಗಿ ನೋವಿನಿಂದ ಮುಕ್ತಿ ಪಡೆಯಲು ಸರ್ಜರಿಗೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಸದ್ಯದಲ್ಲೇ ಅವರು ಸರ್ಜರಿಗೆ ಒಳಗಾಗದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಶ್ರೇಯಸ್​ ಅಯ್ಯರ್​ ಬೆನ್ನು ನೋವಿನ ಸಮಸ್ಯೆಗೆ ಆಪರೇಷನ್ ಮಾಡಿಕೊಂಡರೆ ಗುಣಮುಖರಾಗಿ ಸಂಪೂರ್ಣವಾಗಿ ಫಿಚ್ ಎನಿಸಲು ಏಳು ತಿಂಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಅದಕ್ಕಿಂತ ಮೊದಲು ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್​ ನಡೆಯಲಿದೆ. ಸರ್ಜರಿಗೆ ಒಳಗಾದರೆ ಅವರಿಗೆ ಏಕ ದಿನ ವಿಶ್ವ ಕಪ್​ನಲ್ಲಿ ಆಡುವುದು ಕಷ್ಟ. ಹೀಗಾಗಿ ಪುನಶ್ಚೇತನ ಹಾಗೂ ವಿಶ್ರಾಂತಿ ಮೂಲಕ ವಿಶ್ವ ಕಪ್​ಗೆ ಸಿದ್ಧಗೊಳಿಸುವುದು ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​ ಸಲಹೆಯಾಗಿದೆ.

ಶ್ರೇಯಸ್​ ಅನಿವಾರ್ಯ

ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಫಲಿತಾಂಶ ಗಮನಿಸಿದಾಗ ವಿಶ್ವ ಕಪ್​ ತಂಡಕ್ಕೆ ಶ್ರೇಯಸ್​ ಅಯ್ಯರ್​ ಅನಿವಾರ್ಯ ಎನಿಸಿಕೊಂಡಿದ್ದಾರೆ. ಸರಣಿಯ ಮೂರು ಪಂದ್ಯದಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕ ಸಂಪೂರ್ಣ ವೈಫಲ್ಯ ಕಂಡಿತ್ತು. ಅವರ ಬದಲಿಗೆ ಅವಕಾಶ ಪಡೆದುಕೊಂಡಿದ್ದ ಸೂರ್ಯಕುಮಾರ್​ ಯಾದವ್ ಮೂರು ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿದ್ದರು. ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಟೀಮ್ ಇಂಡಿಯಾದ 1-2 ಅಂತರದಿಂದ ಸರಣಿ ಕಳೆದುಕೊಂಡಿತ್ತು. ಹೀಗಾಗಿ ವಿಶ್ವ ಕಪ್​ ತಂಡಕ್ಕೆ ಶ್ರೇಯಸ್ ಅಯ್ಯರ್​ ಅತ್ಯಗತ್ಯ ಎನಿಸಿಕೊಂಡಿದ್ದಾರೆ.

ಕೋಲ್ಕೊತಾ ತಂಡಕ್ಕೆ ಸಮಸ್ಯೆ

ಐಪಿಎಲ್​ನಲ್ಲಿ ಶ್ರೇಯಸ್​ ಅಯ್ಯರ್​ ಕೋಲ್ಕೊತಾ ನೈಟ್ ರೈಡರ್ಸ್​ ತಂಡದ ಪರವಾಗಿ ಆಡಲಿದ್ದಾರೆ. ಅವರನ್ನು ತಂಡದ ನಾಯಕರನ್ನಾಗಿ ಮಾಡುವ ಉದ್ದೇಶವೂ ಫ್ರಾಂಚೈಸಿಗಿದೆ. ಆದರೆ, ಗಾಯದ ಸಮಸ್ಯೆಯಿಂದ ಶ್ರೇಯಸ್​ ಆಡದೇ ಹೋದರೆ ಬೇರೆ ನಾಯಕರನ್ನು ಆಯ್ಕೆ ಮಾಡಬೇಕಾಗುತ್ತದೆ. ಒಂದು ವೇಳೆ ಅವರು ಲಭ್ಯರಾದರೂ ಟೂರ್ನಿಯ ಆರಂಭಿಕ ಹಂತದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ.

Exit mobile version