Site icon Vistara News

Bigg Boss Kannada | ರೂಪೇಶ್‌ ನನ್ ಹುಡ್ಗ ಅಂದ್ರು ನಂದಿನಿ; ಸೀರಿಯಸ್‌ ಆದ್ರು ರಾಕೇಶ್‌!

Bigg Boss Kannada

ಬೆಂಗಳೂರು: ರೂಪೇಶ್‌ ನನ್ನ ಮತ್ತು ಸಾನ್ಯ ಹುಡುಗ ಎಂದು ನಂದಿನಿ ನೀಡಿದ್ದ ಹೇಳಿಕೆಯು ಪ್ರತಿಸ್ಪರ್ಧಿ ರಾಕೇಶ್‌ ಅಡಿಗರನ್ನು ಕೆರಳಿಸಿದ್ದು, ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಈ ಮೂಲಕ ಬಿಗ್‌ಬಾಸ್‌ (Bigg Boss Kannada) ಮನೆ ರಂಗೇರಿದೆ.

ಬಿಗ್‌ಬಾಸ್‌ ಒಟಿಟಿ ಕನ್ನಡದಲ್ಲಿ (Bigg Boss Kannada) ಮೂರನೇ ವಾರ ಉದಯ್‌ ಸೂರ್ಯ ಅವರು ಮನೆಯಿಂದ ಹೊರ ಬಂದಿದ್ದಾರೆ. ಈ ವಾರ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಟಾಸ್ಕ್‌ ನೀಡಲು ಶುರು ಮಾಡಿದ್ದು, ಸೋಮಣ್ಣ ಮಾಚಿಮಾಡ ಅವರ ಕ್ಯಾಪ್ಟನ್‌ಶಿಪ್‌ನಲ್ಲಿ ಆಟಗಳು ನಡೆಯುತ್ತಿವೆ. ಇದೇ ವೇಳೆ ಟಾಸ್ಕ್‌ ಬಳಿಕ ನಂದಿನಿ ಆಡಿರುವ ಮಾತುಗಳು ಸಹಸ್ಪರ್ಧಿಗಳಾದ ರಾಕೇಶ್‌, ಚೈತ್ರ ಹಾಗೂ ಜಯಶ್ರೀ ಅವರನ್ನು ಕೆರಳಿಸುವಂತೆ ಮಾಡಿದೆ.

ಎರಡು ತಂಡಗಳ ಜಟಾಪಟಿ
ಬಿಗ್‌ಬಾಸ್‌ ಮನೆಯ ಟಾಸ್ಕ್‌ನಲ್ಲಿ ಎರಡು ತಂಡಗಳನ್ನಾಗಿ ವಿಂಗಡಿಸಲಾಗಿದೆ. ಒಂದು ತಂಡದಲ್ಲಿ ಚೈತ್ರಾ, ರೂಪೇಶ್‌, ರಾಕೇಶ್‌ ಅಡಿಗ, ಜಯಶ್ರೀ ಮತ್ತು ಸೋನು ಇದ್ದರೆ, ಇನ್ನೊಂದು ತಂಡದಲ್ಲಿ ನಂದಿನಿ, ಅಕ್ಷತಾ ಕುಕ್ಕಿ, ಜಶ್ವಂತ್‌, ಸಾನ್ಯ ಮತ್ತು ಆರ್ಯವರ್ಧನ್‌ ಗುರೂಜಿ ಇದ್ದಾರೆ. ಮೊದಲ ತಂಡದಲ್ಲಿ ಜಯಶ್ರೀ ಕ್ಯಾಪ್ಟನ್‌ಶಿಪ್‌ ತೆಗೆದುಕೊಂಡಿದ್ದು, ಅವರ ತಂಡ ಬಾಲ್‌ ಟಾಸ್ಕ್‌ನಲ್ಲಿ ಗೆದ್ದಿದೆ. ಗೆದ್ದ ನಂತರ ಜಯಶ್ರೀ ತಂಡಕ್ಕೆ ಹಾಗೂ ಎದುರಾಳಿ ತಂಡಕ್ಕೆ ಸಖತ್‌ ವಾರ್‌ ಆಗಿದೆ. ಜಯಶ್ರೀ ಅವರು ನಂದಿನಿ ಹೇಳಿಕೆಯ ವಿಚಾರವಾಗಿ ಗಲಾಟೆ ಎಬ್ಬಿಸಿದ್ದಾರೆ.

Bigg Boss Kannada

ಏನಿದು ವಿಚಾರ?
ನಂದಿನಿ ಅವರು ರೂಪೇಶ್‌ ವಿಚಾರವಾಗಿ ʻʻನಿಮ್ಮ ತಂಡ ನಮ್ಮ ಹುಡುಗನಿಂದ (ರೂಪೇಶ್‌) ಗೆದ್ದಿದೆʼʼ ಎಂದು ಜಯಶ್ರೀ ಮುಂದೆ ಹೇಳಿದ್ದಾರೆ. ಜಯಶ್ರೀ ಅವರು ಈ ವಿಚಾರವನ್ನು ಅವರ ತಂಡದ ಮುಂದೆ ಹೇಳಿಕೊಂಡಿದ್ದಾರೆ. ರಾಕೇಶ್‌ ಮತ್ತು ಚೈತ್ರಾ ಈ ಬಗ್ಗೆ ಗರಂ ಆಗಿದ್ದು ರಾಕೇಶ್‌ ಅವರು ನಂದಿನಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನಂದಿನಿ ಜತೆ ರಾಕೇಶ್‌ ಮಾತನಾಡಿ ʻʻಟಾಸ್ಕ್‌ ನಡೆಯುವಾಗ ರೂಪೇಶ್‌ ಅವರನ್ನು ನಮ್ಮ ಹುಡುಗ ಎಂದಿದ್ದು ತಪ್ಪು. ನಾಮಿನೇಷನ್‌ ಸಮಯದಲ್ಲಿ ಫನ್‌ ಮಾಡುವುದು ಸರಿಯಲ್ಲ. ನಿಮ್ಮ ಈ ಹೇಳಿಕೆ ಫೇವರಿಸಮ್‌ಗೆ ನಾಂದಿ ಹಾಡಿದಂತಿದೆʼʼ ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ನಂದಿನಿ, ʻʻರೂಪೇಶ್‌ ಅವರು ನನ್ನ ಮತ್ತು ಸಾನ್ಯಳ ಹುಡುಗ ಎಂದು ತಮಾಷೆಗೆ ಈ ರೀತಿ ಹೇಳಿದೆ. ಇದರಲ್ಲಿ ತಪ್ಪೇನಿದೆ? ಈ ಮನೆಯಲ್ಲಿ ಅಷ್ಟೂ ಸ್ವಾತಂತ್ರ್ಯ ಇಲ್ಲವಾ?ʼʼ ಎಂದು ಕೂಗಾಡಿದ್ದಾರೆ.

ಇದನ್ನೂ ಓದಿ | Bigg Boss Kannada | ಲೂಸ್‌ ಟಾಕ್‌, ಅಪ್ಪುಗೆ; ಬಿಗ್‌ ಬಾಸ್‌ ಮನೆಯಿಂದ ಉದಯ್‌ ಸೂರ್ಯ ಹೊರಗೆ?

Bigg Boss Kannada

ಚೈತ್ರಾ ನಡುವೆ ನಂದಿನಿ ಕಿರಿಕ್‌
ಚೈತ್ರಾ ಕೂಡ ಪ್ರತ್ಯೇಕವಾಗಿ ನಂದಿನಿ ಜತೆ ಈ ವಿಚಾರವಾಗಿ ಮಾತನಾಡಿ, ʻʻನೀವು ಈ ರೀತಿ ಹೇಳಿಕೆ ನೀಡಿದ್ದು ತಪ್ಪು. ತಂಡದಲ್ಲಿ ವೈಮನಸ್ಸು ಮೂಡುತ್ತದೆʼʼ ಎಂದಿದ್ದಾರೆ. ನಂದಿನಿ ಮಾತನಾಡಿ ʻʻನಾನು ತಮಾಷೆಗಾಗಿ ಹೇಳಿದ್ದೇನೆ. ಆ ನನ್ನ ಹೇಳಿಕೆಯನ್ನು ಜಯಶ್ರೀ ಅವರು ನಿಮ್ಮೆಲ್ಲರ ಮುಂದೆ ಹೀಗೆ ಹೇಳಿರುವುದು ತಪ್ಪು. ಏನಿದ್ದರೂ ನನ್ನ ಮುಂದೆ ಹೇಳಬೇಕಿತ್ತು. ಇಷ್ಟು ದೊಡ್ಡದು ಮಾಡಬೇಕಾಗಿರಲಿಲ್ಲʼʼ ಎಂದು ಸಮರ್ಥಿಸಿಕೊಂಡರು.

Bigg Boss Kannada

ಒಟ್ಟಿನಲ್ಲಿ ರೂಪೇಶ್‌ ವಿಚಾರದ ಹೇಳಿಕೆಗೆ ಎರಡೂ ತಂಡದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಇನ್ನು ಜಯಶ್ರೀ ತಂಡ ಗೆದ್ದಿದ್ದಕ್ಕೆ ಗುರೂಜಿ ಅವರು ತಮ್ಮ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಚೈತ್ರಾ ಅವರು ನೀಲಿ ಬಣ್ಣದ ಬಟ್ಟೆ ಮತ್ತು ಜಯಶ್ರೀ ಅವರು ಬಿಳಿ ಬಣ್ಣದ ಬಟ್ಟೆ ಧರಿಸಿದ್ದಕ್ಕೆ ಅವರಿಗೆ ಅದೃಷ್ಟ ಒಲಿದಿದೆ ಎಂದು ಹೇಳಿದ್ದಾರೆ. ಈ ಮಾತು ಕೂಡ ಜಯಶ್ರೀ ಅವರು ಮನೆಯವರ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ಟಾಸ್ಕ್‌ಗಳಲ್ಲಿ ಎರಡೂ ತಂಡದ ತೋಳ್ಬಲದ ಶಕ್ತಿಯಲ್ಲಿ ಯಾರು ಗೆಲ್ಲಲ್ಲಿದ್ದಾರೆ ಎಂಬುದು ನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಸೋನು ಗೌಡರ ಟೊಮ್ಯಾಟೋ ಗೊಜ್ಜು!

Exit mobile version