Site icon Vistara News

INDvsNZ T20 : ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿ ಜೀವಂತವಾಗಿಡಲು ಭಾರತ ತಂಡಕ್ಕಿರುವ ಅವಕಾಶಗಳೇನು?

team india

ಲಖನೌ : ಬ್ಯಾಟಿಂಗ್​ ವೈಫಲ್ಯದ ಕಾರಣಕ್ಕೆ ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯ (INDvsNZ T20) ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡ (Indian Cricket team) ಭಾನುವಾರ (ಜನವರಿ 29ರಂದು) ನಡೆಯಲಿರುವ ಎರಡನೇ ಪಂದ್ಯದಲ್ಲಿ ಆಡಲು ಸಜ್ಜಾಗುತ್ತಿದೆ. ಈ ಹಣಾಹಣಿಯಲ್ಲಿ ಗೆಲುವು ಸಾಧಿಸಿದರೆ ಮಾತ್ರ ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಲು ಹಾರ್ದಿಕ್​ ಪಾಂಡ್ಯ (Hardik panday) ಬಳಗಕ್ಕೆ ಸಾಧ್ಯ. ಅದಕ್ಕಾಗಿ ಹಿಂದಿನ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

ಲಖನೌನ ಭಾರತ ರತ್ನ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಈ ಪಂದ್ಯ ಆಯೋಜನೆಗೊಂಡಿದೆ. ರಾತ್ರಿ 7ಗಂಟೆಗೆ ಪಂದ್ಯ ಅರಂಭವಾಗಲಿದೆ. ಪಿಚ್​ನ ವರ್ತನೆಗೆ ಅನುಗುಣವಾಗಿ ಭಾರತ ತಂಡ ಯೋಜನೆ ರೂಪಿಸಿಕೊಳ್ಳಬೇಕಾಗಿದೆ. ಪ್ರಮುಖವಾಗಿ ವೇಗದ ಬೌಲಿಂಗ್​ ವಿಭಾಗದ ದೌರ್ಬಲ್ಯಗಳು ಸುಧಾರಣೆಯಾಗಬೇಕಾಗಿದೆ. ಜತೆಗೆ ಅಂತಿಮ ಹಂತದಲ್ಲಿ ಹೆಚ್ಚು ರನ್​ ಬಿಟ್ಟುಕೊಡುವ ಅಭ್ಯಾಸವೂ ಕೊನೆಗೊಳ್ಳಬೇಕಾಗಿದೆ.

ಮೊದಲ ಪಂದ್ಯದಲ್ಲಿ ಭಾರತ ತಂಡ ಪ್ರವಾಸಿ ತಂಡದ ಸ್ಪಿನ್ ಬಲೆಗೆ ಬಿದ್ದಿತ್ತು. ಪಿಚ್​ನಲ್ಲಿ ಹೆಚ್ಚುವರಿ ತಿರುವು ಇದ್ದ ಕಾರಣ ತಂಡದ ಬ್ಯಾಟಿಂಗ್​ಗೆ ಅಡಚಣೆಯಾಯಿತು ಎಂಬುದಾಗಿ ನಾಯಕ ಹಾರ್ದಿಕ್​ ಪಾಂಡ್ಯ ಬಳಿಕ ಹೇಳಿದ್ದಾರೆ. ಆದರೂ, ಅಗ್ರ ಕ್ರಮಾಂಕದ ಬ್ಯಾಟಿಂಗ್​ ವೈಫಲ್ಯ ಭಾರತ ತಂಡಕ್ಕೆ ಮುಳುವಾಯಿತು ಎಂದು ಹೇಳುವುದಕ್ಕೆ ಅಡ್ಡಿಯಿಲ್ಲ.

ಬ್ಯಾಟಿಂಗ್​ ಸುಧಾರಣೆ ಅಗತ್ಯ

ಮೊದಲ ಪಂದ್ಯದಲ್ಲಿ ಭಾರತ ತಂಡದ ಪರ ಇಶಾನ್​ ಕಿಶನ್ ಹಾಗೂ ದೀಪಕ್​ ಹೂಡ ಸಂಪೂರ್ಣ ವೈಫಲ್ಯ ಎದುರಿಸಿದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದ್ವಿ ಶತಕ ಬಾರಿಸಿದ್ದಾರೆ ಎಂಬ ಸಾಧನೆ ಹೊರತುಪಡಿಸಿ ಇಶಾನ್​ ಕಿಶನ್​ ಬ್ಯಾಟಿಂಗ್​ ಸ್ಥಿರವಾಗಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯುತ್ತಿರುವ ದೀಪಕ್​ ಹೂಡ ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. 7ನೇ ಕ್ರಮಾಂಕದಲ್ಲಿ ಆಡಲು ಇಳಿಯುವ ಅವರು ಅಗತ್ಯ ರನ್​ ಗಳಿಸದೇ ಹೋಗುವ ಕಾರಣ ತಂಡಕ್ಕೆ ಹಿನ್ನಡೆಯಾಗುತ್ತಿದೆ. ರಾಹುಲ್​ ತ್ರಿಪಾಠಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡುವ ಅವಕಾಶ ಪಡೆದರೂ ತಮ್ಮ ಆಯ್ಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಈ ಮೂವರು ಬ್ಯಾಟರ್​ಗಳು ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಿದರೆ ಗೆಲುವು ಸಾಧ್ಯ.

ಅರ್ಶ್​ದೀಪ್​, ಮಲಿಕ್​ ಮೇಲೆ ಕಣ್ಣು

ಭಾರತ ತಂಡದ ವೇಗದ ಬೌಲಿಂಗ್​ ವಿಭಾಗದ ಮೇಲೆ ಕ್ರಿಕೆಟ್ ಅಭಿಮಾನಿಗಳಿಗೆ ಅಸಮಾಧಾನವಿದೆ. ಪ್ರಮುಖವಾಗಿ ಅರ್ಶ್​ದೀಪ್ ಸಿಂಗ್ ಹಾಗೂ ಉಮ್ರಾನ್​ ಮಲಿಕ್ ಎದುರಾಳಿ ತಂಡಕ್ಕೆ ಅನಗತ್ಯ ರನ್​ ಬಿಟ್ಟುಕೊಡುತ್ತಿದ್ದಾರೆ. ಅದರಲ್ಲೂ ಅರ್ಶ್​ದೀಪ್​ ಸಿಂಗ್ ಮೊದಲ ಪಂದ್ಯದ ಕೊನೇ ಓವರ್​ನಲ್ಲಿ 27 ರನ್​ ಬಿಟ್ಟುಕೊಟ್ಟಿದ್ದರು. ಅದುವೇ ಭಾರತದ ಸೋಲಿಗೆ ಕಾರಣವಾಯಿತು. ಅಲ್ಲದೆ, ಫ್ರಂಟ್​ ಫೂಟ್​ ನೋಬಾಲ್​ ಎಸೆಯುವ ಚಾಳಿಯನ್ನು ಬಿಟ್ಟಿಲ್ಲ. ಬೌಲಿಂಗ್​ ವಿಭಾಗ ಸುಧಾರಿಸಿಕೊಂಡರೆ ಭಾರತ ತಂಡಕ್ಕೆ ಗೆಲುವಿನ ಅವಕಾಶವಿದೆ.

ಇದನ್ನೂ ಓದಿ : INDvsNZ T20 | ವಾಷಿಂಗ್ಟನ್​ ಸುಂದರ್​ ಹಿಡಿದ ಅದ್ಭುತ ಕ್ಯಾಚ್​ಗೆ ಶಹಬ್ಬಾಸ್​ ಎಂದ ಕ್ರಿಕೆಟ್​ ಅಭಿಮಾನಿಗಳು

ತಂಡಗಳು:

ಭಾರತ: ಹಾರ್ದಿಕ್​ ಪಾಂಡ್ಯ (ನಾಯಕ), ಸೂರ್ಯಕುಮಾರ್​ ಯಾದವ್, ಇಶಾನ್ ಕಿಶನ್​, ಶುಭ್​ಮನ್ ಗಿಲ್​, ಪೃಥ್ವಿ ಶಾ, ದೀಪಕ್​ ಹೂಡ, ರಾಹುಲ್ ತ್ರಿಪಾಠಿ, ಜಿತೇಶ್​ ಶರ್ಮ, ವಾಷಿಂಗ್ಟನ್​ ಸುಂದರ್​, ಕುಲ್ದೀಪ್​ ಯಾದವ್​, ಯಜ್ವೇಂದ್ರ ಚಹಲ್​, ಅರ್ಶ್​ದೀಪ್​ ಸಿಂಗ್​, ಉಮ್ರಾನ್​ ಮಲಿಕ್​, ಶಿವಂ ಮಾವಿ, ಮುಕೇಶ್​ ಕುಮಾರ್​.

ನ್ಯೂಜಿಲ್ಯಾಂಡ್​ : ಮಿಚೆಲ್​ ಸ್ಯಾಂಟ್ನರ್​ (ನಾಯಕ), ಫಿನ್​ ಅಲೆನ್​, ಡೆವೋನ್​ ಕಾನ್ವೆ, ಗ್ಲೆನ್​ ಫಿಲಿಪ್ಸ್​, ಡೇನ್​ ಕ್ಲೆವರ್​, ಮಾರ್ಕ್​ ಚಾಪ್ಮನ್​, ಮೈಕೆಲ್ ಬ್ರೇಸ್​ವೆಲ್​, ಡ್ಯಾರಿಲ್​ ಮಿಚೆಲ್, ಮೈಕೆಲ್​ ರಿಪ್ಪಾನ್​, ಲಾಕಿ ಫರ್ಗ್ಯೂಸನ್, ಇಶ್ ಸೋಧಿ, ಬ್ಲೇರ್ ಟಿಕ್ನರ್​, ಜಾಕೊಬ್​ ಡಫಿ, ಹೆನ್ರಿ ಶಿಪ್ಲೆ, ಬೆನ್​ ಲಿಸ್ಟರ್.

Exit mobile version