Site icon Vistara News

Ram Mandir: ನಾಳೆ ಭಾರತೀಯರಿಗೆ ಸುದಿನ; ಈಡೇರಲಿದೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಕ್ಷಣ!

Ram Mandir

Ayodhya Ram Mandir Pran Pratishtha: What Are the rituals today, timings, aarti

ಬೆಂಗಳೂರು: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ (Ram Mandir) ಪ್ರಾಣ ಪ್ರತಿಷ್ಠಾಪನೆ (Pran Pratishtha) ಜ.22ರ ಸೋಮವಾರ ಮಧ್ಯಾಹ್ನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಪ್ರತಿಷ್ಠಾಪನೆಯ ಮುಖ್ಯ ಯಜಮಾನರಾಗಿದ್ದು, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಡಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ. ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಪೂರ್ಣಗೊಳಿಸಲಾಗಿದ್ದು, ಆಹ್ವಾನಿತ ಗಣ್ಯ ಮಾನ್ಯರು ಭಾನುವಾರದಿಂದಲೇ ಅಯೋಧ್ಯೆಗೆ ಬಂದಿಳಿಯುತ್ತಿದ್ದಾರೆ.

ಸೋಮವಾರ ಮಧ್ಯಾಹ್ನ 12.20 ಕ್ಕೆ ಪ್ರತಿಷ್ಠಾಪನಾ ಸಮಾರಂಭ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಸಮಾರಂಭದ ಕೆಲವು ಆಚರಣೆಗಳು ಜನವರಿ 16 ರಂದು, ಪ್ರಾಣ-ಪ್ರತಿಷ್ಠಾಪನೆಗೆ ಒಂದು ವಾರ ಮೊದಲು ಪ್ರಾರಂಭವಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಗಣ್ಯರು ಭಾಗವಹಿಸಲಿರುವ ಈ ಮೆಗಾ ಕಾರ್ಯಕ್ರಮಕ್ಕೆ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಡೀ ಅಯೋಧ್ಯೆ ನಗರದ ಮೇಲೆ ಭದ್ರತಾ ಪಡೆಗಳು ಕಣ್ಗಾವಲು ಇಟ್ಟಿದೆ.

ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಅಯೋಧ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಹೀಗಾಗಿ ಏಕಾಏಕಿ ಅಯೋಧ್ಯೆಗೆ ಬರಬೇಡಿ ಎಂದು ಟ್ರಸ್ಟ್​​ ಮನವಿ ಮಾಡಿದೆ. ವರ್ಚುವಲ್ ಮೂಲಕ ನೋಡುವಂತೆ ಸಲಹೆ ನೀಡಿದೆ. ಈ ಭವ್ಯ ಕಾರ್ಯಕ್ರಮವನ್ನು ದೇಶದ ವಿವಿಧ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಹೇಳಿದೆ.

ಜ.21 ಭಾನುವಾರ ರಾಮ್ ಲಲ್ಲಾ ವಿರಾಜ್​ಮಾನ್​​ ಮೂಲ ವಿಗ್ರಹವನನು ಶಯನ ಆರತಿಯ ಬಳಿಕ ನೂತನ ರಾಮ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಹನುಮಂತ, ಸಹೋದರರಾದ ಲಕ್ಷ್ಮಣ, ಶತ್ರುಘ್ನ ಮತ್ತು ಭರತನ ಮೂಲ ವಿಗ್ರಹಗಳೂ ದೇವಾಲಯಕ್ಕೆ ಸ್ಥಳಾಂತರವಾದವು. ಅಂದ ಹಾಗೆ ರಾಮ ಮಂದಿರ ವಿವಾದದಲ್ಲಿ ಕೋರ್ಟ್​ ಕೇಸ್​ ಗೆದ್ದಿದ್ದು ಇದೇ ರಾಮ ಲಲ್ಲಾ ವಿರಾಜ್​ಮಾನ್​. ಆ ಮೂರ್ತಿಯ ಬದಲಿಗೆ ಇದೀಗ ಕನ್ನಡಿಗ ಅರುಣ್​ ಯೋಗಿರಾಜ್ ಕೆತ್ತಿರುವ 51 ಇಂಚು ಎತ್ತರದ ಹೊಸ ರಾಮ ಲಲ್ಲಾ ಅವರ ಹೊಸ ವಿಗ್ರಹವನ್ನು ರಾಮ ದೇವಾಲಯದ ಗರ್ಭಗೃಹದೊಳಗೆ (ಗರ್ಭಗುಡಿ) ಪೀಠದ ಮೇಲೆ ಸ್ಥಾಪಿಸಲಾಗಿದೆ. ಈ ವಿಗ್ರಹಕ್ಕೆ ಈಗ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ರಾಮಮಂದಿರದಲ್ಲಿ 5 ಗಂಟೆ ಕಳೆಯಲಿರುವ ಮೋದಿ

ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಗುಲದಲ್ಲಿ 5 ಗಂಟೆ ಕಳೆಯಲಿದ್ದಾರೆ. ಈ ವೇಳೆ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ದೇಗುಲದ ಉದ್ಘಾಟನೆಯ ವೇಳಾಪಟ್ಟಿ ಹೀಗಿದೆ…

ಬೆಳಗ್ಗೆ 10.25: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
10.55: ರಾಮಜನ್ಮಭೂಮಿ ಆವರಣ ತಲುಪಲಿರುವ ಹೆಲಿಕಾಪ್ಟರ್‌
ಬೆಳಗ್ಗೆ 11ರಿಂದ ಮಧ್ಯಾಹ್ನ 12: ರಾಮಮಂದಿರದ ವೀಕ್ಷಣೆ ಮಾಡಲಿರುವ ಪ್ರಧಾನಿ
ಮಧ್ಯಾಹ್ನ 12.05-12.55: ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ. ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ.
ಮಧ್ಯಾಹ್ನ 1-2: ಸಾರ್ವಜನಿಕ ಭಾಷಣ ಮಾಡಲಿರುವ ನರೇಂದ್ರ ಮೋದಿ, ಮೋಹನ್‌ ಭಾಗವತ್‌, ಯೋಗಿ ಆದಿತ್ಯನಾಥ್‌
ಮಧ್ಯಾಹ್ನ 2.10: ರಾಮಜನ್ಮಭೂಮಿ ಆವರಣದಲ್ಲಿರುವ ಶಿವ ಮಂದಿರಕ್ಕೆ ಭೇಟಿ, ವಿಶೇಷ ಪ್ರಾರ್ಥನೆ
ಮಧ್ಯಾಹ್ನ 3.30: ಅಯೋಧ್ಯೆಯಿಂದ ಪ್ರಧಾನಿ ನಿರ್ಗಮನ

ಬೆಳಗ್ಗೆ 6.30ರಿಂದಲೇ ಕಾರ್ಯಕ್ರಮ ಆರಂಭ

ಸೋಮವಾರ ರಾಮಮಂದಿರದಲ್ಲಿ ಬೆಳಗ್ಗೆ 6.30ರಿಂದಲೇ ಧಾರ್ಮಿಕ ವಿಧಿವಿಧಾನಗಳು ಶುರುವಾಗಲಿವೆ. ಬೆಳಗ್ಗೆ 6.30ಕ್ಕೆ ರಾಮಲಲ್ಲಾ ಮೂರ್ತಿಗೆ ಶೃಂಗಾರ ಅಥವಾ ಜಾಗರಣ ಆರತಿ ಬೆಳಗಲಾಗುತ್ತದೆ. ಇನ್ನು 7 ಗಂಟೆಯಿಂದಲೇ ರಾಮನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ರಾಮಮಂದಿರ ಟ್ರಸ್ಟ್‌ ನೀಡಿರುವ ಪಾಸ್‌ಗಳ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಭಕ್ತರು ದೇವಾಲಯ ಪ್ರವೇಶಿಸಿ ಬೆಳಗ್ಗೆ 7 ಗಂಟೆಯಿಂದ 11.30ರವರೆಗೆ ರಾಮನ ದರ್ಶನ ಪಡೆಯಬಹುದಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರತಿ ನಡೆಯಲಿದೆ.

ನೇರ ಪ್ರಸಾರವನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?

ಉತ್ತರ ಪ್ರದೇಶದ ದೇವಾಲಯ ಪಟ್ಟಣದಲ್ಲಿ ಪ್ರತಿಷ್ಠಾಪನಾ ಸಮಾರಂಭವನ್ನು ದೇಶಾದ್ಯಂತ ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿನ ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಎಲ್ಲ ಚಾನೆಲ್​ಗಳು​ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಬಹುದು. ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ. ಮಧ್ಯಾಹ್ನದಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಮಾರಂಭವನ್ನು ದೂರದರ್ಶನ ಚಾನೆಲ್ ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಪ್ರತಿಷ್ಠಾಪನಾ ಸಮಾರಂಭದ ನೇರ ಪ್ರಸಾರಕ್ಕಾಗಿ, ರಾಷ್ಟ್ರೀಯ ಪ್ರಸಾರಕರು ಹೊಸ ರಾಮ್ ದೇವಾಲಯ ಸಂಕೀರ್ಣ ಸೇರಿದಂತೆ ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ 40 ಕ್ಯಾಮೆರಾಗಳನ್ನು ಸ್ಥಾಪಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ.

ಶೃಂಗಾರಗೊಂಡು, ಸಜ್ಜಾದ ರಾಮ ಮಂದಿರ

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನಾ ದಿನ ದೇವಸ್ಥಾನವನ್ನು ಹೂವುಗಳಿಂದ ಸಿಂಗರಿಸಲಾಗಿದೆ. ಅದೇ ರೀತಿ ದೀಪಾಲಂಕಾರದ ಮೂಲಕವೂ ದೇಗುಲದ ಸೌಂದರ್ಯವನ್ನು ನೂರ್ಮಡಿಗೊಳಿಸಲಾಗಿದೆ. ಶತಕೋಟಿ ಭಾರತೀಯರ ಕನಸಾಗಿರುವ ಈ ರಾಮ ಮಂದಿರ ಉದ್ಘಾಟನೆ ವೇಳೆ ಹೇಗೆ ಸಿಂಗಾರಗೊಂಡಿರಬಹುದು ಎಂಬ ಕೌತುಕವನ್ನು ತಣಿಸಲು ರಾಮಮಂದಿರ ಟ್ರಸ್ಟ್​​ನವರು ಕೆಲವೊಂದು ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಪ್ರಾಣ ಪ್ರತಿಷ್ಠಾಪನೆ ಎಂದರೇನು?

ಪ್ರಾಣ ಪ್ರತಿಷ್ಠಾಪನೆ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ. ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯ ಮೊದಲು ವಿಗ್ರಹಕ್ಕೆ ಯಾವುದೇ ವಿಶೇಷ ಶಕ್ತಿ ಇರುವುದಿಲ್ಲ ಎನ್ನಲಾಗಿದೆ. ಪ್ರಾಣ ಪ್ರತಿಷ್ಠಾನದ ಮೂಲಕ ವಿಗ್ರಹಕ್ಕೆ ವಿಶೇಷ ಶಕ್ತಿಗಳನ್ನು ತುಂಬಲಾಗುತ್ತದೆ. ಬಳಿಕವೇ ವಿಗ್ರಹ ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ಪ್ರಕ್ರಿಯೆಯ ನಂತರ ಭಕ್ತರು ಈ ವಿಗ್ರಹಗಳನ್ನು ಪೂಜಿಸಬಹುದು ಎಂದು ನಂಬಲಾಗಿದೆ.

ಈ ಸುದ್ದಿಯನ್ನೂ ಓದಿ: Ram Mandir: ರಾಮ ಮಂದಿರ ಸ್ಫೋಟದ ಬೆದರಿಕೆ! ದಾವೂದ್ ಇಬ್ರಾಹಿಂ ಸಹಚರನೆಂದು ಹೇಳಿಕೊಂಡಿದ್ದ ಯುವಕ ಅರೆಸ್ಟ್

Exit mobile version