Site icon Vistara News

Mohammed Siraj | ಮೊಹಮ್ಮದ್ ಸಿರಾಜ್​ ಅಪರೂಪದ ಪ್ರತಿಭೆ ಎಂದು ರೋಹಿತ್ ಶರ್ಮ ಹೊಗಳಿದ್ದು ಯಾಕೆ?

Mohammed Siraj

ತಿರುವನಂತಪುರ: ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 317 ರನ್​ಗಳ ವಿಶ್ವ ದಾಖಲೆಯ ಅಂತರದ ವಿಜಯ ಸಾಧಿಸಿದೆ. ಈ ಗೆಲುವಿಗೆ ಭಾರತ ತಂಡದ ಬ್ಯಾಟರ್​ಗಳಾದ ವಿರಾಟ್​ ಕೊಹ್ಲಿ (ಅಜೇಯ 166 ರನ್)​ ಹಾಗೂ ಶುಬ್ಮನ್​ ಗಿಲ್ (116 ರನ್​) ಕಾರಣ. ಇವರಿಬ್ಬರ ಜತೆಗೆ ಬೌಲಿಂಗ್​ನಲ್ಲಿ ಮೊಹಮ್ಮದ್​ ಸಿರಾಜ್​ ಕೂಡ ಮಿಂಚಿದ್ದಾರೆ. 10 ಓವರ್​ಗಳ ಸ್ಪೆಲ್​ನಲ್ಲಿ 32 ರನ್​ ನೀಡಿ ನಾಲ್ಕು ವಿಕೆಟ್​ ಕಬಳಿಸಿದ್ದಾರೆ. ಅವರ ಮಾರಕ ಬೌಲಿಂಗ್​ಗೆ ಪ್ರವಾಸಿ ಬಳಗದ ಬ್ಯಾಟರ್​ಗಳು ತಲ್ಲಣಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ, ಮೊಹಮ್ಮದ್​ ಸಿರಾಜ್ (Mohammed Siraj)​​ ಟೀಮ್​ ಇಂಡಿಯಾದ ಅಪರೂಪದ ಪ್ರತಿಭೆ ಎಂಬುದಾಗಿ ಕೊಂಡಾಡಿದ್ದಾರೆ.

ಲಂಕಾ ವಿರುದ್ಧದ ಸರಣಿಯಲ್ಲಿ ನಾವು ಹಲವಾರು ಋಣಾತ್ಮಕ ಅಂಶಗಳನ್ನು ಕಂಡುಕೊಂಡಿದ್ದೇವೆ. ನಾವು ಈ ಸರಣಿಯಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದೇವೆ. ಅದೇ ರೀತಿ ಬ್ಯಾಟರ್​ಗಳು ಕೂಡ ಅಗತ್ಯ ಸಂದರ್ಭದಲ್ಲಿ ಬ್ಯಾಟ್​ ಬೀಸಿದ್ದಾರೆ, ಎಂದು ತಂಡದ ಸದಸ್ಯರ ಸಾಹಸಕ್ಕೆ ಮೆಚ್ಚಿದ್ದಾರೆ.

ಪ್ರಮುಖವಾಗಿ ಸಿರಾಜ್​ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಅವರು ಸ್ಲಿಪ್​ನಲ್ಲಿ ಪಡೆದ ವಿಕೆಟ್​ಗಳೆಲ್ಲವೂ ಅರ್ಹವಾಗಿವೆ. ಅವರೊಬ್ಬ ಅಪರೂಪದ ಪ್ರತಿಭೆ. ಕಳೆದ ಕೆಲವು ವರ್ಷಗಳಿಂದ ಅವರು ಕಂಡುಕೊಂಡ ಸುಧಾರಣೆಯೇ ಅದಕ್ಕೆ ಸೂಕ್ತ ಉದಾಹರಣೆ. ಅವರು ದಿನದಿಂದ ದಿನಕ್ಕೆ ಉತ್ತಮ ಬೌಲರ್​ ಆಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಟೀಮ್​ ಇಂಡಿಯಾದ ಪಾಲಿಗೆ ಇದು ಸಕಾರಾತ್ಮಕ ಬೆಳವಣಿಗೆ. ಮೊಹಮ್ಮದ್​ ಸಿರಾಜ್​ ಬಳಿ ಸಾಕಷ್ಟು ತಂತ್ರಗಳಿದ್ದು ಅದನ್ನು ಅವರು ಪ್ರಯೋಗಿಸುತ್ತಿದ್ದಾರೆ, ಎಂದು ರೋಹಿತ್ ನುಡಿದಿದ್ದಾರೆ.

ಭಾರತ ತಂಡದ ಮುಂದಿನ ಸರಣಿಯಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧ ಆಡಲಿದೆ. ಜನವರಿ 18ರಂದು ಹೈದರಾಬಾದ್​ನಲ್ಲಿ ಮೊದಲ ಪಂದ್ಯ ನಡೆಯಲಿದೆ.

ನ್ಯೂಜಿಲ್ಯಾಂಡ್​ ತಂಡ ಪಾಕಿಸ್ತಾನದ ಸರಣಿಯ ಗೆಲುವಿನೊಂದಿಗೆ ಬರುತ್ತಿದೆ. ಹೀಗಾಗಿ ಅ ಸರಣಿಯ ಭಾರತಕ್ಕೆ ಸವಾಲಾಗಿದೆ ಎಂಬುದಾಗಿ ರೋಹಿತ್ ಹೇಳಿದ್ದಾರೆ.

ಇದನ್ನೂ ಓದಿ | Mohammed Siraj | ವಿಮಾನ ಪ್ರಯಾಣದ ವೇಳೆ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಸಿರಾಜ್​ ಬ್ಯಾಗ್​ ನಾಪತ್ತೆ!

Exit mobile version