Site icon Vistara News

Yuvraj Singh: ಈ ಬಾರಿ ಭಾರತ ವಿಶ್ವಕಪ್​ ಗೆಲ್ಲುವುದು ಅನುಮಾನ; ಭವಿಷ್ಯ ನುಡಿದ ವಿಶ್ವಕಪ್ ಹೀರೊ ಯುವರಾಜ್ ಸಿಂಗ್

yuvraj singh winning celebration

ಮುಂಬಯಿ: ಟೀಮ್​ ಇಂಡಿಯಾದ ಮಾಜಿ ಆಟಗಾರ, ವಿಶ್ವಕಪ್ ಹೀರೊ, ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್(Yuvraj Singh) ಅವರು ಈ ಬಾರಿ ಭಾರತ ತಂಡ ವಿಶ್ವಕಪ್​ನಲ್ಲಿ(world cup 2023) ಚಾಂಪಿಯನ್​ ಪಟ್ಟ ಅಲಂಕರಿಸುವುದು ಕಷ್ಟಸಾಧ್ಯ ಎಂದು ಭವಿಷ್ಯ ನುಡಿದ್ದಾರೆ. ತವರಿನ ಅಂಗಣದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸದಿದ್ದರೆ ಕಪ್​ ಗೆಲ್ಲಲು ಸಾಧ್ಯವಿಲ್ಲ ಎಂದು ಯುವಿ ಹೇಳಿದ್ದಾರೆ.

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಭಾರತ ತನ್ನ ವಿಶ್ವ ಕಪ್​ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್ 8 ರಂದು ನಡೆಯಲಿದೆ. ಇದಾದ ಬಳಿಕ ಅಕ್ಟೋಬರ್​ 15ರಂದು ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಆಡಲಿದೆ.

ಯುಟ್ಯೂಬ್ ವಾಹಿನಿಯ ‘ಕ್ರಿಕೆಟ್ ಬಾಸು’ ಚಾನಲ್‌ನಲ್ಲಿ ಮಾತನಾಡಿದ ಯುವರಾಜ್​ ಸಿಂಗ್​, “ಒಬ್ಬ ಅಪ್ಪಟ ದೇಶಪ್ರೇಮಿಯಾಗಿ ನಾನು ಕೂಡ ಭಾರತ ತಂಡ ಕಪ್​ ಗೆಲ್ಲುವುದನ್ನು ನೋಡಲು ಬಯಸುತ್ತೇನೆ. ಆದರೆ ಭಾರತ ತಂಡ ಟ್ರೋಫಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಲು ಕಷ್ಟಕರ. ಏಕೆಂದರೆ ಭಾರತ ತಂಡದಲ್ಲಿ ಹಲವು ಸಮಸ್ಯೆಗಳು ಕಾಣುತ್ತಿದೆ, ಇದು ಪರಿಹಾರ ಕಾಣುವವರೆಗೆ ಕಪ್​ ಗೆಲ್ಲುವುದು ಕಷ್ಟ” ಎಂದು ಹೇಳಿದ್ದಾರೆ.

“ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಸಮಸ್ಯೆ ಎದ್ದು ಕಾಣುತ್ತಿದೆ. 4 ಮತ್ತು 5 ಕ್ರಮಾಂಕದ ಬ್ಯಾಟರ್‌ಗಳ ಪ್ರದರ್ಶನ ತಂಡದ ಗೆಲುವನನ್ನು ನಿರ್ಧರಿಸಿತ್ತದೆ. ಆದರೆ ಸದ್ಯ ಭಾರತ ತಂಡದಲ್ಲಿ ಈ ಸ್ಥಾನಕ್ಕೆ ಸೂಕ್ತ ಆಟಗಾರ ಇಲ್ಲ. ಕಳೆದ ಕೆಲ ವರ್ಷಗಳಿಂದಲೂ ತಂಡಕ್ಕೆ ಇದುವೇ ಹಿನ್ನಡೆಯಾಗಿದೆ. 2011 ವಿಶ್ವ ಕಪ್​ನಲ್ಲಿ ತಂಡ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠವಾಗಿತ್ತು. ಹೀಗಾಗಿ ತಂಡ ಕಪ್​ ಗೆಲ್ಲುವಲ್ಲಿ ಸಹಕಾರಿಯಾಯಿತು. ಇನ್ನು ಗಾಯದ ಸಮಸ್ಯೆಯೂ ಭಾರತಕ್ಕೆ ಹಿನ್ನಡೆಯಾಗಿದೆ” ಹೀಗಾಗಿ ಭಾರತ ಕಪ್​ ಗೆಲ್ಲುವುದು ಅನುಮಾನ ಎಂದು ಯುವರಾಜ್​ ಹೇಳಿದ್ದಾರೆ.

ಇದನ್ನೂ ಓದಿ Rishabh Pant: ರಿಷಭ್​ ಪಂತ್​ ಭೇಟಿಯಾದ ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​

2011ರ ವಿಶ್ವಕಪ್ ನಲ್ಲಿ ಭಾರತದ ವಿಜಯಕ್ಕೆ ಯುವಿ ಪ್ರಮುಖ ಕಾರಣರಾಗಿದ್ದರು. ಆ ವಿಶ್ವಕಪ್ ನಲ್ಲಿ 90.50ರ ಸರಾಸರಿಯಲ್ಲಿ 362 ರನ್ ಗಳಿಸಿದ್ದ ಯುವಿ, 15 ವಿಕೆಟ್ ಗಳನ್ನೂ ಕಬಳಿಸಿದ್ದರು. ಆದರೆ ಈ ಕೂಟದ ಬಳಿಕ ಯುವಿ ಕ್ಯಾನ್ಸರ್ ಗೆ ತುತ್ತಾಗಿದ್ದರು. 2019ರ ಜೂನ್​ 10 ರಂದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು.

Exit mobile version