Site icon Vistara News

IPL 2023 : ಉತ್ತಮ ಪಿಚ್​ನಲ್ಲಿ ಕೆಟ್ಟದಾಗಿ ಬ್ಯಾಟ್​ ಮಾಡಿದೆವು, ತಪ್ಪೊಪ್ಪಿಕೊಂಡ ರೋಹಿತ್​ ಶರ್ಮಾ

We batted badly on a good pitch, admitted Rohit Sharma

#image_title

ಬೆಂಗಳೂರು: ಮುಂಬೈ ಇಂಡಿಯನ್ಸ್​ ವಿರುದ್ಧದ ಐಪಿಎಲ್​ ಹಾಲಿ ಆವೃತ್ತಿಯ ಐಪಿಎಲ್​ನ (IPL 2023) ತನ್ನ ಮೊದಲ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 8 ವಿಕೆಟ್​ ಸುಲಭ ಜಯ ದಾಖಲಿಸಿದೆ. ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಹಾಗೂ ವಿರಾಟ್​ ಕೊಹ್ಲಿ ಅನುಕ್ರಮವಾಗಿ 73 ಹಾಗೂ 82 ರನ್​ ಬಾರಿಸಿ ಗೆಲುವಿನ ರೂವಾರಿಗಳೆನಿಸಿಕೊಂಡಿದ್ದಾರೆ. ಇವರಿಬ್ಬರೂ ಬೆಂಗಳೂರು ಪಿಚ್​ನಲ್ಲಿ ಅಬ್ಬರಿಸುವ ಜತೆಗೆ ಅಭಿಮಾನಿಗಳಿಗೆ ಬೌಂಡರಿ, ಸಿಕ್ಸರ್​ಗಳನ್ನು ಬಾರಿಸಿ ಮನರಂಜನೆ ಒದಗಿಸಿದ್ದಾರೆ. ಇವರಿಬ್ಬರ ಪ್ರದರ್ಶನಕ್ಕೆ ಎದುರಾಳಿ ಮುಂಬಯಿ ಇಂಡಿಯನ್ಸ್​ ತಂಡ ಸಂಪೂರ್ಣವಾಗಿ ಮಂಕಾಗಿ ಹೋಗಿತ್ತು. ಈ ಬಗ್ಗೆ ಮಾತನಾಡಿದ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ. ನಾವು ಕೆಟ್ಟದಾಗಿ ಬ್ಯಾಟ್​ ಮಾಡಿದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಪಂದ್ಯದ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಬೆಂಗಳೂರು ಪಿಚ್​ ಅತ್ಯುತ್ತಮವಾಗಿತ್ತು. ಆದರೆ, ನಾವು ಉತ್ತಮ ಆರಂಭ ಪಡೆಯಲಿಲ್ಲ. ನಮ್ಮ ತಂಡದ ಬ್ಯಾಟರ್​ಗಳು ಕೆಟ್ಟದಾಗಿ ಬ್ಯಾಟ್​ ಮಾಡಿದರು. ಬೌಲರ್​ಗಳು ಕೂಡ ಮಾರಕ ದಾಳಿ ಸಂಘಟಿಸಲಿಲ್ಲ. ಹೀಗಾಗಿ ಸೋಲು ಎದುರಾಯಿತು. ಇವರೆಲ್ಲರ ನಡುವೆ ತಿಲಕ್​ ವರ್ಮಾ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ. ಅವರ ಶ್ರಮಕ್ಕೆ ನಮ್ಮೆಲ್ಲರ ಮೆಚ್ಚುಗೆಯಿದೆ ಎಂದು ರೋಹಿತ್​ ಶರ್ಮಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : IPL 2023: ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ವಿರಾಟ್​ ಕೊಹ್ಲಿ; ಏನದು?

ಬ್ಯಾಟಿಂಗ್ ಮಾಡುವುದಕ್ಕೆ ಪೂರಕವಾಗಿರುವ ಪಿಚ್​ ನೀಡಲಾಗಿತ್ತು. ಆದರೆ, ನಮ್ಮ ತಂಡದ ಬ್ಯಾಟರ್​ಗಳು ಅನುಕೂಲಗಳನ್ನು ಬಳಸಿಕೊಂಡಿಲ್ಲ. ನಾವು ಪೇರಿಸಿದ್ದ ಮೊತ್ತಕ್ಕೆ ಇನ್ನೊಂದು 30 ಅಥವಾ 40 ರನ್​ ಸೇರ್ಪಡೆಗೊಂಡಿದ್ದರೆ ಗೆಲುವಿನ ಅವಕಾಶ ಹೆಚ್ಚಿತ್ತು. ಆದರೆ, ನಾವು ಬ್ಯಾಟ್​ ಮಾಡುವುದಕ್ಕೆ ಒದ್ಡಾಡಿದೆವು. ಇದ್ದದ್ದರಲ್ಲಿ ತಿಲಕ್​ ವರ್ಮಾ ಉತ್ತಮ ಪ್ರದರ್ಶನ ನೀಡಿದರು ಎಂದು ಅವರು ಹೊಗಳಿದ್ದಾರೆ.

ವಿಫಲ ಬೌಲಿಂಗ್​

ಮುಂಬಯಿ ತಂಡದ ಬ್ಯಾಟರ್​ಗಳು ಕೆಚ್ಚೆದೆ ತೋರಿಸದ ಕಾರಣ ಬೌಲರ್​ಗಳಿಗೂ ಆರ್​ಸಿಬಿ ಮೇಳೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ವಿರಾಟ್​ ಕೊಹ್ಲಿ ಹಾಗೂ ಫಾಫ್​ ಡು ಪ್ಲೆಸಿಸ್​ ಮೊದಲ ವಿಕೆಟ್​ಗೆ 148 ರನ್​ ಪೇರಿಸಿದ ಕಾರಣ ಉತ್ತಮ ಆರಂಭ ದೊರಕಿತು. ಅವರಿಬ್ಬರೂ ಅರ್ಧ ಶತಕಗಳನ್ನು ಬಾರಿಸಿದ್ದ ಕಾರಣ ಆರ್​ಸಿಬಿ ಜಯ ಸುಲಭವಾಯಿತು. ಕೊನೆ ಹಂತದಲ್ಲಿ ಎರಡು ವಿಕೆಟ್​ ಉರುಳಿಸಿದ ಹೊರತಾಗಿಯೂ ಮುಂಬೈ ತಂಡಕ್ಕೆ ಜಯ ನಿಲುಕಲಿಲ್ಲ.

ಸೋಲಿಗೆ ಜಸ್​ಪ್ರಿತ್​ ಬುಮ್ರಾ ಅವರ ಅಲಭ್ಯತೆ ಕಾರಣ ಎಂಬುದನ್ನೂ ರೋಹಿತ್​ ಶರ್ಮಾ ಒಪ್ಪಿಕೊಂಡಿಲ್ಲ. ಕಳೆದ ಆರೇಳು ತಿಂಗಳಿಂದ ನಾವು ಜಸ್​ಪ್ರಿತ್ ಬುಮ್ರಾ ಅವರ ಅಲಭ್ಯತೆಯಿಂದಲೇ ಆಡುತ್ತಿದ್ದೇವೆ. ನಮ್ಮಲ್ಲಿ ಬೇರೆ ಪ್ರತಿಭಾವಂತ ಬೌಲರ್​ಗಳೂ ಇದ್ದಾರೆ. ಅದರಲ್ಲಿ ಕೆಲವರು ಈ ಹಿಂದೆ ಐಪಿಎಲ್​ನಲ್ಲಿ ಆಡಿಲ್ಲ. ಅವರಿಗೆ ಎಲ್ಲವೂ ಹೊಸದು. ಹಾಗೆಂದು ಅವರು ಪ್ರದರ್ಶನ ಸೀಮಿತಲ್ಲ. ಮುಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ಹೇಳಿದರು.

ಫಾಫ್​ ಡು ಪ್ಲೆಸಿಸ್​ ಏನಂದರು?

ಗೆಲುವಿನ ಕುರಿತು ಮಾತನಾಡಿದ ಫಾಫ್​ ಡು ಪ್ಲೆಸಿಸ್​ ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾನು ಆರ್​ಸಿಬಿ ನಾಯಕನಾಗಿ ಆಡಿದ ಬಳಿಕ ಮೊದಲ ಬಾರಿಗೆ ಆಡುತ್ತಿದ್ದೇನೆ. ಆದರೆ, ಚಿನ್ನ ಸ್ವಾಮಿಯಲ್ಲಿ ಆಡುವುದು ಅದ್ಬುತ ಅನುಭವ. ಅಂತೆಯೇ ವಿರಾಟ್​ ಕೊಹ್ಲಿ ಜತೆ ಆಡುವುದು ಇನ್ನಷ್ಟು ಖುಷಿಯ ವಿಚಾರ. ನಮ್ಮ ಕ್ಯಾಂಪೇನ್ ಅನ್ನು ಅತ್ಯುತ್ತಮವಾಗಿ ಆರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ತಮ್ಮ ತಂಡದ ಗೆಲುವಿನ ಹಿಂದೆ ಬೌಲರ್​ಗಳ ಕೊಡುಗೆ ಇರುವುದನ್ನೂ ಸ್ಮರಿಸಲು ಫಾಫ್​ ಡು ಪ್ಲೆಸಿಸ್​ ಮರೆಯಲಿಲ್ಲ. ಮುಂಬಯಿ ಇಂಡಿಯನ್ಸ್​ ತಂಡದ ಆರಂಭಿಕ ಬ್ಯಾಟರ್​ಗಳನ್ನು ಔಟ್​ ಮಾಡುವ ಮೂಲಕ ಅವರು ಗೆಲುವಿಗೆ ಸಹಕರಿಸಿದ್ದಾರೆ ಎಂದು ಹೇಳಿದರು.

Exit mobile version