Site icon Vistara News

BBK Season 10: ‘ಕಥಾ ಸಂಗಮ’ದಲ್ಲಿ ದಾರಿ ತಪ್ಪಿದ ಸ್ಪರ್ಧಿಗಳು; ಹೇಗಿತ್ತು ಫನ್‌ ಫ್ರೈಡೇ?

Vinay Gowda Fun Friday

ಬೆಂಗಳೂರು: ವಾರವಿಡೀ ಟಫ್‌ ಟಾಸ್ಕ್‌ಗಳನ್ನು (BBK Season 10) ಆಡಿ ಒತ್ತಡದಲ್ಲಿ ನಲುಗಿದ ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳಿಗೆ ‘ಫನ್‌ ಫ್ರೈಡೆ’ ಟಾಸ್ಕ್ ಬಂತಂದ್ರೆ ಖುಷಿ. ಯಾಕಂದ್ರೆ ಇದು ಸಖತ್ ಫನ್, ಎಂಟರ್‌ಟೇನಿಂಗ್ ಆಗಿರುತ್ತದೆ ಅಂತ. ಹಾಗಂತ ಇದನ್ನು ಲಘುವಾಗಿಯೂ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ ಇದೂ‌ ಸ್ಪರ್ಧಿಗಳ ವ್ಯಕ್ತಿತ್ವ, ಪ್ರತಿಭೆಯನ್ನು ಜನರ ಎದುರಿಗೆ ತೆರೆದಿಟ್ಟು ಅವರು ಸ್ಪರ್ಧಿಗಳ ಕುರಿತು ಒಂದು ಅಭಿಪ್ರಾಯ ರೂಪಿಸಿಕೊಳ್ಳುವಂತೆ ಮಾಡುತ್ತಿರುತ್ತದೆ. ಜತೆಗೆ ಈ ಟಾಸ್ಕ್‌ನಲ್ಲಿ ಗೆದ್ದವರಿಗೆ ಜಿಯೋ ಸಿನಿಮಾ ವತಿಯಿಂದ ಐದು ಸಾವಿರ ರೂಪಾಯಿ ಉಡುಗೊರೆ ಕೂಪನ್ ಕೂಡ ನೀಡಲಾಗುತ್ತದೆ. ಈ ವಾರದ ಜಿಯೋ ಸಿನಿಮಾ ಫನ್‌ ಫ್ರೈಡೇ’ ಕೂಡ ಅಷ್ಟೇ ಮಜವಾಗಿತ್ತು. ಟಾಸ್ಕ್‌ ಹೆಸರು ‘ಕಥಾ ಸಂಗಮ’

ಹೇಗಿತ್ತು ಟಾಸ್ಕ್‌?

ಇದರ ಅನುಸಾರ ಎಲ್ಲ ಸದಸ್ಯರೂ ಒಂದೊಂದು ಫಲಕ ಹಿಡಿದುಕೊಂಡು, ವೇದಿಕೆಯ ಮುಂದೆ ಸಾಲಾಗಿ ಕುಳಿತುಕೊಳ್ಳಬೇಕು. ಫಲಕ ಸಿಗದಿರುವ ಒಬ್ಬ ಸದಸ್ಯ ವೇದಿಕೆಗೆ ಬಂದು ಕಥೆ ಹೇಳಲು ಆರಂಭಿಸಬೇಕು. ಈ ಸಂದರ್ಭದಲ್ಲಿ ವೇದಿಕೆಯ ಮುಂದೆ ಇರುವ ಸದಸ್ಯರು, ಒಬ್ಬ ಸದಸ್ಯನ ನಂತರ ಇನ್ನೊಬ್ಬ ಸದಸ್ಯರು ಫಲಕಗಳನ್ನು ತೋರಿಸುತ್ತ ಆದಷ್ಟೂ ಕಥೆಯ ದಿಕ್ಕು ತಪ್ಪಿಸಲು ಯತ್ನಿಸಬೇಕು. ಕಥೆ ಹೇಳುತ್ತಿರುವ ಸದಸ್ಯ, ಆ ಫಲಕದಲ್ಲಿ ಬರೆದಿರುವ ಶಬ್ದಗಳನ್ನು ತನ್ನ ಕಥೆಗೆ ಅಳವಡಿಸಿಕೊಂಡು, ಕಥೆಯನ್ನು ಮುಂದುವರಿಸಬೇಕು. ಕಥೆ ಹೇಳುವ ಸದಸ್ಯರಿಗೆ ಗರಿಷ್ಠ ಮೂರು ಬಾರಿ ಮಾತ್ರ ಅನ್ಯ ಭಾಷೆಯ ಶಬ್ದಗಳನ್ನು ಬಳಸುವ ಅವಕಾಶವಿದೆ. ಪ್ರತಿ ಸದಸ್ಯನಿಗೆ ಕಥೆ ಹೇಳಲು ಎರಡು ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಎಲ್ಲರೂ ಕಥೆ ಹೇಳಿಯಾದ ನಂತರ ಮನೆಯ ಸದಸ್ಯರೇ ಚರ್ಚಿಸಿ, ಅತ್ಯುತ್ತಮವಾಗಿ ಕಥೆ ಹೇಳಿದ ಒಬ್ಬರನ್ನು ಆರಿಸಬೇಕು.

ಮೊದಲು ಕಥೆ ಹೇಳಲು ನಿಂತವರು ವಿನಯ್

‘ಒಂದೂರಲ್ಲಿ ಇಬ್ರು ಹುಡುಗ ಹುಡುಗಿ ಇರ್ತಾರೆ..’ ಎಂದು ಹೇಳುತ್ತಿದ್ದ ಹಾಗೆಯೇ ನಮ್ರತಾ, ‘ಇಷ್ಟೇ ಜೀವನ’ ಎಂಬ ಫಲಕವನ್ನು ಎತ್ತಿಹಿಡಿದರು. ವಿನಯ್ ಆ ಶಬ್ದವನ್ನು ಅಳವಡಿಸಿಕೊಂಡೇ ಕಥೆ ಮುಂದುವರಿಸಬೇಕಲ್ಲ, ಹಾಗಾಗಿ, ‘ಆ ಹುಡುಗ, ಹುಡುಗಿಯ ಬಳಿ ಹೇಳ್ತಾನೆ, ಇಷ್ಟೇ ಜೀವನ ಚಿನ್ನಾ’ ಅಷ್ಟರಲ್ಲಿ ‘ಕೊತ್ತಮರಿ ಸೊಪ್ಪು’ ಎಂಬ ಇನ್ನೊಂದು ಫಲಕ ತಲೆ ಎತ್ತಿತ್ತು. ವಿನಯ್ ಕಥೆ ಮುಂದುವರಿಸಿದರು. ‘ಕೊತ್ತಮರಿ ಸೊಪ್ಪು ತಗೊಂಬಾ ಅಂದ್ರೆ ಇಷ್ಟೇ ಜೀವನ ಅಂತಿದಿಯಲ್ಲಾ ಎಂದು ಹುಡುಗಿ ಹುಡುಗನಿಗೆ ಹೇಳ್ತಾಳೆ. ನಂತರ, ‘ಚರಂಡಿ’, ‘ನಮಗ್ಯಾರು ಬೀಳ್ತಾರೆ’, ‘ಮದ್ವೆ ಯಾವಾಗ’, ‘ತುಕಾಲಿ’, ‘ಓ ಭ್ರಮೆ’ ‘ಈ ಸಲ ಕಪ್ ನಮ್ದೆ’, ‘ಕಾಡಲ್ಲಿ ಸಿಕ್ಕ ಸೊಪ್ಪು’ ಹೀಗೆ ಒಂದರ ಹಿಂದೆ ಇನ್ನೊಂದು ಒಂದಕ್ಕೊಂದು ಸಂಬಂಧವೇ ಇಲ್ಲದಂಥ ಪದಗಳನ್ನು ಹೊತ್ತ ಫಲಕಗಳು ಏಳುತ್ತಲೇ ಇದ್ದವು. ವಿನಯ್‌, ಕಥೆಯನ್ನು ಬೆಳೆಸುವುದನ್ನು ಬಿಟ್ಟು ಈ ಪದಗಳ ಹಿಂದೆ ಬಿದ್ದು ತಾವೇ ದಾರಿ ತಪ್ಪಿಯಾಗಿತ್ತು.

ಇದನ್ನೂ ಓದಿ: BBK Season 10: ಸ್ಪರ್ಧಿಗಳ ಕಪಾಳಕ್ಕೆ ಹೊಡೆದಂತೆ ಇತ್ತು ಪ್ರೇಕ್ಷಕರ ಗಿಫ್ಟ್‌; ಚಮಚ, ಉಪ್ಪಿನಕಾಯಿ, ರಿಟರ್ನ್ ಟಿಕೆಟ್ ಯಾರಿಗೆ?

ಇದು ಬರೀ ವಿನಯ್ ಕಥೆ ಅಷ್ಟೇ ಅಲ್ಲ, ಎಲ್ಲ ಸ್ಪರ್ಧಿಗಳ ಪಾಡೂ ಇದೇ! ಯಾಕೆಂದರೆ ಆ ಟಾಸ್ಕೇ ಹಾಗಿತ್ತು. ಆದರೆ ಕಥೆ ಹೇಳುವವರು ಕಥೆಯ ದಾರಿ ತಪ್ಪಿಸಿಕೊಂಡು ಪರದಾಡುವುದನ್ನು ನೋಡುವುದು ಮತ್ರ ಬಲು ಮಜವಾಗಿತ್ತು.
ರಕ್ಷಕ್‌, ಸಿನಿಮಾ ಡೈಲಾಗ್‌ ಸ್ಟೈಲಿನಲ್ಲೇ ಕಥೆ ಹೇಳಲು ಹೊರಟರೆ, ಸ್ನೇಹಿತ್, ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ…’ ಎಂದು ಶುರುಮಾಡಿ ರಾಜನನ್ನು ತುಕಾಲಿಯ ಜೊತೆಗೆ ಸೇರಿಸಿ, ಚರಂಡಿ ಯೋಜನೆ ಮಾಡಿಸಿ, ಮದ್ವೆ ಯಾವಾಗ ಎಂದು ಕನವರಿಸುವಂತೆ ಮಾಡಿದರು. ಹಾಗೆ ನೋಡಿದರೆ ರಾಜನ ಕಥೆಯನ್ನು ಸ್ನೇಹಿತ್ ಚೆನ್ನಾಗಿಯೇ ಪದಗಳನ್ನು ಪೋಣಿಸಿದರು.

ಸಂಗೀತಾ ಕಥೆಯನ್ನು ಕಾಡಿನಲ್ಲಿಯೇ ಹುಟ್ಟಿಸಿದರು. ಕಾಡಿನಲ್ಲಿ ಹಣ್ಣುಗಳ ನಡುವಿನ ಮಾತುಕತೆಯನ್ನೇ ಒಂದು ಕಥೆಯಾಗಿಸಿದರು. ಬಾಳೆಹಣ್ಣು, ದ್ರಾಕ್ಷಿ, ಸೇಬುಗಳ ನಡುವಿನ ಮಾತುಕತೆಯಲ್ಲಿಯೇ ಹುಟ್ಟಿದ ಕಥೆ ಮಜವಾಗಿತ್ತು. ಆದರೆ ಮೂರಕ್ಕಿಂತ ಹೆಚ್ಚು ಇಂಗ್ಲಿಷ್‌ ಪದಗಳನ್ನು ಬಳಸಿದರು.

ಅವರ ನಂತರ ಕಥೆ ಕಟ್ಟಲು ಹೊರಟವರು ಮೈಕಲ್. ಅವರೂ ಕಾಡಿನ ಜಾಡನ್ನೇ ಹಿಡಿದರು. ಅವರ ಕಥೆಯ ನಾಯಕ ಕಾಡಿನಲ್ಲಿ ಕೋತಿ. ಆದರೆ ಕೋತಿ ಮರದಿಂದ ಮರಕ್ಕೆ ಹಾಡುವ ಹಾಗೆ ಮೈಕಲ್‌ ಕೂಡ ಪದದಿಂದ ಪದಕ್ಕೆ ಹಾರುತ್ತ ಹೊರಟ ದಾರಿಯನ್ನೇ ಮರೆತರು.

ತನಿಷಾ, ಮನೆಯ ಸದಸ್ಯರನ್ನೇ ಕಥೆಯ ಪಾತ್ರಗಳನ್ನಾಗಿಸಿಕೊಂಡು, ಅವರು ಎತ್ತಿಹಿಡಿದ ಪದಗಳ ಫಲಕಗಳನ್ನು ಅವರ ಹೆಸರಿನ ಪಾತ್ರಗಳಿಂದಲೇ ಹೇಳಿಸಿದರು. ತುಕಾಲಿ ಸಂತೋಷ್‌, ಕಥೆ ಕಟ್ಟುವ ವೇದಿಕೆಗೆ ಹೋಗುತ್ತಿದ್ದ ಹಾಗೆಯೇ ‘ಹುಚ್ಚ ವೆಂಕಟ್’ ಆಗಿ ಬದಲಾಗಿಬಿಟ್ಟಿದ್ದರು! ‘ನನ್ ಮಗಂದು…. ಕೊತ್ತುಂಬರಿ ಸೊಪ್ ಸಿಗ್ತದೆ ಅಂತ ಸೀದ ಹೋದೆ’ ಎಂದು ವೆಂಟಕ್ ಮಿಮಿಕ್ರಿ ಮಾಡುತ್ತಲೇ ಕಥೆಯನ್ನು ಕಟ್ಟಿದರು.

ಇದನ್ನೂ ಓದಿ: BBK Season 10: ಅವಳ್ಯಾರು ನನ್ನ ಡಾಮಿನೇಟ್‌ ಮಾಡೋಕೆ, ಬಾಯಿ ಮುಚ್ಚಲ್ಲ; ನಮ್ರತಾ-ತನಿಷಾ ಜಡೆ ಜಗಳ!

ಸಿರಿ ಕಾಡಿನಲ್ಲಿ ನಡೆದುಕೊಂಡು ಬೀಳುತ್ತಿರುವ ಚಿಕ್ಕ ಹುಡುಗಿಯ ಕಥೆಯನ್ನು ಹೇಳಿದರೆ, ನಮ್ರತಾ ಅವರು ‘ಅಮ್ಮ ಅಪ್ಪನ ಕಥೆಯನ್ನು ಹೇಳುತ್ತ ಹೇಳುತ್ತ ಕಳೆದುಹೋದರು. ಕಾರ್ತಿಕ್‌ಗೆ ಕುಡುಕನ ಕಥೆ ಹೇಳುವ ಉಮೇದು. ಆ ಕುಡುಕನಿಗೆ ತುಕಾಲಿ ಎಂದು ಅವರು ಹೆಸರಿಟ್ಟು ಕಥೆ ಕಟ್ಟಿದರು. ಇಶಾನಿ ‘ಒಂದು ರಾತ್ರಿ ಫಾರೆಸ್ಟ್‌ನಲ್ಲಿ…’ ಎಂದು ಇಂಗ್ಲಿಷ್ ಶಬ್ದದಿಂದಲೇ ಕಥೆ ಶುರುಮಾಡಿದರು. ನಂತರ ಕಥೆ ಬದಲಿಸಿಕೊಂಡು ಬೇರೆ ಹೇಳಬೇಕು ಎಂದು ಹೊರಟರೆ ಕಥೆ ಪೂರ್ತಿ ದಾರಿತಪ್ಪಿ ಹೋಗಿತ್ತು. ಒಂದೊಂದು ಸಾಲಿಗೂ ಅವರ ಪರದಾಡುತ್ತಿದ್ದರು. ಮಾತಿಗಿಂತ ನಗುವೇ ಜಾಸ್ತಿ ಇತ್ತು. ಪ್ರತಾಪ್‌ಗೂ ಕಥೆಯ ಡ್ರೋಣ್ ಸರಿಯಾಗಿ ಹಾರಿಸಲು ಸಾಧ್ಯವೇ ಆಗಲಿಲ್ಲ. ನೀತು ಇಲಿ-ಬೆಕ್ಕು ಕಥೆಯನ್ನು ಹೇಳಿದರು.

ಭಾಗ್ಯಶ್ರಿ ಹೇಳಿದ ಕಥೆ ಇಂಟರೆಸ್ಟಿಂಗ್ ಆಗಿತ್ತು. ಮೂವರು ಸ್ನೇಹಿತರ ಆ ಕಥೆ ಪದಗಳಿಂದ ದಾರಿ ತಪ್ಪದೇ ಸರಿಯಾಗಿಯೇ ಕಥೆ ಕಟ್ಟಿದರು. ಒಬ್ಬರಾದ ಮೇಲೆ ಇನ್ನೊಬ್ಬರು ಎತ್ತುತ್ತಿದ್ದ ಫಲಕಗಳಿಂದ ದಿಕ್ಕೆಡದೇ ತಾಳ್ಮೆಯಿಂದ ತಮ್ಮ ಕಥೆಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವ ಹಾಗೆ ಪದಗಳನ್ನು ತಮ್ಮ ಕಥೆಯಲ್ಲಿ ಸಹಜವೆನ್ನಿಸುವಂತೆ ಸೇರಿಸಿಕೊಂಡು ಕಥೆಯನ್ನು ಬೆಳೆಸಿಕೊಂಡು ಹೋದರು. ಅವರು ಕಥೆ ಹೇಳುವ ಶೈಲಿಗೆ ಸ್ಪರ್ಧಿಗಳು ಫಲಕಗಳನ್ನು ಎತ್ತುವುದನ್ನೂ ಮರೆತು ಕಥೆ ಕೇಳಲು ಶುರುಮಾಡಿದ್ದರು.

ಗೆದ್ದೋರು ಯಾರು?

ಎಲ್ಲರೂ ಕಥೆ ಹೇಳಿ ಮುಗಿಸದ ಮೇಲೆ ಎಲ್ಲರೂ ಸೇರಿ ಯಾರು ಚೆನ್ನಾಗಿ ಕಥೆ ಹೇಳಿದರು ಎಂಬುದನ್ನು ನಿರ್ಧರಿಸುವ ಹೊತ್ತು. ನೀತು ಎಲ್ಲ ಎಲ್ಲರ ಅಭಿಪ್ರಾಯ ಕೇಳಿದಾಗ ಬಹುತೇಕ ಎಲ್ಲರ ವೋಟ್‌ ಭಾಗ್ಯಶ್ರೀ ಅವರಿಗೆ ಬಿದ್ದಿತ್ತು. ಭಿನ್ನವಾದ ಅಭಿಪ್ರಾಯಕ್ಕೆ ಅವಕಾಶವೇ ಇಲ್ಲದ ಹಾಗೆ ಈವಾರದ ಜಿಯೋ ಸಿನಿಮಾ ಫನ್‌ ಫ್ರೃಡೇಯಲ್ಲಿ ಭಾಗ್ಯಶ್ರೀ ಗೆದ್ದಿದ್ದಾರೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version