Site icon Vistara News

ಬೆಂಗಳೂರು ತಲುಪಿದ ಟೀಮ್​ ಇಂಡಿಯಾ ಆಟಗಾರರು; ಮಲ್ಲಿಗೆ ಹಾರ ಹಾಕಿ ಸ್ವಾಗತ

Team India in Bengaluru

ಬೆಂಗಳೂರು: ಹಾಲಿ ವಿಶ್ವಕಪ್​ ಟೂರ್ನಿಯಲ್ಲಿ  ಜೈತ್ರಯಾತ್ರೆ ಮುಂದುವರಿಸಿರುವ ಭಾರತ ತನ್ನ ಅಂತಿಮ ಲೀಗ್​ ಪಂದ್ಯವನ್ನು ನೆದರ್ಲೆಂಡ್ಸ್(IND vs NED)​ ವಿರುದ್ಧ ಆಡಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಮ್​ ಇಂಡಿಯಾದ(Team India) ಆಟಗಾರರು ಬೆಂಗಳೂರಿಗೆ ಬಂದು ತಲುಪಿದ್ದಾರೆ.

ಬೆಂಗಳೂರು ತಲುಪಿದ ಟೀಮ್​ ಇಂಡಿಯಾ ಆಟಗಾರರಿಗೆ ಮಲ್ಲಿಗೆ ಹೂವಿನ ಹಾರ ಹಾಕಿ ಭವ್ಯ ಸಾಗತ ಕೋರಲಾಯಿತು. ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡುವ ವಿರಾಟ್ ಕೊಹ್ಲಿಯನ್ನು ನೋಡಲು ಅವರ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಭಾರತೀಯ ಆಟಗಾರರು ಬೆಂಗಳೂರು ತಲುಪಿದ ವಿಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ. ವಿರಾಟ್​ ಮಾತ್ರ ತಂಡದೊಂದಿಗೆ ಪ್ರಯಾಣಿಸದೆ ಏಕಾಂಗಿಯಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಪಂದ್ಯಕ್ಕೆ ಅನುಷ್ಕಾ ಶರ್ಮ ಹಾಜರ್​!

ದ್ವಿತೀಯ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್​ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮ ಅವರು ಈ ಬಾರಿ ವಿಶ್ವಕಪ್​ನ ಹೆಚ್ಚಿನ ಪಂದ್ಯಗಳಿಗೆ ಹಾಜರ್​ ಆಗಿರಲಿಲ್ಲ. ಆದರೆ ನೆದರ್ಲೆಂಡ್ಸ್​ ವಿರುದ್ಧದ ಪಂದ್ಯಕ್ಕೆ ಅವರು ಬರಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಅವರು ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿರುವ ವಿಡಿಯೊವೊಂದನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ದೀಪಾವಳಿ ಹಬ್ಬವನ್ನು ಜತೆಯಾಗಿ ಆಚರಿಸುವ ಸಲುವಾಗಿ ಅನುಷ್ಕಾ ಅವರು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ 6 ನಿಮಿಷ ತಡವಾಗಿ ಬಂದರೂ ಸೌರವ್​ ಗಂಗೂಲಿ ಏಕೆ ‘ಟೈಮ್ಡ್‌ ಔಟ್’ ಆಗಿಲ್ಲ?

ಟಿಕೆಟ್​ ಸೋಲ್ಡ್​ ಔಟ್​

ಬೆಂಗಳೂರಿನಲ್ಲಿ ವಿರಾಟ್​ ಕೊಹ್ಲಿ ಅವರ ಅಪಾರ ಅಭಿಮಾನಿಗಳಿರುವ ಕಾರಣ ಈ ಪಂದ್ಯದ ಟಿಕೆಟ್​ಗಳಯ ಸೋಲ್ಡ್​ ಔಟ್​ ಆಗಿದೆ ಎಂದು ತಿಳಿದುಬಂದಿದೆ. ಆದರೆ ಪಂದ್ಯಕ್ಕೆ ಮಳೆಯ ಭೀತಿಯೂ ಇದೆ. ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಅಲ್ಲದೆ ನ್ಯೂಜಿಲ್ಯಾಂಡ್​ ಮತ್ತು ಪಾಕಿಸ್ತಾನ ನಡುವಣ ಶನಿವಾರದ ಪಂದ್ಯ ಮಳೆಯಿಂದ ಅರ್ಧಕ್ಕೆ ರದ್ದುಗೊಂಡಿತ್ತು. ಹೀಗಾಗಿ ಈ ಪಂದ್ಯಕ್ಕೂ ಮಳೆಯ ಭೀತಿ ಇದೇ ಇದೆ. ಪಂದ್ಯ ರದ್ದಾದರೂ ಭಾರತಕ್ಕೆ ಯಾವುದೇ ಚಿಂತೆಯಿಲ್ಲ. ಭಾರತ ಸೆಮಿಫೈನಲ್ ಪ್ರವೇಶ ಪಡೆದಾಗಿದೆ.

ಪ್ರಸಿದ್ಧ್​ ಕೃಷ್ಣಗೆ ಅವಕಾಶ ಸಾಧ್ಯತೆ

ಭಾರತ ತಂಡ ಸೆಮಿ ಫೈನಲ್​ ಪ್ರವೇಶಿಸಿದ ಕಾರಣ ತಂಡದಲ್ಲಿ ಕೆಲ ಬದಲಾವಣೆಯನ್ನು ಮಾಡುವ ಸಾಧ್ಯತೆ ಇದೆ. ಜಸ್​ಪ್ರೀತ್​ ಬುಮ್ರಾ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಕಂಡುಬಂದಿದೆ. ಹೀಗಾದರೆ ಹಾರ್ದಿಕ್​ ಪಾಂಡ್ಯ ಅವರ ಸ್ಥಾನಕ್ಕೆ ಆಯ್ಕೆಯಾದ ಕನ್ನಡಿಗ ಪ್ರಸಿದ್ಧ್​ ಕೃಷ್ಣ ಅವರು ಅವಕಾಶ ಪಡೆಯಬಹುದು. ಇಶಾನ್​ ಕಿಶನ್​, ಆರ್​ ಅಶ್ವಿನ್​ಗೂ ಅವಕಾಶ ನೀಡುವ ಸಾಧ್ಯತೆ ಇದೆ.

Exit mobile version