Site icon Vistara News

WTC Final 2023: ಟ್ರೋಫಿ ಗೆಲ್ಲುವ ವಿಶ್ವಾಸವಿದೆ; ಕೋಚ್​ ರಾಹುಲ್​ ದ್ರಾವಿಡ್​

Indian cricket coach

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಬುಧವಾರದಿಂದ ಆರಂಭಗೊಳ್ಳಲಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾ ಈ ಬಾರಿ ಕಪ್​ ಗೆಲ್ಲುವ ಮೂಲಕ ಹಲವು ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸಲಿದೆ ಎಂದು ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡ್ರಾವಿಡ್​, ಮಹತ್ವದ ಪಂದ್ಯಕ್ಕೆ ಭಾರತ ಕಳೆದ ಎರಡು ವರ್ಷಗಳಿಂದ ಶ್ರಮಪಟ್ಟಿದೆ. ನಾವು ಕಳೆದ 12 ವರ್ಷಗಳಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆಲ್ಲದಿರಬಹುದು. ಆದರೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ಗೆ ಬೇಕಾದ ಎಲ್ಲ ಸಿದ್ಧತೆ ಮತ್ತು ಕಾರ್ಯ ತಂತ್ರಗಳನ್ನು ರೂಪಿಸಿದ್ದೇವೆ. ಇದು ಈ ಬಾರಿ ನಮಗೆ ನೆರವಾಗಲಿದೆ” ಎಂದು ಹೇಳಿದರು.

ಗೆಲುವೊಂದೇ ನಮ್ಮ ಗುರಿ

2021 ರಲ್ಲಿ ಕಿವೀಸ್​ ವಿರುದ್ಧ ನಡೆದ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್‌ನಲ್ಲಿ ನಾವು ಪ್ರಶಸ್ತಿ ಗೆಲ್ಲಲು ಎಡವಿದೆವು. ಬಳಿಕ ಆಡಿದ ಟಿ20 ವಿಶ್ವಕಪ್​ ಟೂರ್ನಿಯ ನಾಕ್‌ಔಟ್ ಹಂತದಲ್ಲೇ ಸೋಲು ಕಂಡೆವು. ಈ ಎಲ್ಲ ಸೋಲು ನಮ್ಮಲ್ಲಿ ಪ್ರಶಸ್ತಿಯ ಹಸಿವನ್ನು ಹೆಚ್ಚಿಸಿದೆ. ತಂಡ ಯಾವುದೇ ಒತ್ತಡಕ್ಕೆ ಸಿಲುಕದೆ ಉತ್ತಮ ಪ್ರದರ್ಶನ ತೋರುವ ಎಲ್ಲ ವಿಶ್ವಾಸವಿದೆ. ಈ ಬಾರಿ ಗೆಲುವೊಂದೇ ನಮ್ಮ ಗುರಿಯಾಗಿದೆ ಎಂದರು.

ರಹಾನೆ ಕಮ್​ಬ್ಯಾಕ್​

ಅನುಭವಿ ಬ್ಯಾಟರ್​ ಅಜಿಂಕ್ಯ ರಹಾನೆ ಅವರು 18 ತಿಂಗಳುಗಳ ಬಳಿಕ ಮೊದಲ ಬಾರಿ ಟೆಸ್ಟ್ ಆಡುತ್ತಿದ್ದಾರೆ. ಆಟದಲ್ಲಿನ ವೈಫಲ್ಯವು ವೃತ್ತಿಜೀವನವನ್ನು ಕೊನೆಗೊಳಿಸಬಹುದು. ಈಗ ತಂಡಕ್ಕೆ ಅವರು ಮರಳಿದ್ದಾರೆ. ಅವರ ಆಗಮನದಿಂದ ತಂಡಕ್ಕೆ ಹೆಚ್ಚು ಬಲ ಬಂದಿದೆ. ಐಪಿಎಲ್​ನಲ್ಲಿ ಅವರು ತೋರಿದ ಬ್ಯಾಟಿಂಗ್​ ಪ್ರದರ್ಶನ ಇಲ್ಲಿಯೂ ಮುಂದುವರಿಯುವ ವಿಶ್ವಾಸವಿದೆ. ಇಂಗ್ಲೆಂಡ್​ನಲ್ಲಿಯೂ ರಹಾನೆ ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದಾರೆ. ರಹಾನೆ ಬಳಿ ಇನ್ನೂ ದೇಶಕ್ಕಾಗಿ ಆಡುವ ಸಾಮರ್ಥ್ಯವಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ WTC Final 2023 : ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸುವ ಸೂಚನೆ ನೀಡಿದ ರೋಹಿತ್​ ಶರ್ಮಾ

ಚೇತೇಶ್ವರ್​ ಪೂಜಾರ ಬಗ್ಗೆಯೂ ದ್ರಾವಿಡ್​ ಈ ಪಂದ್ಯದಲ್ಲಿ ಹೆಚ್ಚಿನ ಬರವಸೆ ಇರಿಸಿರುವುದಾಗಿ ತಿಳಿಸಿದರು. ಇಂಗ್ಲೆಂಡ್​ ನೆಲದಲ್ಲಿ ಕೌಂಟಿ ಕ್ರಿಕೆಟ್​ನಲ್ಲಿ ಅಮೋಘ ಪ್ರದರ್ಶನ ತೋರಿದ್ದಾರೆ. ಇಲ್ಲಿನ ವಾತಾವರಣಕ್ಕೆ ಅವರು ಒಗ್ಗಿಕೊಂಡಿದ್ದಾರೆ. ಹೀಗಾಗಿ ಅವರು ಉತ್ತಮ ಪ್ರದರ್ಶನ ತೋರುವ ನಂಬಿಕೆ ಇದೆ ಎಂದರು.

Exit mobile version