Site icon Vistara News

Literature: ಬುಕ್‌ ಬ್ರಹ್ಮದಿಂದ 1 ಲಕ್ಷ ರೂ. ಮೌಲ್ಯದ ಕಾದಂಬರಿ ಪುರಸ್ಕಾರ, ಕಥಾ ಸ್ಪರ್ಧೆ

book brahma

ಬೆಂಗಳೂರು: ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಬುಕ್‌ ಬ್ರಹ್ಮ ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯ ಜೊತೆಗೆ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ ಪುರಸ್ಕಾರ ನೀಡಲು ನಿರ್ಧರಿಸಿದೆ.

2022ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಈ ಒಂದು ಲಕ್ಷದಲ್ಲಿ 75 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 25 ಸಾವಿರ ಪ್ರಕಾಶಕರಿಗೆ ವಿತರಿಸಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಈ ಪೈಕಿ 3 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 2 ಸಾವಿರ ರೂಪಾಯಿಗಳನ್ನು ಪ್ರಕಾಶಕರಿಗೂ ನೀಡಲಾಗುವುದು ಎಂದು ಬುಕ್‌ ಬ್ರಹ್ಮದ ಪ್ರಕಟಣೆ ತಿಳಿಸಿದೆ.

ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಕಥೆಗೆ 50 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ದ್ವೀತಿಯ ಸ್ಥಾನ ಪಡೆಯುವ ಕಥೆಗೆ 25 ಸಾವಿರ ರೂಪಾಯಿ, ತೃತೀಯ ಸ್ಥಾನಕ್ಕೆ 15 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ಉಳಿದಂತೆ ಐದು ಕಥೆಗಳಿಗೆ ತಲಾ 5 ಸಾವಿರ ನಗದನ್ನು ಒಳಗೊಂಡ ಸಮಾಧಾನಕರ ಬಹುಮಾನ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ17 ಕಥೆಗಳಿಗೆ ತಲಾ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ಆಯ್ಕೆಯಾದ ಈ 25 ಕಥೆಗಳನ್ನು ಒಳಗೊಂಡ ಪುಸ್ತಕ ಪ್ರಕಟಿಸಲಾಗುತ್ತದೆ.

ಬುಕ್ ಬ್ರಹ್ಮ ಕಾದಂಬರಿ ಪುರಸ್ಕಾರ 2023ರ ನಿಯಮಗಳು:

  1. ಕಾದಂಬರಿಯು ಸ್ವತಂತ್ರವಾಗಿರಬೇಕು ಮತ್ತು 2022ರಲ್ಲಿ ಮೊದಲ ಮುದ್ರಣಗೊಂಡಿರಬೇಕು.
  2. ಅನುವಾದ ಹಾಗೂ ಭಾಷಾಂತರಗೊಂಡ ಕಾದಂಬರಿಗಳನ್ನು ಪರಿಗಣಿಸುವುದಿಲ್ಲ.
  3. ಸ್ಪರ್ಧೆಗೆ ಲೇಖಕರು/ ಪ್ರಕಾಶಕರು ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಕಳುಹಿಸಬೇಕು. ತೀರ್ಪುಗಾರರ ನಿರ್ಣಯವೇ ಅಂತಿಮ.
  4. ಕಾದಂಬರಿಗಳನ್ನು ಕಳುಹಿಸಲು ಏಪ್ರಿಲ್‌ 15, 2023 ಕೊನೆಯ ದಿನ.
  5. ಕನ್ನಡದ ಪ್ರಮುಖ ಕಾದಂಬರಿಕಾರರು ಹಾಗೂ ವಿಮರ್ಶಕರು ಸ್ಪರ್ಧೆಯ ನಿರ್ಣಾಯಕರಾಗಿರುತ್ತಾರೆ.
  6. ಆಗಸ್ಟ್‌ 1, 2023 ಮಂಗಳವಾರದಂದು ಅಂತಿಮ ಸುತ್ತನ್ನು ಪ್ರವೇಶಿಸುವ 5 ಕಾದಂಬರಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.
  7. ಆಗಸ್ಟ್ 15, 2023 ಮಂಗಳವಾರದಂದು ನಡೆಯಲಿರುವ ಸಮಾರಂಭದಲ್ಲಿ ಕಥೆಗಳ ಘೋಷಣೆ ಮತ್ತು ಪ್ರಶಸ್ತಿ ವಿತರಣೆ ಎರಡನ್ನೂ ಮಾಡಲಾಗುವುದು.
  8. ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ – ಕನ್ನಡ, ಮೂರನೇ ಮಹಡಿ, ಆರ್. ಕೆ ಕಾಂಪ್ಲೆಕ್ಸ್, ಕೆಎಸ್ಎಸ್ಐಡಿಸಿ ಕಾಂಪೌಂಡ್, ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತ, ಬೆಂಗಳೂರು-560100 ವಿಳಾಸಕ್ಕೆ ಏಪ್ರಿಲ್‌ 15ರೊಳಗೆ ಕಳುಹಿಸಬೇಕು.

ಇದನ್ನೂ ಓದಿ: Vistara Kathaspardhe : ವಿಸ್ತಾರ ನ್ಯೂಸ್‌ನಿಂದ ಯುಗಾದಿ-2023 ಕಥಾ ಸ್ಪರ್ಧೆ; 1 ಲಕ್ಷ ರೂ. ಬಹುಮಾನ!

ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2023ರ ನಿಯಮಗಳು:

  1. ಕಥೆಯು ಸ್ವತಂತ್ರವಾಗಿರಬೇಕು. ಅನುವಾದ, ಅನುಕರಣವಾಗಿರಬಾರದು.
  2. ಕಥೆಯು ಅಪ್ರಕಟಿತವಾಗಿರಬೇಕು. ಮುದ್ರಣ ಅಥವಾ ಯಾವುದೇ ವಿದ್ಯುನ್ಮಾನ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು.
  3. ಕಥೆಗೆ ಯಾವುದೇ ರೀತಿಯ ಪದಮಿತಿ ಇರುವುದಿಲ್ಲ.
  4. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧ ಇಲ್ಲ.
  5. ಹಸ್ತಪ್ರತಿ ಅಥವಾ ಟೈಪ್ ಮಾಡಿದ ಕಥೆಯಿರುವ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಬಾರದು. ಕಥೆ ಮುಗಿದ ನಂತರ ಪ್ರತ್ಯೇಕ ಪುಟದಲ್ಲಿ ತಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇರಬೇಕು.
  6. ಕಥೆಗಾರರು ನಿಬಂಧನೆಗಳಿಗೆ ಒಪ್ಪಿದ ಮತ್ತು ಸಹಿ ಮಾಡಿದ ಪ್ರತ್ಯೇಕ ಒಂದು ಪತ್ರ ಇಡಬೇಕು.
  7. ಕನ್ನಡದ ಪ್ರಮುಖ ಕಥೆಗಾರರು/ವಿಮರ್ಶಕರು ಸ್ಪರ್ಧೆಯ ನಿರ್ಣಾಯಕರಾಗಿರುತ್ತಾರೆ.
  8. ಆಯ್ಕೆಗೆ ಸಂಬಂಧಿಸಿದಂತೆ ʻಬುಕ್ ಬ್ರಹ್ಮ’ ಆಡಳಿತ ಮಂಡಳಿಯ ನಿರ್ಣಯವೇ ಅಂತಿಮ.
  9. ಕಥೆಗಳನ್ನು ಕಳುಹಿಸಲು ಕೊನೆಯ ದಿನ ಬುಧವಾರ, ಮೇ 31, 2023.
  10. ಆಗಸ್ಟ್‌ 1, 2023 ರಂದು ಮಂಗಳವಾರ, ಅಂತಿಮ ಸುತ್ತನ್ನು ಪ್ರವೇಶಿಸುವ 25 ಕಥೆಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.
  11. ಆಗಸ್ಟ್ 15, 2023 ರಂದು ಮಂಗಳವಾರ, ನಡೆಯಲಿರುವ ಸಮಾರಂಭದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಕಥೆಗಳ ಘೋಷಣೆ ಮತ್ತು ಪ್ರಶಸ್ತಿ ವಿತರಣೆ ಎರಡನ್ನೂ ಮಾಡಲಾಗುವುದು.
  12. ಅಂತಿಮ ಸುತ್ತಿಗೆ ಆಯ್ಕೆಯಾದ 25 ಕಥೆಗಳನ್ನು ಪುಸ್ತಕ, ಇ-ಪುಸ್ತಕ, ಆಡಿಯೋ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಈ 25 ಕಥೆಗಳ ಪೈಕಿ ಬಹುಮಾನ ಪಡೆಯದೇ ಉಳಿಯುವ 17 ಕಥೆಗಳಿಗೆ ತಲಾ 2000 ರೂಪಾಯಿ ಗೌರವಧನ ನೀಡಲಾಗುವುದು. ಈ ಎಲ್ಲಾ 25 ಕಥೆಗಳ ಹಕ್ಕುಸ್ವಾಮ್ಯ ಕಥೆಗಾರರು ಮತ್ತು ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇಬ್ಬರಿಗೂ ಜಂಟಿಯಾಗಿ (ಶೇಕಡಾ 50) ಸೇರಿರುತ್ತದೆ.
  13. ಒಬ್ಬರು ಒಂದು ಕಥೆಯನ್ನು ಮಾತ್ರ ಕಳಿಸಬೇಕು. ಕಾದಂಬರಿ ಸ್ಪರ್ಧೆಗೆ ಪುಸ್ತಕ ಕಳುಹಿಸಿದವರೂ ಕೂಡ ಕಥೆಗಳನ್ನು ಕಳುಹಿಸಬಹುದು.
  14. ಕಥೆಗಳನ್ನು ಈ-ಮೇಲ್ ಮೂಲಕ (ನುಡಿ/ಯೂನಿಕೋಡ್ ಫಾಂಟ್ ಬಳಸಿ ಟೈಪ್ ಮಾಡಿದ ಪ್ರತಿ) bbks2023@bookbrahma.com ಅಥವಾ ಹಸ್ತಪ್ರತಿಯನ್ನು ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ ಕನ್ನಡ, ಮೂರನೇ ಮಹಡಿ, ಆರ್ ಕೆ ಕಾಂಪ್ಲೆಕ್ಸ್ ಕೆಎಸ್ಎಸ್ಐಡಿಸಿ ಕಾಂಪೌಂಡ್, ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತ, ಬೆಂಗಳೂರು-560100 ಕ್ಕೆ ಕಳುಹಿಸಿಕೊಡಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 78926 08118

ಇದನ್ನೂ ಓದಿ: Vistara Kathaspardhe: ಇದು ಪ್ಯಾನ್‌ ಇಂಡಿಯಾ ಸ್ಪರ್ಧೆಯಾಗಲಿ: ವಿಸ್ತಾರ ನ್ಯೂಸ್‌ ಕಥಾಸ್ಪರ್ಧೆಗೆ ಸಾಹಿತ್ಯಲೋಕ ಮೆಚ್ಚುಗೆ

Exit mobile version