Site icon Vistara News

Wrestlers Protest : ಕುಸ್ತಿಪಟುಗಳ ಬಂಧನದ ಬಗ್ಗೆ ಒಲಿಂಪಿಕ್‌ ಸ್ಟಾರ್‌ ನೀರಜ್​ ಚೋಪ್ರಾ ಹೇಳಿದ್ದೇನು?

wrestlers protest on jantar mantar

ನವದೆಹಲಿ: ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರ ಬಂಧನಕ್ಕೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ಒಲಿಂಪಿಕ್ಸ್​ ಕುಸ್ತಿಪಟುಗಳಾದ ಭಜರಂಗ್​ ಪೂನಿಯಾ, ಸಾಕ್ಷಿ ಮಲಿಕ್​ ಮತ್ತು ವಿನೇಶ್​ ಫೋಗಟ್​ ಅವರನ್ನು ಭಾನುವಾರ ಅತ್ಯಂತ ಅಮಾನುಷವಾಗಿ ಬಂಧಿಸಿದ ಕ್ರಮಕ್ಕೆ, ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ನೀರಜ್​ ಮಾತ್ರವಲ್ಲದೆ ಇನ್ನೂ ಹಲವು ದೇಶದ ಅಗ್ರಮಾನ್ಯ ಕ್ರೀಡಾಪಟುಗಳು ಈ ವರ್ತನೆಗೆ ಆಕ್ರೋಶ ಹೊರಹಾಕಿದ್ದು ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದಾರೆ.

ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಉದ್ಘಾಟನೆಯಾದ ಸಂಸತ್‌ನ ನೂತನ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಇದೇ ವೇಳೆ ಸಂಸತ್​ ಭವನಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಈ ಕುಸ್ತಿಪಟುಗಳನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ನೂಕು ನುಗ್ಗಲು ಉಂಟಾಯಿತು. ವಿನೇಶ್ ಫೋಗಟ್ ಮತ್ತು ಅವರ ಸೋದರಿ​ ಸಂಗೀತಾ ಫೋಗಟ್​​ ಒಬ್ಬರ ಮೇಲೊಬ್ಬರು ಬಿದ್ದರು. ಆದರೂ ಅವರನ್ನು ಅತ್ಯಂತ ಅಮಾನುಷವಾಗಿ ಬಂಧಿಸುವ ಮೂಲಕ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಈ ಘಟನೆಗೆ ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವೀಟ್​ ಒಂದನ್ನು ಮಾಡಿರುವ ಅವರು “ಈ ವಿಡಿಯೊ ಕಂಡ ಬಳಿಕ ನನಗೆ ದುಃಖವಾಗಿದೆ. ತಪ್ಪು ಮಾಡಿದ್ದಾರೆ ಎಂಬ ಕಾರಣಕ್ಕೆ ಈ ರೀತಿಯ ವರ್ತನೆ ತೋರಿರುವುದು ನಿಜಕ್ಕೂ ಬೇಸರ ತಂದಿದೆ. ಇದು ಉತ್ತಮ ಮಾರ್ಗವಲ್ಲ” ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದಿಯೂ ನೀರಜ್ ಚೋಪ್ರಾ ಅವರು ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ಇದನ್ನೂ ಓದಿ Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್‌ ಕವಾಯ್

ಇದನ್ನೂ ಓದಿ Wrestlers Protest: ಬ್ರಿಜ್‌ಭೂಷಣ್ ಸಿಂಗ್ ಬಂಧಿಸಿ, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಿ: ಸಿದ್ದರಾಮಯ್ಯ ಆಗ್ರಹ

ನೀರಜ್​ ಮಾತ್ರವಲ್ಲದೆ ಭಾರತದ ಸ್ಟಾರ್​ ಫುಟ್ಬಾಲ್ ಆಟಗಾರ ಸುನೀಲ್‌ ಚೇಟ್ರಿ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. “ಯಾವುದೇ ತಪ್ಪನ್ನು ಮಾಡದೇ ದೇಶಕ್ಕಾಗಿ ಪದಕ ಗೆದ್ದ ನಮ್ಮ ಕುಸ್ತಿಪಟುಗಳ ಕೊರಳಪಟ್ಟಿ ಹಿಡಿದು ಏಕೆ ಎಳೆದಾಡಬೇಕು? ಈ ರೀತಿ ಯಾರನ್ನೂ ನಡೆಸಿಕೊಳ್ಳಬಾರದು. ಸೂಕ್ತ ಮಾರ್ಗದಲ್ಲಿ ಈ ಪರಿಸ್ಥಿತಿಯನ್ನು ಬಗೆಹರಿಸಬೇಕು” ಎಂದು ಹೇಳಿದ್ದಾರೆ. ಹೀಗೆ ಹಲವು ಕ್ರೀಡಾ ಪಟುಗಳು ಈ ಘಟನೆಯನ್ನು ಖಂಡಿಸಿದ್ದಾರೆ.

Exit mobile version