Site icon Vistara News

VVS Laxman: ಲಕ್ನೋ ತಂಡದ ಕೋಚ್​ ಆಗಲಿದ್ದಾರೆ ವಿವಿಎಸ್​ ಲಕ್ಷ್ಮಣ್!

VVS Laxman

VVS Laxman: Lucknow Super Giants interested in getting VVS Laxman onboard?

ಬೆಂಗಳೂರು: ಪ್ರಸ್ತುತ ಎನ್​ಸಿಎ(NCA) ಅಧ್ಯಕ್ಷರಾಗಿರುವ ವಿವಿಎಸ್​ ಲಕ್ಷ್ಮಣ್​(VVS Laxman) ಅವರ ಅಧಿಕಾರಾವಧಿಯು ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಐಪಿಎಲ್​ನಲ್ಲಿ ಕೋಚಿಂಗ್​ ನಡೆಸುವ ಸಲುವಾಗಿ ಲಕ್ಷ್ಮಣ್​ ಮತ್ತೊಂದು ಅವಧಿಗೆ ಈ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ(VVS Laxman To Quit NCA) ಹೊಂದಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ ಲಕ್ಷ್ಮಣ್ ಮುಂದಿನ ಆವೃತ್ತಿಯಲ್ಲಿ ಲಕ್ನೋ ಸೂಪರ್​ ಜೈಂಟ್ಸ್​(Lucknow Super Giants) ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಲಕ್ಷ್ಮಣ್ ಅವರನ್ನು ಲಕ್ನೋ ಫ್ರಾಂಚೈಸಿ ಈಗಾಗಲೇ ಸಂಪರ್ಕಿಸಿದ್ದು, ಕೋಚ್​ ಆಗುವಂತೆ ಕೇಳಿಕೊಂಡಿದೆ ಎನ್ನಲಾಗಿದೆ. ಕೋಚ್​ ಆಗಲು ಲಕ್ಷ್ಮಣ್ ಕೂಡ ಒಪ್ಪಿಕೊಂಡಿದ್ದಾರೆ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ಎನ್​ಸಿಎ ಅಧ್ಯಕ್ಷರಾಗುವ ಮುನ್ನ ಲಕ್ಷ್ಮಣ್ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಪರ ಕೆಲವು ವರ್ಷ ಮೆಂಟರ್​ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಕೋಚಿಂಗ್​ ಕಡೆ ಗಮನಹರಿಸಿದ್ದಾರೆ ಎನ್ನಲಾಗಿದೆ.

ಲಕ್ನೋ ಸೂಪರ್​ ಜೈಂಟ್ಸ್​ ತಂಡಕ್ಕೆ ಪ್ರಸ್ತುತ ಆಸ್ಟ್ರೇಲಿಯಾದ ಜಸ್ಟೀನ್​ ಲ್ಯಾಂಗ್​ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಅವರನ್ನು ತಂಡಕ್ಕೆ ಕೋಚ್​ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಇವರ ಮಾರ್ಗದರ್ಶನದಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಲೀಗ್​ ಹಂತದಲ್ಲೇ ಮುಗ್ಗರಿಸಿ ಹೊರಬಿದ್ದಿತ್ತು. ಹೀಗಾಗಿ ಫ್ರಾಂಚೈಸಿ ಹೊಸ ಕೋಚ್​ ಹುಡುಕಾಟ ಆರಂಭಿಸಿದೆ ಎಂದು ತಿಳಿದುಬಂದಿದೆ.

ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್​ ಬಳಿಕ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು. ದ್ರಾವಿಡ್​ ಬಳಿಕ ಲಕ್ಷ್ಮಣ್ ಅವರೇ ಭಾರತ ತಂಡದ ಮುಂದಿನ ಕೋಚ್​ ಎಂದು ಹೇಳಲಾಗಿತ್ತು. ಆದರೆ, ಅವರು ಈ ಆಫರ್​ ತಿರಸ್ಕರಿಸಿದ್ದರು. ಹೀಗಾಗಿ ಗಂಭೀರ್​ಗೆ ಈ ಅವಕಾಶ ಲಭಿಸಿತು.

ಮತ್ತೆ ಐಪಿಎಲ್​ನತ್ತ ದ್ರಾವಿಡ್​?​

ರಾಹುಲ್ ದ್ರಾವಿಡ್ ಕೂಡ ಐಪಿಎಲ್​ನಲ್ಲಿ ಕೋಚ್ ಆಗಲು ಉತ್ಸುಕರಾಗಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ ದ್ರಾವಿಡ್​ ಅವರು ಈಗಾಗಲೇ ಎರಡು ವರ್ಷಗಳ ಒಪ್ಪಂದಕ್ಕಾಗಿ ಐಪಿಎಲ್ ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ Rahul Dravid: ಮತ್ತೆ ಐಪಿಎಲ್​ ಕೋಚಿಂಗ್​ನತ್ತ ಮುಖ ಮಾಡಿದ ರಾಹುಲ್‌ ದ್ರಾವಿಡ್‌!

“ರಾಹುಲ್​ ದ್ರಾವಿಡ್​ ಅವರು ಎರಡು ವರ್ಷಗಳ ಒಪ್ಪಂದಕ್ಕಾಗಿ ಐಪಿಎಲ್ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ” ಎಂದು ಕ್ರಿಕ್​ಬಜ್​ ವರದಿ ಮಾಡಿದೆ. ರಾಹುಲ್ ದ್ರಾವಿಡ್ ಅವರು ಈ ಹಿಂದೆ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಕೋಚ್​ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅವರು ಅಂಡರ್​-19 ಮತ್ತು ಎನ್​ಸಿಎಯಲ್ಲಿ ಕಾರ್ಯನಿರ್ವಹಿಸಿದ್ದರು.

ಭಾರತಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆಲ್ಲಿಸಿದ ಕೋಚ್​ ದ್ರಾವಿಡ್​ ಅವರನ್ನು ಕೆಕೆಆರ್​ ಮಾತ್ರವಲ್ಲದೆ ಇದುವರೆಗೂ ಕಪ್​ ಗೆಲ್ಲದ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಕೋಚ್​ ಮಾಡಲು ರೇಸ್​ನಲ್ಲಿವೆ ಎಂದು ಹೇಳಲಾಗಿದೆ. ಡೆಲ್ಲಿ ತಂಡದ ಮೆಂಟರ್​ ಆಗಿರುವ ಸೌರವ್​ ಗಂಗೂಲಿ ಅವರು ದ್ರಾವಿಡ್​ ಮನವೊಲಿಸಿ ಕೋಚ್​ ಆಗುವಂತೆ ಒಪ್ಪಿಸುವ ಸಾಧ್ಯತೆಯೂ ಇದೆ. ಏಕೆಂದರೆ ದ್ರಾವಿಡ್​ ಅವರನ್ನು ಟೀಮ್​ ಇಂಡಿಯಾದ ಕೋಚ್​ ಆಗಿ ಮಾಡಿದ್ದು ಕೂಡ ಗಂಗೂಲಿ. ಬಿಸಿಸಿಐ ಅಧ್ಯಕ್ಷರಾಗಿದ್ದ ವೇಳೆ ಗಂಗೂಲಿ ಒತ್ತಾಯ ಪೂರ್ವಕವಾಗಿ ದ್ರಾವಿಡ್​ ಅವರನ್ನು ಕೋಚ್​ ಆಗುವಂತೆ ಒಪ್ಪಿಸಿದ್ದರು. ಕುಟುಂಬಕ್ಕೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಕೋಚಿಂಗ್​ ಹುದ್ದೆಯಲ್ಲಿ ಮುಂದುವರಿಯಲು ಹಿಂದೇಟು ಹಾಕಿರುವ ದ್ರಾವಿಡ್​ ಐಪಿಎಲ್​ ಕೋಚಿಂಗ್​ ನಡೆಸಲಿದ್ದಾರಾ ಎಂದು ಕಾದು ನೋಡಬೇಕಿದೆ.

Exit mobile version