Site icon Vistara News

Asia Cup final: ಅಯ್ಯರ್​ ಬೆನ್ನಲ್ಲೇ ಮತ್ತೊಬ್ಬ ಆಟಗಾರನಿಗೆ ಗಾಯ; ಏಷ್ಯಾಕಪ್​ನಿಂದ ಔಟ್​

axar patel injury

ಕೊಲಂಬೊ: ಭಾರತ ತಂಡಕ್ಕೆ ಗಾಯದ ಸಮಸ್ಯೆ ಬೆನ್ನು ಬಿಡುವಂತೆ ತೋರುತ್ತಿಲ್ಲ. ಒಬ್ಬ ಆಟಗಾರ ಗುಣಮುಖವಾದ ತಕ್ಷಣ ಮತ್ತೊಬ್ಬ ಆಟಗಾರ ಗಾಯಕ್ಕೀಡಾಗುತ್ತಿದ್ದಾನೆ. ವಿಶ್ವಕಪ್​ ತಂಡದ ಸದಸ್ಯರಾಗಿರುವ ಶ್ರೇಯಸ್​ ಅಯ್ಯುರ್(Shreyas Iyer)​ ಗಾಯಗೊಂಡ ಬೆನ್ನಲ್ಲೇ ಇದೀಗ ಅಕ್ಷರ್​ ಪಟೇಲ್(Axar Patel)​ ಕೂಡ ಗಾಯಗೊಂಡು ಏಷ್ಯಾಕಪ್​ನಿಂದ(Asia Cup final) ಹೊರಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಅಕ್ಷರ್​ ಕೂಡ ವಿಶ್ವಕಪ್​ ತಂಡದ ಸದಸ್ಯರಾಗಿದ್ದಾರೆ.

ಶುಕ್ರವಾರ ನಡೆದ ಬಾಂಗ್ಲಾದೇಶ ವಿರುದ್ಧದ ಅಂತಿಮ ಸೂಪರ್ 4 ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ಗಾಯದ ಮಧ್ಯೆಯೂ ಅವರು ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಮೊಣಕೈ ಮತ್ತು ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿರುವ ಅವರು ಭಾನುವಾರ ನಡೆಯುವ ಫೈನಲ್​ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ವರದಿಗಳ ಪ್ರಕಾರ ಅವರು ಟೂರ್ನಿಯಿಂದ ಹೊರಬಿದ್ದಿದ್ದು ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗಿದೆ. ಅವರ ಬದಲು ಸ್ಪಿನ್​ ಆಲ್​ರೌಂಡರ್​ ಆಗಿರುವ ವಾಷಿಂಗ್ಟನ್​ ಸುಂದರ್(Washington Sundar)​ ಭಾರತ ತಂಡ ಸೇರಿಕೊಂಡಿದ್ದಾರೆ ಎಂದು ಕ್ರಿಕ್​ಇನ್ಫೋ ವರದಿ ಮಾಡಿದೆ.

7 ತಿಂಗಳ ಬಳಿಕ ಕಮ್​ಬ್ಯಾಕ್​

ಗಾಯದಿಂದಾಗಿ ವಾಷಿಂಗ್ಟನ್​ ಸುಂದರ್​ ಅವರು ಈ ಬಾರಿಯ ಐಪಿಎಲ್​ ಟೂರ್ನಿಯಿಂದ ಹೊರಗುಳಿದಿದ್ದರು. ಅವರು ಸನ್​ರೈಸರ್ಸ್​ ಹೈದಾರಾಬಾದ್​ ತಂಡದ ಸದಸ್ಯರಾಗಿದ್ದರು. ಇದಕ್ಕೂ ಮುನ್ನ ಆರ್​ಸಿಬಿ ಪರ ಅವರು ಆಡಿದ್ದರು. ಭಾರತ ತಂಡದ ಪರ 16 ಏಕದಿನ, 4 ಟೆಸ್ಟ್​, 37 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 29.12 ಸರಾಸರಿಯಲ್ಲಿ 233 ರನ್ ಮತ್ತು 16 ವಿಕೆಟ್ ಉರುಳಿಸಿದ್ದಾರೆ. ಟಿ20ಯಲ್ಲಿ 29 ವಿಕೆಟ್​ ಪಡೆದಿದ್ದಾರೆ. ಇದೇ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್​ ಏಕದಿನ ಸರಣಿಯಲ್ಲಿ ಭಾರತ ಪರ ಕೊನೆಯ ಏಕದಿನ ಪಂದ್ಯ ಆಡಿದ್ದರು. ಬಳಿಕ ಗಾಯಗೊಂಡು ತಂಡದಿಂದ ಹೊರಗುಳಿದ್ದರು.

ಇದನ್ನೂ ಓದಿ Rashid Khan: ರಶೀದ್ ಖಾನ್ ಜತೆ ಪೋಸ್ ಕೊಟ್ಟ ರಣ್​ಬೀರ್​-ಆಲಿಯಾ ದಂಪತಿ

ಗಾಯದ ಮಧ್ಯೆಯೂ ಬ್ಯಾಟಿಂಗ್​ ನಡೆಸಿದ್ದ ಅಕ್ಷರ್

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಕ್ಷರ್​ ಪಟೇಲ್​ ಕೊನೆಯ ತನಕ ಹೋರಾಡಿ ತಂಡಕ್ಕೆ ಗೆಲುವು ತಂದು ಕೊಡುವ ಪ್ರಯತ್ನ ಮಾಡಿದರು. ಈ ವೆಳೆ ಅವರಿಗೆ ಹಲವು ಬಾರಿ ಗಾಯದ ಸಮಸ್ಯೆ ಕಾಡಿತು. ಆದರೂ ಪದೇಪದೆ ನೋವು ನಿವಾರಕ ಸ್ಪ್ರೇ ಬಳಸಿ ಆಟವಾಡಿದ್ದರು. ಆದರೆ ಅವರಿಗೆ ಮತ್ತೊಂದು ತುದಿಯಲ್ಲಿ ಸರಿಯಾದ ಬೆಂಬಲ ಸಿಗದೆ ಪಂದ್ಯ ಸೋಲು ಕಂಡಿತು. 2 ಸಿಕ್ಸರ್​ ಮತ್ತು 3 ಬೌಂಡರಿ ನೆರವಿನಿಂದ 42 ರನ್​ ಬಾರಿಸಿ ಮುಸ್ತಫಿಜುರ್‌ ರೆಹಮಾನ್​ಗೆ ವಿಕೆಟ್​ ಒಪ್ಪಿಸಿದರು. ಅವರ ವಿಕೆಟ್​ ಪತನಗೊಳ್ಳುತ್ತಲೇ ಭಾರತ ತಂಡದ ಸೋಲು ಕೂಡ ಖಚಿತಗೊಂಡಿತು.

ಸೋಲು ಕಂಡ ಭಾರತ

ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಬಾಂಗ್ಲಾದೇಶ ಆರಂಭಿಕ ಕುಸಿತದ ಮಧ್ಯೆಯೂ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 265 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ 49.5 ಓವರ್​ಗಳಲ್ಲಿ 259 ರನ್​ಗಳಿಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು. ಇದು ಭಾರತಕ್ಕೆ ಬಾಂಗ್ಲಾ ವಿರುದ್ಧ ಏಷ್ಯಾಕಪ್​ನಲ್ಲಿ ಎದುರಾದ ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ 2012ರಲ್ಲಿ ಭಾರತ ತಂಡ 5 ವಿಕೆಟ್​ಗಳ ಸೋಲು ಕಂಡಿತ್ತು.

Exit mobile version