Site icon Vistara News

WFI Office: ಬ್ರಿಜ್​ ಭೂಷಣ್​ ಮನೆಯಿಂದ ಭಾರತೀಯ ಕುಸ್ತಿ ಒಕ್ಕೂಟದ ಕಚೇರಿ ಸ್ಥಳಾಂತರ

Brij Bhushan

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ (Wrestling Federation of India) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರ ನಿವಾಸದಲ್ಲಿದ್ದ ಕುಸ್ತಿ ಸಂಸ್ಥೆಯ ಕಚೇರಿಯನ್ನು ಸ್ಥಳಾಂತರಿಸಲಾಗಿದೆ.

ಲೈಗಿಂಕ ಕಿರುಕುಳದ ಆರೋಪದಿಂದಾಗಿ ಬ್ರಿಜ್​ಭೂಷಣ್​ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಅವರ ಆಪ್ತರಾಗಿರುವ ಸಂಜಯ್ ಸಿಂಗ್ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಹೀಗಾಗಿ ಕಚೇರಿ ತಮ್ಮ ಮನೆಯಲ್ಲೇ ಇರುವಂತೆ ನೋಡಿಕೊಂಡ ಬ್ರಿಜ್​ ಭೂಷಣ್​ ಈ ಮೂಲಕ ಪರೋಕ್ಷವಾಗಿ ಕುಸ್ತಿಪಟುಗಳ ಮೇಲೆ ಹಿಡಿತ ಸಾಧಿಸುವ ಯೋಜನೆ ರೂಪಿಸಿದ್ದರು. ಆದರೆ ಕ್ರೀಡಾ ಸಚಿವಾಲಯವು ಇತ್ತೀಚೆಗೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ ಹೊಸದಾಗಿ ರಚಿಸಲಾದ ಕುಸ್ತಿ ಸಮಿತಿಯನ್ನು ಡಿ.24 ರಂದು ಅಮಾನತುಗೊಳಿಸಿತ್ತು. ಇದೀಗ ಭಾರತೀಯ ಕುಸ್ತಿ ಒಕ್ಕೂಟದ ಕಚೇರಿಯನ್ನು ನವದೆಹಲಿಯ ಹರಿ ನಗರಕ್ಕೆ ಸ್ಥಳಾಂತರಿಸಲಾಗಿದೆ. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಪ್ರಕರಣ ದೆಹಲಿ ಹೈಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ.


ಸಂಜಯ್​ ಸಿಂಗ್​ ಅವರು ಡಬ್ಲ್ಯುಎಫ್‍ಐ ಮುಖ್ಯಸ್ಥರಾಗಿ ಆಯ್ಕೆಯಾದ ನಂತರ, ಸಾಕ್ಷಿ ಮಲಿಕ್​ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದೆ, ವಿನೇಶ್ ಫೋಗಟ್​ ಖೇಲ್ ರತ್ನ ಹಾಗೂ ಅರ್ಜುನ್ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ದರಿಸಿದ್ದರು. ಅಲ್ಲದೆ ಪ್ರಧಾನಿ ಮೋದಿಗೂ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದರು.

ಕುಸ್ತಿಯಿಂದ ನಂಟು ಕಡಿದುಕೊಂಡಿದ್ದೇನೆ; ಬ್ರಿಜ್​ ಭೂಷಣ್​

ಕೆಲ ದಿನಗಳ ಹಿಂದೆ ಹೊಸದಾಗಿ ಆಯ್ಕೆಯಾದ ಭಾರತೀಯ ಕುಸ್ತಿ ಅಸೋಸಿಯೇಷನ್‌(Wrestling Federation of India) ಮಂಡಳಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ್ದಕ್ಕೂ(WFI suspension) ನನಗೂ ಯಾವುದೇ ಸಂಬಂಧವಿಲ್ಲ ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Singh) ಹೇಳಿದ್ದರು. ಜತೆಗೆ ಕುಸ್ತಿಯಿಂದ ನಂಟು ಕಡಿದುಕೊಂಡಿದ್ದೇನೆ ಎಂದು ಹೇಳಿದ್ದರು.

ಇದನ್ನೂ ಓದಿ WFI Suspended: ರಾಷ್ಟ್ರೀಯ ಕುಸ್ತಿ ಫೆಡರೇಶನ್ ಸಂಸ್ಥೆ ಅಮಾನತು ಮಾಡಲು ಕಾರಣವೇನು?

“ನಾನು ಯಾವುದೇ ವಿವಾದವನ್ನು ಎದುರಿಸಲು ಬಯಸುವುದಿಲ್ಲ. ಭಾರತೀಯ ಕುಸ್ತಿ ರಂಗದಲ್ಲಿ ಇತ್ತೀಚಿನ ಬೆಳವಣಿಗೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. 12 ವರ್ಷ ಕುಸ್ತಿಪಟುಗಳಿಗಾಗಿ ದುಡಿದಿದ್ದೇನೆ, ನ್ಯಾಯ ಕೊಡಿಸಿದ್ದೇನೆಯೇ ಎನ್ನುವುದನ್ನು ಕಾಲವೇ ಹೇಳುತ್ತದೆ. ನಾನು ಕುಸ್ತಿಯಿಂದ ಸಂಪೂರ್ಣ ನಿವೃತ್ತಿ ಹೊಂದಿದ್ದೇನೆ. ಕುಸ್ತಿಯಿಂದ ನಂಟು ಕಡಿದುಕೊಂಡಿದ್ದೇನೆ. ಈಗ ಸರ್ಕಾರದ ಜತೆಗಿನ ನಿರ್ಧಾರ ಹಾಗೂ ಮಾತುಕತೆಯನ್ನು ಒಕ್ಕೂಟದ ಚುನಾಯಿತ ಜನರೇ ಮಾಡುತ್ತಾರೆ” ಎಂದಿದ್ದರು.

ಲೋಕಸಭೆ ಚುನಾವಣೆ ತಯಾರಿಯಲ್ಲಿ ನಿರತ

“ನನಗೂ ನೂತನ ಕುಸ್ತಿ ಒಕ್ಕೂಟಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಲೋಕಸಭೆ ಚುನಾವಣೆ ತಯಾರಿಯಲ್ಲಿ ನಿರತನಾಗಿದ್ದೇನೆ. ಇನ್ನು ಕುಸ್ತಿ ಸಂಘದ ಬಗ್ಗೆ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಆಯ್ಕೆಯಾದವರು ಮಾತ್ರ ತೆಗೆದುಕೊಳ್ಳುತ್ತಾರೆ. ಈಗ ಕುಸ್ತಿ ಸಂಘವು ನ್ಯಾಯಾಲಯದ ಮೊರೆ ಹೋಗುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸಂಜಯ್ ಸಿಂಗ್ ನನ್ನ ಸಂಬಂಧಿಯೂ ಅಲ್ಲ” ಎಂದು ಬ್ರಿಜ್ ಭೂಷಣ್ ಹೇಳಿದ್ದರು.

Exit mobile version